ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೃಹಲಕ್ಷ್ಮಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಜಾಕ್ ಪಾಟ್- ರಾಜ್ಯದ ಮಹಿಳೆಯರಿಗೆ ಮಡ್ ಪಾಟ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಕರ್ನಾಟಕದ ಜನರಿಗೆ ಮಂಕುಬೂದಿ ಎರೆಚಿ, ಕೈಯಲ್ಲಿ ಆಗಸ ತೋರಿಸುವುದರಲ್ಲಿ ನಿಸ್ಸಿಮರು. ಇದಕ್ಕೆ ತಾಜಾ ಉದಾಹರಣೆ- ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸ್ಕೀಮ್ “ಗೃಹಲಕ್ಷ್ಮಿ”. ನಿಜಕ್ಕೂ ಕಾಂಗ್ರೆಸ್ ಪಾರ್ಟಿಯ ಕಾರ್ಯಕರ್ತರಿಗೆ ಗೃಹಲಕ್ಷ್ಮಿ ವರದಾನ ಹಾಗೂ ವರಮಾನದ ಮೂಲವಾಗಿದೆ ಎಂದು ಕೇಂದ್ರ ಸಚಿವರು ದೂರಿದ್ದಾರೆ.
ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಟಕಾಟಕ್ ಟಕಾಟಕ್ ಅಂತಾ ಹಾಕೇಬಿಡ್ತೀವಿ ಅಂತಾ ಹೇಳಿದ ಕಾಂಗ್ರೆಸ್ ಪಕ್ಷ, ಮೂರು ತಿಂಗಳಿನಿಂದ ಹಣ ನೀಡದೆ, ತನ್ನ ಪಕ್ಷದ ಮುಖಂಡರು, ಗ್ಯಾರಂಟಿ ಅನುಷ್ಠಾನ ಸಮಿತಿಗೆ ಒಟ್ಟಿಗೆ 7.65 ಕೋಟಿ – ಐದು ತಿಂಗಳ ಮುಂಗಡ ಭತ್ಯೆ, ಸಂಬಳ, ಗೌರವಧನದ ಹಣವನ್ನು ಬಿಡುಗಡೆ ಮಾಡಿದೆ ಎಂದು ಜೋಶಿ ಅವರು ಆರೋಪಿಸಿದರು.
ರಾಜ್ಯದ ಮಹಿಳೆಯರನ್ನು ತನ್ನ ಮನೆಯ ಅಡಿಯಾಳು ಎನ್ನುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ಸಚಿವ ಸತೀಶ್ ಜಾರಕಿಹೊಳಿ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡದಿದ್ರೆ ಆಕಾಶ ಏನೂ ಕಳಚಿ ಬೀಳಲ್ಲ ಅಂತಾ ದುರಹಂಕಾರದ ಮಾತನ್ನು ಹೇಳುತ್ತಾರೆ.
1.25 ಕೋಟಿ ಫಲಾನುಭವಿ ಮಹಿಳೆಯರಿಗೆ ಮೂರು ತಿಂಗಳಿನಿಂದ ಅಂದಾಜು 7200 ಕೋಟಿ ಹಣ ಬಿಡುಗಡೆ ಮಾಡದೇ ಬಾಕಿ ಉಳಿಸಿಕೊಂಡಿದೆ ಎಂದು ಕೇಂದ್ರ ಸಚಿವರು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮಹಿಳೆಯರಿಗೆ ಹಣ ನೀಡಲು ಖಜಾನೆಯಲ್ಲಿ ದುಡ್ಡಿಲ್ಲ. ಆದರೆ, ಶ್ರೀ ಸಾಮಾನ್ಯನ ಮೇಲೆ ಹೊರೆಹಾಕಿ, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಮುಂಗಡವಾಗಿ ಹಣ ನೀಡುವ ಮೂಲಕ ಅವರನ್ನು ಸಾಕುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತವಲ್ಲವೇ? ಎಂದು ಪ್ರಹ್ಲಾದ್ ಜೋಶಿ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.