ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಕೇಂದ್ರ ಸರ್ಕಾರ ಇತ್ತೀಚೆಗೆ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿರುವುದನ್ನು ವಿರೋಧಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಭಾಗಿಯಾಗಿದ್ದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಕಣ್ಣು ಕಾಣುತ್ತಿಲ್ಲ. ಮೂರು ಸಲ ಗೆದ್ದಿರುವ ಮೋದಿಗೆ ದೇಶದ ಯುವಜನರು ಪಾಠ ಕಲಿಸುವ ದಿನ ದೂರ ಉಳಿದಿಲ್ಲ. ಈ ಹೋರಾಟ ಕೇವಲ ಮುಸ್ಲಿಮರ ಹೋರಾಟ ಅಲ್ಲ. ಇದು ನಮ್ಮೆಲ್ಲರಿಗೆ ಸೇರಿದ ವಿಷಯ. ಹೀಗಾಗಿ, ನಾವೆಲ್ಲರೂ ಸೇರಿ ಹೋರಾಟ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ತ್ಯಾಗ ಇದೆ.
ಮುಸ್ಲಿಂ ಸಮುದಾಯದ ಸಾವಿರಾರು ಜನ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣ ನೀಡಿದ್ದಾರೆ. ಹಿಂದೂ, ಕ್ರೈಸ್ತ, ದಲಿತ, ಲಿಂಗಾಯತ ಸೇರಿದಂತೆ ಎಲ್ಲ ಧರ್ಮಗಳ ಜನರು ಮುಸ್ಲಿಮರ ಹಕ್ಕುಗಳ ರಕ್ಷಣೆ ಮಾಡಲು ಇಲ್ಲಿ ಸೇರಿದ್ದೇವೆ. ಬಿಜೆಪಿ ಸರ್ಕಾರ ಮುಸ್ಲಿಮರ ಹಕ್ಕು ಕಿತ್ತುಕೊಂಡರೆ ನಮ್ಮ ಹಕ್ಕು ಕಿತ್ತುಕೊಂಡಂತೆ ಎಂಬುದನ್ನು ಮರೆಯಬಾರದು. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಶಕ್ತಿಯೇ ನಮ್ಮ ಇಂದಿನ ಹೋರಾಟಕ್ಕೆ ಪ್ರೇರಣೆ. ದೇಶವನ್ನು ಕಾಡುತ್ತಿರುವ ಮುಖ್ಯ ವಿಷಯಗಳಾದ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳಿಂದ ಜನರನ್ನು ವಿಮುಖರನ್ನಾಗಿಸಲು ಬಿಜೆಪಿ ಯತ್ನ ನಡೆಸಿದೆ. ಜನರು ಮೂರ್ಖರಲ್ಲ ಕಿಡಿಕಾರಿದರು.
ಮಾಜಿ ಸಚಿವ ಹಾಗೂ ಶಾಸಕ ಬಿ.ನಾಗೇಂದ್ರ ಉರ್ದುನಲ್ಲಿ ಭಾಷಣ ಮಾಡಿ, ಮುಸ್ಲಿಮರು ಅಷ್ಟೇ ಅಲ್ಲ, ಹಿಂದೂಗಳು ವಕ್ಫ್ ಕಾಯ್ದೆ ವಿರುದ್ಧದ ಹೋರಾಟಕ್ಕೆ ಬಂದಿದ್ದಾರೆ. ಇಷ್ಟೊಂದು ಬಿಸಿಲಿನಲ್ಲಿ ಇಷ್ಟೊಂದು ಜನರು ಸೇರಿದ್ದೀರಾ ಅಂದ್ರೆ ಇದು ಇಷ್ಟು ಕರಾಳವಾಗಿದೆ ಎಂದು ಅರ್ಥವಾಗುತ್ತದೆ. ಕಾಂಗ್ರೆಸ್ನ ಎಲ್ಲಾ ನಾಯಕರು ನಿಮ್ಮ ಜೊತೆ ಇದ್ದೇವೆ. ನಿಮಗೆ ಶಕ್ತಿ ನೀಡಲು ನಾವು ಬಂದಿದ್ದೇವೆ. ಕಾಯ್ದೆಯ ಪ್ರತಿ ಹರಿದು ಹಾಕೋಣ, ಇದನ್ನು ನಾವು ಒಪ್ಪುವುದಿಲ್ಲ. ಇದು ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ. ಕಾಯ್ದೆ ವಿರುದ್ಧದ ಹೋರಾಟ. ಬಳ್ಳಾರಿಯಲ್ಲಿ ಹಿಂದೂ-ಮುಸ್ಲಿಂ ಅಣ್ಣ ತಮ್ಮಂದಿರಂತೆ ಇದ್ದೇವೆ. ಕಾಯ್ದೆಯನ್ನು ಅನುಷ್ಠಾನ ಮಾಡಲು ಬಿಡಲ್ಲ. ಅಲ್ಲದೇ ನಮಗೆ ಸುಪ್ರೀಂ ಕೋರ್ಟ್ ಮೇಲೆ ವಿಶ್ವಾಸವಿದೆ. ಸಂವಿಧಾನವನ್ನು ಒಳ್ಳೆಯದಕ್ಕಾಗಿ ಬಹಳಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ.
ಆದರೆ, ಈ ತಿದ್ದುಪಡಿಯ ಹಿಂದೆ ದುರುದ್ದೇಶವಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿಮ್ಮ ಜೊತೆಗೆ ಇದೆ. ಮೋದಿಯ ಆಟ ಕರ್ನಾಟಕದಲ್ಲಿ ನಡೆಯಲು ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ತುಕಾರಾಂ ಹಾಗೂ ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಮಾತನಾಡಿ, ಮುಸ್ಲಿಂರ ಜೊತೆಗೆ ಕಾಂಗ್ರೆಸ್ ಇದೆ. ಹೆದರುವ ಅಗತ್ಯವಿಲ್ಲ. ಜನಾದೇಶ ದುರ್ಬಳಕೆ ಮಾಡಿಕೊಂಡು ಬಿಜೆಪಿ ಅಧಿಕಾರ ನಡೆಸುತ್ತಿದೆ.
ಸಂವಿಧಾನ ವಿರೋಧಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಬಳ್ಳಾರಿ ಹೋರಾಟ ದೆಹಲಿ ಮುಟ್ಟಬೇಕಿದೆ. ಹತ್ತು ಮೋದಿ ಬಂದ್ರೂ ನಮಗೆ ಏನೂ ಮಾಡಲು ಆಗಲ್ಲ. ಸುಪ್ರೀಂ ಕೋರ್ಟ್ ಮೇಲೆ ವಿಶ್ವಾಸವಿದ್ದು, ನಮಗೆ ನ್ಯಾಯ ಸಿಕ್ಕೇ ಸಗುತ್ತದೆ. ವಕ್ಫ್ ಬೋರ್ಡ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ದುರ್ಗಾ, ಮಸೀದಿ, ಖಬರಸ್ತಾನ್ ಎಲ್ಲವನ್ನೂ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ನಾಮಾಜ್ ಮಾಡುವ ಸ್ಥಳ ವಕ್ಫ್ ಆಸ್ತಿ ಎಂದು ಸುಳ್ಳು ಹೇಳಲಾಗ್ತಿದೆ.
ಮುಸ್ಲಿಂ ಬಗ್ಗೆ ಯಾಕಿಷ್ಟು ವಿರೋಧ? ನಮ್ಮ ಮೇಲೆ ಯಾಕಿಷ್ಟು ಬೇಧ ಭಾವ? ಯಾವ ರೀತಿಯ ಕಾಯ್ದೆ ಮಾಡ್ತಿದ್ದಿರಾ? ಹಿಂದೆ ಸಿಎಎ-ಎನ್ಆರ್ಸಿ ತಂದು ದಾಖಲೆ ಕೇಳಿದಿರಿ. ಈಗ ಮಸೀದಿಗಳ ದಾಖಲೆ ಕೇಳುತ್ತಿದ್ದೀರಿ. ನಿಮಗೆ ಯಾವುದಕ್ಕೆ ದಾಖಲೆ ಬೇಕು? ದೇಶದಲ್ಲಿ ಮುಸ್ಲಿಂರನ್ನು ವಿಲನ್ ಮಾಡಲಾಗ್ತಿದೆ. ಹಿಂದೂ-ಮುಸ್ಲಿಂ ಇಬ್ಬಾಗ ಮಾಡಿ ವೋಟ್ ಬ್ಯಾಂಕ್ ಮಾಡಲಾಗ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ವಕ್ಫ್ ಮಂಡಳಿಯ ಜಿಲ್ಲಾಧ್ಯಕ್ಷ ಹುಮಾಯೂನ್ ಖಾನ್, ಮೇಯರ್ ಮುಲ್ಲಂಗಿ ನಂದೀಶ್, ಎ.ಮಾನಯ್ಯ, ಖಾಜಿ ಗುಲಾಂ ಸಿದ್ದೀಕಿ, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಹುಸೇನ್ ಪೀರಾ, ಭಂ ಭಂ ದಾದಾ, ಕಣೇಕಲ್ ಮೆಹಬೂಬಸಾಬ, ಅಲ್ಲಾಬಕಷ್, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಪಾಲಿಕೆಯ ಸದಸ್ಯರಾದ ಜಬ್ಬಾರ್, ನೂರ್ ಮೊಹಮ್ಮದ್, ಆಸಿಫ್, ನಾಜು, ಮಿಂಚು ಸೀನಾ, ಕುಬೇರಾ, ಪೇರಂ ವಿವೇಕ್, ಗಾದೆಪ್ಪ, ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಅಯಾಜ್, ಶಿವರಾಜ್, ಬಿಆರೆಲ್ ಸೀನಾ, ಗೋವಿಂದ ಸೇರಿದಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.