ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಇಂಡಿ ಕೂಟದ ಪರವಾಗಿ ಉಪ ರಾಷ್ಟ್ರಪತಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದೆ. ತೆಲಂಗಾಣ ಮೂಲದ ವಿಶ್ರಾಂತ ನ್ಯಾಯಾಧೀಶ ಬಿ.ಸುದರ್ಶನ್ ರೆಡ್ಡಿ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಇಂಡಿಯಾ ಕೂಟವು ಘೋಷಿಸಿದೆ.
ವಿಶ್ರಾಂತ ನ್ಯಾಯಾಧೀಶ ಸುದರ್ಶನ್ ರೆಡ್ಡಿ ಅವರು ತೆಲಂಗಾಣ ಮೂಲದವರಾಗಿದ್ದಾರೆ. ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ 2007- 11ರ ನಡುವೆ ಸೇವೆ ಸಲ್ಲಿಸಿದ್ದರು.
ಗೋವಾದ ಮೊದಲ ಲೋಕಾಯುಕ್ತರಾಗಿಯೂ ಸೇವೆ ಸಲ್ಲಿಸಿದ್ದ ಸುದರ್ಶನ್ ರೆಡ್ಡಿ ಅವರು 2005 ರಲ್ಲಿ ಗುವಾಹಟಿ ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿದ್ದರು.
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಕುಲಮೈಲಾರಂ ಅವರ ಹುಟ್ಟೂರು. ಅವರು 1971ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಕೂಟ ಈಗಾಗಲೇ ಹಿಂದುಳಿದ ವರ್ಗಕ್ಕೆ ಸೇರಿರುವ ತಮಿಳುನಾಡಿನ ಸಿ.ಪಿ. ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದೆ.
ಇಂಡಿ ಕೂಟ ಪ್ರಕಟ:
ವಿಶ್ರಾಂತ ನ್ಯಾಯಾಧೀಶ ಸುದರ್ಶನ್ ರೆಡ್ಡಿ ಅವರನ್ನು ವಿಪಕ್ಷಗಳ ಪರ ಉಪ ರಾಷ್ಟ್ರಪತಿ ಅಭ್ಯರ್ಥಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಘೋಷಿಸಿದರು.
ಇಂಡಿ(I.N.D.I.A) ಕೂಟದ ಎಲ್ಲ ವಿಪಕ್ಷಗಳು ಜಂಟಿಯಾಗಿ ವಿಶ್ರಾಂತ ಜಡ್ಜ್ ಸುದರ್ಶನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿವೆ. ಇದು ಪ್ರಜಾಪ್ರಭುತ್ವದ ದೊಡ್ಡ ಸಾಧನೆ ಎಂದು ಮಲ್ಲಿಕಾರ್ಜುನ ಖರ್ಗೆ ಬಣ್ಣಿಸಿದ್ದಾರೆ.
ಸುದರ್ಶನ್ ರೆಡ್ಡಿ ಯಾರು?:
ಇಂಡಿ ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಸುದರ್ಶನ್ ರೆಡ್ಡಿ ಜುಲೈ 1946 ರಲ್ಲಿ ಜನಿಸಿದರು. ಡಿಸೆಂಬರ್ 27, 1971 ರಂದು ಆಂಧ್ರಪ್ರದೇಶದ ಬಾರ್ ಕೌನ್ಸಿಲ್ನಲ್ಲಿ ಸುದರ್ಶನ್ ರೆಡ್ಡಿ, ವಕೀಲರಾಗಿ ಸೇರಿಕೊಂಡ ನಂತರ ತಮ್ಮ ಕಾನೂನು ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಅವರು 1988 ಮತ್ತು 1990 ರ ನಡುವೆ ಆಂಧ್ರಪ್ರದೇಶ ಹೈಕೋರ್ಟ್ನಲ್ಲಿ ಸರ್ಕಾರಿ ವಕೀಲರಾಗಿ ಮತ್ತು 1990 ರಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ವಕೀಲರಾಗಿ ಸೇವೆ ಸಲ್ಲಿಸಿದರು. ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರ ಮತ್ತು ಸ್ಥಾಯಿ ವಕೀಲರಾಗಿಯೂ ಸೇವೆ ಸಲ್ಲಿಸಿದ ಅನುಭವ ಪಡೆದುಕೊಂಡಿದ್ದಾರೆ.
ಸುದರ್ಶನ್ ರೆಡ್ಡಿ ಅವರನ್ನು ಮೇ 2, 1995 ರಂದು ಆಂಧ್ರಪ್ರದೇಶ ಹೈಕೋರ್ಟ್ನ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು ಮತ್ತು ಡಿಸೆಂಬರ್ 5 2005 ರಂದು ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. ಅವರು ಜನವರಿ 12, 2007 ರಂದು ಸುಪ್ರೀಂ ಕೋರ್ಟ್ಗೆ ಬಡ್ತಿ ಪಡೆದರು ಮತ್ತು ಜುಲೈ 8, 2011 ರಂದು ನಿವೃತ್ತರಾಗುವವರೆಗೆ ಸೇವೆ ಸಲ್ಲಿಸಿದ್ದರು.
ಮಾರ್ಚ್ 2013 ರಲ್ಲಿ, ಅವರು ಗೋವಾದ ಮೊದಲ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಏಳು ತಿಂಗಳೊಳಗೆ ಹುದ್ದೆಯಿಂದ ಕೆಳಗಿಳಿದಿದ್ದರು.
ಈ ಎಲ್ಲ ಹಿನ್ನೆಲೆ ಹೊಂದಿರುವ ಸುದರ್ಶನ ರೆಡ್ಡಿ ಅವರನ್ನು ಇಂಡಿಯಾ ಒಕ್ಕೂಟ ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.
ಸಂಸತ್ ಬಲಾಬಲ:
ಲೋಕಸಭೆಯಲ್ಲಿ ಒಂದು ಮತ್ತು ರಾಜ್ಯಸಭೆಯಲ್ಲಿ ಐದು ಒಟ್ಟು ಆರು ಖಾಲಿ ಸ್ಥಾನಗಳನ್ನು ಹೊರತುಪಡಿಸಿ ಪ್ರಸ್ತುತ ಎಲೋಕ್ಟ್ರಾಲ್ ಕಾಲೇಜಿನಲ್ಲಿ 782 ಸಂಸದರಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಯು ಒಟ್ಟು ಮತಗಳಲ್ಲಿ ಅರ್ಧಕ್ಕಿಂತ ಹೆಚ್ಚು (392 ಮತಗಳು) ಮತಗಳನ್ನು ಪಡೆದುಕೊಳ್ಳಬೇಕಾಗಿದೆ.
ಲೋಕಸಭೆಯಲ್ಲಿ ಪ್ರಸ್ತುತ 542 ಸಂಸದರಿದ್ದಾರೆ. NDA ಪರವಾಗಿ 293 ಸಂಸದರಿದ್ದರೆ ವಿರೋಧ ಪಕ್ಷದ ಪರವಾಗಿ 249 ಸಂಸದರಿದ್ದಾರೆ. ಇನ್ನೂ ರಾಜ್ಯಸಭೆಯಲ್ಲಿ ಪ್ರಸ್ತುತ 240 ಸಂಸದರಿದ್ದು, ಅದರಲ್ಲಿ NDA 130 ರಷ್ಟು ರಾಜ್ಯಸಭಾ ಸದಸ್ಯರ ಬೆಂಬಲ ಹೊಂದಿದೆ ಎನ್ನಲಾಗಿದೆ.

