ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಯುವಕರು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ವೈಯಕ್ತಿಕ ಬೆಳವಣಿಗೆಗೆ ಮಾತ್ರವಲ್ಲದೆ, ಆರೋಗ್ಯಕರ ಮತ್ತು ಸಮೃದ್ಧ ಸಮಾಜದ ನಿರ್ಮಾಣಕ್ಕೂ ಅತ್ಯಗತ್ಯವಾಗಿದೆ ಎಂದು ಹೈಕೋರ್ಟ್ ನ ವಕೀಲರಾದ ಬಿ. ಸುರೇಶ್ ಗೌಡ ಹೇಳಿದರು.
ಶ್ರೀ ದೇವರಾಜ್ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಕನ್ನಡ ಭಾಷಾ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ರಿಬ್ಬನ್ ಕ್ಲಬ್, ಸಹಯೋಗದಲ್ಲಿ “ಯುವಕರು ಮತ್ತು ನೈತಿಕ ಮೌಲ್ಯಗಳು” ಎಂಬ ವಿಷಯದ ಕುರಿತು ಉಪನ್ಯಾಸ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಮನಸ್ಸುಗಳಲ್ಲಿ ನೈತಿಕ ಮೌಲ್ಯಗಳು ವ್ಯಕ್ತಿತ್ವವನ್ನು ರೂಪಿಸುವ ಅಡಿಪಾಯವಾಗಿದ್ದು, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಹಾಗೂ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕವಾಗುತ್ತವೆ, ಪೋಷಕರು ಮತ್ತು ಶಿಕ್ಷಕರು ಬಾಲ್ಯದಿಂದಲೇ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ, ಇದರಿಂದ ಯುವಕರು ಜವಾಬ್ದಾರಿಯುತ ನಾಗರೀಕರಾಗಿ ರೂಪುಗೊಳ್ಳುತ್ತಾರೆ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಡಾ. ಎಂ. ಚಿಕ್ಕಣ್ಣ ಮಾತನಾಡಿ, ಪ್ರಾಮಾಣಿಕತೆ, ಸಹಾನುಭೂತಿ, ಗೌರವ ಮತ್ತು ನಿಸ್ವಾರ್ಥತೆಯಂತಹ ನೈತಿಕ ಮೌಲ್ಯಗಳು ಯುವಕರ ವ್ಯಕ್ತಿತ್ವವನ್ನು ರೂಪಿಸುತ್ತವೆ. ನೈತಿಕ ಪ್ರಜ್ಞೆ ಯುವಕರಿಗೆ ಸರಿ-ತಪ್ಪಿನ ನಡುವಿನ ವ್ಯತ್ಯಾಸವನ್ನು ತಿಳಿಯಲು ಹಾಗೂ ಕಷ್ಟಕರ ಸಂದರ್ಭಗಳಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಇಂತಹ ಮೌಲ್ಯಗಳು ಯುವಕರಲ್ಲಿ ಜವಾಬ್ದಾರಿಯುತ ನಡವಳಿಕೆ, ಇತರರ ಬಗ್ಗೆ ಗೌರವ ಮತ್ತು ಸಮಾಜದ ಬಗ್ಗೆ ಕಾಳಜಿಯನ್ನು ಬೆಳೆಸುತ್ತವೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಎಸ್. ಗೌರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ನೈತಿಕ ಮೌಲ್ಯಗಳನ್ನು ಹೊಂದಿರುವ ಯುವಕರು ಆತ್ಮವಿಶ್ವಾಸದಿಂದ ವರ್ತಿಸುತ್ತಾರೆ. ಇದು ಅವರ ಶಿಕ್ಷಣ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ನೆರವಾಗುತ್ತದೆ, ಕಥೆಗಳು, ಉಪನ್ಯಾಸಗಳು ಮತ್ತು ನೈತಿಕ ಕತೆಗಳ ಮೂಲಕ ಮೌಲ್ಯಗಳನ್ನು ಬೋಧಿಸುವುದು ಪರಿಣಾಮಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಸಿ. ಪಿ. ಪ್ರಕಾಶ್, ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಚೈತ್ರ ಪಿ., ಪ್ರಾಧ್ಯಾಪಕರಾದ ಲಕ್ಷ್ಮೀಶ, ವೆಂಕಟೇಶ್, ದಿವ್ಯ, ಹಿಂದುಶ್ರೀ, ಬಾಬುಸಾಬಿ, ಶ್ರೀನಿವಾಸ್ ,ಇತರರು ಉಪಸ್ಥಿತರಿದ್ದರು.

