ಚಂದ್ರವಳ್ಳಿ ನ್ಯೂಸ್, ಚೆನ್ನೈ:
ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ ಕುಂಭಕೋಣಂನಲ್ಲಿರುವ ಪ್ರಸಿದ್ಧ ಸೂರ್ಯನಾರ್ ದೇವಸ್ಥಾನ ಮಠದ ಮುಖ್ಯಸ್ಥ 54 ವರ್ಷದ ಮಹಾಲಿಂಗ ಸ್ವಾಮಿ, ತಮ್ಮ ಭಕ್ತೆಯಾಗಿದ್ದ ಬೆಂಗಳೂರು ಮೂಲದ 47 ವರ್ಷದ ಹೇಮಶ್ರಿಯೊಂದಿಗೆ ಅಕ್ಟೋಬರ್ರಂದು ವಿವಾಹವಾಗಿರುವ ವಿಚಾರ ಮಠದಲ್ಲಿ ಕೋಲಾಹಲ ಎಬ್ಬಿಸಿದೆ.
ಇದರ ಬೆನ್ನಲ್ಲಿಯೇ ಮಹಾಲಿಂಗ ಸ್ವಾಮಿಗಳನ್ನು ಮಠದಿಂದ ಹೊರಹಾಕಲಾಗಿದೆ. ಅಧೀನಂ (ಮಠದ ಮುಖ್ಯಸ್ಥರು) ಅವರ “ಹಠಾತ್ ಮದುವೆ” ವಾರಗಟ್ಟಲೆ ಮುಚ್ಚಿಡಲಾಗಿತ್ತು.
ತಮಿಳುನಾಡಿನಲ್ಲಿ ಈ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು ಮಠದ ಭಕ್ತರು ಮಹಾಲಿಂಗ ಸ್ವಾಮಿಗಳು ಸನ್ಯಾಸತ್ವವನ್ನು ತ್ಯಜಿಸುವುದು ಮಾತ್ರವಲ್ಲದೆ ಶೈವ ಮಠವನ್ನು ತೊರೆಯುವಂತೆಯೇ ಸೂಚನೆ ನೀಡಿದ್ದರು.
ಸೂರ್ಯನಾರ್ ದೇವಾಲಯ ಈ ಪ್ರದೇಶದಲ್ಲಿ ನೂರಾರು ಕೋಟಿಯ ಆಸ್ತಿಯನ್ನು ಹೊಂದಿದೆ. ಈ ಪ್ರದೇಶದ ನವಗ್ರಹ ಪೂಜಾ ಸ್ಥಳಗಳಲ್ಲಿ ಒಂದಾದ ಸೂರ್ಯನಾರ್ ದೇವಾಲಯವನ್ನು ನಿರ್ವಹಿಸುವ ಮಠದ ಗ್ರಾಮಸ್ಥರು ಮತ್ತು ಅನುಯಾಯಿಗಳು ಕಳೆದ ಮಂಗಳವಾರ ಮಹಾಲಿಂಗ ಸ್ವಾಮಿಗಳನ್ನು ಮಠದ ಪ್ರಧಾನ ಕಚೇರಿಯಿಂದ ಹೊರಹಾಕಿದಾಗ ಮದುವೆಯ ವಿಷಯಗಳು ಹೊರ ಬಿದ್ದಿದೆ.
ಶೈವ ಮಠದಿಂದ ತಮ್ಮನ್ನು ಹೊರಹಾಕಿದ್ದ ಪ್ರತೀಕಾರವಾಗಿ ಹಾಗೂ ಮದುವೆಯನ್ನು ಪ್ರಶ್ನೆ ಮಾಡಿದ್ದಕ್ಕಾಗಿ ತಮ್ಮ ಶಿಷ್ಯ ಸ್ವಾಮಿನಾಥ ಸ್ವಾಮಿಯನ್ನು ವಜಾ ಮಾಡಿದ್ದಲ್ಲದೆ, ಮಠದ ಆಡಳಿತವನ್ನು ವಹಿಸಿಕೊಳ್ಳುವಂತೆ ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಪತ್ರ ಬರೆದಿದ್ದರು.
ನೋಂದಣಿಯಾಗಿರುವ ನನ್ನ ಮದುವೆ ವೈಯಕ್ತಿಕ ವಿಚಾರ ಎಂದು ಅಧೀನಂ ತನ್ನ ಭಕ್ತರೊಂದಿಗೆ ವಿವಾಹವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇಡೀ ಪ್ರಕರಣಕ್ಕೆ ತಿರುವು ಎನ್ನುವಂತೆ ತಮಿಳುನಾಡಿನಲ್ಲಿ ಶತಮಾನಗಳ ಹಿಂದೆ ಸ್ಥಾಪಿಸಲಾದ 18 ಶೈವ ಮಠಗಳಲ್ಲಿ ಒಂದಾದ ಮಠದ ಮುಖ್ಯಸ್ಥರಾಗಿ ತಾನೇ ಉಳಿಯಲಿದ್ದೇನೆ ಎಂದು ಘೋಷಿಸಿದ್ದರು.
ಮಠವನ್ನು ತೊರೆಯಲು ಮಹಾಲಿಂಗ ಸ್ವಾಮಿಗಳು ವಿರೋಧ ವ್ಯಕ್ತಪಡಿಸಿದಂತೆ, ಸ್ಥಳೀಯ ಗ್ರಾಮಸ್ಥರು ಮಠವನ್ನು ತೊರೆಯುವಂತೆ ಸ್ವಾಮಿಗೆ ಕೇಳಿಕೊಂಡಿದ್ದರು. ಆದರೆ, ಮಹಾಲಿಂಗ ಸ್ವಾಮಿಗಳು ತಮಿಳುನಾಡಿನ ಎಚ್ಆರ್ ಮತ್ತು ಸಿಇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಕಾಯುತ್ತಿದ್ದರು ಮತ್ತು ಮಠದ ಆಡಳಿತಾತ್ಮಕ ನಿಯಂತ್ರಣವನ್ನು ಅವರಿಗೆ ವಹಿಸಲು ಪತ್ರವನ್ನು ಹಸ್ತಾಂತರಿಸಿದರು.
ಆಡಳಿತ ನಿಯಂತ್ರಣವನ್ನು ಎಚ್ಆರ್& ಸಿಇಗೆ ವರ್ಗಾಯಿಸುವವರೆಗೆ ನಾನು ಗ್ರಾಮ ತೊರೆಯುವುದಿಲ್ಲ. ಎಲ್ಲವೂ ಮುಗಿದ ನಂತರ, ನಾನು ಕರ್ನಾಟಕಕ್ಕೆ (ಅವರ ಪತ್ನಿ ಇರುವ ಸ್ಥಳದಿಂದ) ತೆರಳಲು ಯೋಜಿಸಿದೆ ಎಂದು ಮಠಾಧೀಶರು ಬುಧವಾರ ಹೇಳಿದ್ದರು.
ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿರುವ ಸೂರ್ಯನಾರ್ ದೇವಸ್ಥಾನದ ಅಧೀನಂನ 28ನೇ ಮುಖ್ಯಸ್ಥರಾಗಿ 2022ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಮಹಾಲಿಂಗ ಸ್ವಾಮಿಗಳು ಅಕ್ಟೋಬರ್ 10 ರಂದು ಬೆಂಗಳೂರಿನಲ್ಲಿ ಹೇಮಾಶ್ರೀ ಅವರನ್ನು ವಿವಾಹವಾಗಿದ್ದಾರೆ. ಹೇಮಾಶ್ರೀ ಮಠದ ಕಟ್ಟಾ ಭಕ್ತರಾಗಿದ್ದರು ಮತ್ತು ಅವರು ಆಗಾಗ್ಗೆ ಮಠ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡುವ ವೇಳೆ ಮಠಾಧೀಶರ ಜೊತೆ ಸಂಪರ್ಕ ಸಾಧಿಸಿದ್ದರು.
ಐತಿಹಾಸಿಕವಾಗಿ, ಅಧೀನಂ ಬ್ರಹ್ಮಚರ್ಯದ ಜೀವನವನ್ನು ನಡೆಸುವ ಮೂಲಕ ಆಧ್ಯಾತ್ಮಿಕ ಕರ್ತವ್ಯಗಳ ಮೇಲೆ ಗಮನ ಕೇಂದ್ರೀಕರಿಸಲು ಅವಿವಾಹಿತರಾಗಿದ್ದರು. ಹಾಗಿದ್ದರೂ, ವಿವಾಹಿತ ಪುರುಷರು ಆಧ್ಯಾತ್ಮಿಕ ಕರ್ತವ್ಯಗಳನ್ನು ತೆಗೆದುಕೊಳ್ಳಲು ತಮ್ಮ ಕುಟುಂಬ ಜೀವನವನ್ನು ತ್ಯಜಿಸಿದ ಕೆಲವು ನಿದರ್ಶನಗಳಿವೆ. ಶೈವ ಸಿದ್ಧಾಂತದ ತತ್ವವನ್ನು ಪ್ರಚಾರ ಮಾಡುವ ಶೈವ ಮಠಗಳು ದೊಡ್ಡ ಪ್ರಮಾಣದ ಭೂಮಿ ಮತ್ತು ಆಸ್ತಿಯನ್ನು ಹೊಂದಿದ್ದು, 2023 ರಲ್ಲಿ ಹೊಸ ಸಂಸತ್ತಿನ ಕಟ್ಟಡದಲ್ಲಿ ಸೆಂಗೋಲ್ ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಸದಿಲ್ಲಿಗೆ ಆಹ್ವಾನಿಸಿದಾಗ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತ್ತು.
ಎಚ್ಆರ್ಸಿಇ ಕಾಯಿದೆಯ ಸೆಕ್ಷನ್ 60 ಮತ್ತು 60 (ಎ) ಅಡಿಯಲ್ಲಿ ದೇವಸ್ಥಾನ ಮತ್ತು ಮಠದ ಆಡಳಿತಾತ್ಮಕ ನಿಯಂತ್ರಣಕ್ಕೆ ಸರ್ಕಾರ ಮುಂದಾಗಲಿದೆ ಎಂದು ಎಚ್ಆರ್ಮತ್ತು ಸಿಇ ಸಚಿವ ಪಿ ಕೆ ಶೇಕರಬಾಬು ಬುಧವಾರ ಹೇಳಿದ್ದಾರೆ.
ನಾವು ಈ ವಿಷಯದ ಬಗ್ಗೆ ಕಾನೂನು ತಜ್ಞರನ್ನು ಸಂಪರ್ಕಿಸುತ್ತಿದ್ದೇವೆ ಮತ್ತು ನಾವು ನಮ್ಮ ನಿರ್ಧಾರವನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ. ಮಠದ ಮುಖ್ಯಸ್ಥರಿಂದ ನಾವು ಪತ್ರವನ್ನು ಸ್ವೀಕರಿಸಿದ್ದೇವೆ ಎಂದು ಶೇಖರಬಾಬು ಹೇಳಿದ್ದಾರೆ. ಮಠಾಧೀಶರ ಒಡೆತನದ ಆಸ್ತಿಗಳ ವಿವರವಾದ ಮೌಲ್ಯಮಾಪನವನ್ನು ಮಾಡಲಾಗುತ್ತದೆ ಎಂದಿದ್ದಾರೆ.