ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೂಟೆ ಮತ್ತು ನಾನು
ಅಕ್ಷರ ಕಳಚಿದಂದಿನಿಂದ
ನೋವು ನಲಿವು ಹಸಿವು
ನೀನೇ ತಾನೆ ಗೆಳೆಯ
ಬದುಕ ಹಾದಿಯ ಬೆಳಕೇ ನೀನು
ಆರಂಭದಲಿ ಇಬ್ಬರದು ಚಿನ್ನಾಟವೇ
ಹೀಗೀಗ ನನಗರಿವಾಗುತ್ತಿದೆ
ನೀನು ಸಹ ಬಲು ಬಿರುಸೇ
ಮೊದಮೊದಲು ಹಾಗಿರಲಿಲ್ಲ
ಬರೀ ಸನ್ನೆ ಮೇಲೆಯೇ
ಹೆಗಲು ರಟ್ಟೆಗಳ ಬಳಸಿ
ಎತ್ತೆತ್ತಲೋ ಹರಿದಾಡಿ
ಕೊನೆಗೆ ನಿಟ್ಟೇರಿ ಬಿಡುತ್ತಿದ್ದೆ
ಆಗ ಸ್ವಲ್ಪ ಭಯವೂ
ನಿನಗಿತ್ತೆಂಬ ಸಂದೇಹ ನನಗೆ
ಇತ್ತೀಚಿಗೆ ನಿನ್ನೊಂದಿಗೆ
ಗುದ್ದಾಡಿ ಸೋತ ಹಿರಿಯ
ನಿನ್ನದೇ ಚಿಂತೆಯಲಿ
ಸುಕ್ಕುಗಟ್ಟಿದ ಮೌನದೊಳಗೆ
ಗಾಬರಿ ಕಳವಳ ಸಿಟ್ಟು
ಬೆನ್ನಿಗಂಟಿದ ಹೊಟ್ಟೆಯ ಜೊತೆ
ಮಾತೇ ಕೇಳುತ್ತಿಲ್ಲವೆಂದು ದುಂಬಾಲು
ನನ್ನ ಸೆಳೆದ ಹಾಗೆ ಹೊಸಬರ ಬಗ್ಗೆ
ಬಲು ಪ್ರೀತಿ ನಿನಗೆ
ಬಿಡಿಸಲಾರದಂತಹ ಬಂಧ
ಹೊಸ ನೀರು ಬಂದು
ಹಳೇನೀರು ಹರಿದಂಗ
ಮಮತೆಯಲಿ ಮೈದಡಿವಿದೆಯಾದರೂ
ನೀನು ನೀನೆ ನಾನು ನಾನೇ
ನಿನ್ನಂತಹ ತೂಕ
ನಾವುಗಳಲ್ಲೆಂಬ ಸತ್ಯದ ಅರಿವಿದೆ
ಮೌನ ಮುರಿದು ನಮ್ಮಗಳ ಜೊತೆ
ಸ್ವಲ್ಪ ಮಾತನಾಡು
ಗಟ್ಟಿತನದ ಗುಟ್ಟು ಕಲಿಸಿಕೊಡು
ಬಗೆ ಬಗೆಯ ನಿನ್ನ
ವಿದ್ಯೆಯ ಹೇಳಿಕೊಡು
ಬದುಕಿನ ತುಯ್ದಾಟಗಳ ಜೊತೆ
ಮತ್ತೆ ಮತ್ತೆ ಅರಳುವ ಹಾಗೆ
ಕವಿತೆ :ಕುಮಾರ್ ಬಡಪ್ಪ, ಚಿತ್ರದುರ್ಗ.

