ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿರುವುದನ್ನು ವಿರೋಧಿಸಿ ಇಲ್ಲಿನ ದರ್ಜಿ ಕಾಲೋನಿಯಲ್ಲಿರುವ ಮಸ್ಜಿದೆ
ಗೌಸಿಯಾ ಆಜಾಮ್ ಮಸೀದಿ ಮುಂದೆ ಶುಕ್ರವಾರ ತೋಳಿಗೆ ಕಪ್ಪು ಪಟ್ಟಿ ಧರಿಸಿದ ನೂರಾರು ಮುಸ್ಲಿಂರು ಕೇಂದ್ರ ಸರ್ಕಾರದ ವಿರುದ್ದ ಮೌನ ಪ್ರತಿಭಟನೆ ನಡೆಸಿದರು.
ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಜಮಾಯಿಸಿದ ಮುಸ್ಲಿಂರು ವಕ್ಫ್ ತಿದ್ದುಪಡಿ ಮಸೂದೆಯ ಮೂಲಕ ಮುಸಲ್ಮಾನರ ಹಕ್ಕುಗಳನ್ನು ಮೊಟಕುಗೊಳಿಸುವ ಹುನ್ನಾರ ನಡೆಸುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದರು.
ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಚೇರ್ಮನ್ ಎಂ.ಸಿ.ಓ.ಬಾಬು ಮಾತನಾಡಿ ಉಭಯ ಸದನಗಳಲ್ಲಿ ಅಂಗೀಕರಿಸುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಕೂಡಲೆ ಹಿಂದಕ್ಕೆ ಪಡೆಯಬೇಕು. ವಕ್ಫ್ ಬೋರ್ಡ್ ಕಮಿಟಿಗಳಲ್ಲಿ ಹಿಂದುಗಳನ್ನು ಸೇರಿಸುವುದು. ವಕ್ಫ್ ಮಂಡಳಿ ಅಧಿಕಾರವನ್ನು ಸಂಪೂರ್ಣವಾಗಿ ಜಿಲ್ಲಾಧಿಕಾರಿಗೆ ವಹಿಸುವುದು ಸೇರಿದಂತೆ ಇನ್ನು ಅನೇಕ ಕಾಯಿದೆಗಳನ್ನು ಜಾರಿಗೆ ತರುವ ಉದ್ದೇಶವಿಟ್ಟುಕೊಂಡು ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸಿದೆ. ಹಳೆಯ ಕಾಯಿದೆಯಲ್ಲಿದ್ದ ಕೆಲವು ಅಂಶಗಳನ್ನು ತಿದ್ದುಪಡಿ ವಿಧೇಯಕದಲ್ಲಿ ತೆಗೆದು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಲಂ ಬೋರ್ಡ್ನ ರಶೀದ್, ನಗರಸಭೆ ಮಾಜಿ ಸದಸ್ಯ ಮುತುವಲ್ಲಿ ಸೈಯದ್ ಅಶ್ವಾಖ್ ಅಹಮದ್, ದಾವೂದ್, ಇಸ್ಮಾಯಿಲ್, ಸೈಪುಲ್ಲಾ ಇನ್ನು ಅನೇಕರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಗರದ ಎಲ್ಲಾ ಮಸೀದಿಗಳ ಮುಂಭಾಗವೂ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆಗಳು ನಡೆದವು.