ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿ ಆಗಿ ಉನ್ನತ ಸ್ಥಾನಕ್ಕೆ ಏರಲಿ ಎಂದು ಪ್ರಾರ್ಥಿಸಿ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸಂಯೋಜಕ ಆರ್. ಮೋಹನ್ ಅವರು ಮಂಗಳವಾರ ತಿರುಪತಿಗೆ ತೆರಳಿ ಕೇಶ ಮುಂಡನೆ ಮಾಡಿಸಿಕೊಂಡು ಪ್ರಾರ್ಥನೆ ಸಲ್ಲಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶಿವಕುಮಾರ್ ಅವರ ಪಾತ್ರ ಪ್ರಮುಖವಾಗಿದೆ. ಎಲ್ಲಾ ಜಾತಿ, ಧರ್ಮ, ಮತ ಮತ್ತು ಪಂಥದವರನ್ನು ಒಗ್ಗೂಡಿಸಿ ಸಂಘಟನಾತ್ಮಕವಾಗಿ ಕರೆದೊಯ್ಯುವ ಶಕ್ತಿ ಡಿಕೆಶಿ ಅವರಿಗಿದೆ. ಅವರು ಮುಖ್ಯಮಂತ್ರಿಯಾದಲ್ಲಿ ರಾಜ್ಯವು ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸುವುದು ನಿಶ್ಚಿತ.
ಡಿ.ಕೆ ಶಿವಕುಮಾರ್ ಅವರು ಕೇವಲ ಒಕ್ಕಲಿಗ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿಲ್ಲ. ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಶೋಷಿತ ಸಮುದಾಯದವರೂ ಸೇರಿದಂತೆ ಎಲ್ಲಾ ವರ್ಗದ ಸಾಮಾನ್ಯ ಕಾರ್ಯಕರ್ತರನ್ನು ಪಕ್ಷದಲ್ಲಿ ಮುಖ್ಯವಾಹಿನಿಗೆ ತಂದು ಮುಖಂಡರನ್ನಾಗಿ ಬೆಳೆಸಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ದೊರೆಯಲು ಕಾರಣರಾಗಿದ್ದಾರೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಪ್ರಾಪ್ತಿಯಾಗಲಿ ಎಂದು ಮೋಹನ್ ಆಶಯ ವ್ಯಕ್ತಪಡಿಸಿದ್ದಾರೆ.
ಡಿ.ಕೆ.ಶಿ ಅವರ ಕಟ್ಟಾ ಬೆಂಬಲಿಗರಾಗಿರುವ ಮೋಹನ್ ಅವರು ೨೦೦೧ರಲ್ಲಿ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘ ಸ್ಥಾಪಿಸಿ ಸಕ್ರಿಯವಾಗಿ ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳೆದ ಮೇ ೧೫ರಂದು ಡಿಕೆಶಿ ಅವರ ೬೫ನೇ ಜನ್ಮದಿನಾಚರಣೆ ಅಂಗವಾಗಿ ಭಾರತಕ್ಕೆ ಸೇವೆ ಸಲ್ಲಿಸಿದ ಹೆಮ್ಮೆಯ ಯೋಧರಿಗೆ ಗೌರವ ಸಮರ್ಪಣೆ ಹಾಗೂ ಪ್ರತಿಭಾ ಪುರಸ್ಕಾರ ನಡೆಸಿ ಗಮನ ಸೆಳೆದಿದ್ದರು.
ಜಾರಿ ನಿರ್ದೇಶನಾಲಯ (ಇ.ಡಿ) ೨೦೧೯ರಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾಗಲೂ ಸಹ ಮೋಹನ್ ಅವರು ತಿರುಪತಿಗೆ ತೆರಳಿ ಅವರ ಬಿಡುಗಡೆಗೆ ಪ್ರಾರ್ಥಿಸಿದ್ದರು.

