ವಿವಿಗೆ ಸಾಲುಮರದ ತಿಮ್ಮಕ್ಕ ಹೆಸರಿಡಿ-ಆಂಜನೇಯ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾಲುಮರದ ತಿಮ್ಮಕ್ಕ ಸೇರಿ ಅನೇಕ ಸಾಮಾನ್ಯ ಮಹಿಳೆಯರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ವೃಕ್ಷಮಾತೆ ಎಂದೇ ಗುರುತಿಸಿಕೊಂಡಿರುವ ಸಾಲುಮರದ ತಿಮ್ಮಕ್ಕಳ ಹೆಸರನ್ನು ಸ್ಮರಣೀಯಗೊಳಿಸಬೇಕಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ತಾಲೂಕಿನ ಸೀಬಾರ ಗ್ರಾಮದ ತಮ್ಮ ಕಚೇರಿಯಲ್ಲಿ ಭಾನುವಾರ ಕರ್ನಾಟಕ ಮಾದಾರ ಮಹಾಸಭಾ ವತಿಯಿಂದ ಆಯೋಜಿಸಿದ್ದ ಸಾಲುಮರದ ತಿಮ್ಮಕ್ಕ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

- Advertisement - 

ವಿಶ್ವವಿದ್ಯಾಲಯಕ್ಕೆ ತಿಮ್ಮಕ್ಕ ಹೆಸರನ್ನು ನಾಮಕರಣ ಗೊಳಿಸಬೇಕು. ಸಾವಿರ ಎಕರೆಗೂ ಹೆಚ್ಚು ಭೂಮಿಯಲ್ಲಿ ಅವರ ಹೆಸರಿನಲ್ಲಿ ರಾಷ್ಟ್ರೀಯ ಉದ್ಯಾನವನ ಸ್ಥಾಪಿಸಬೇಕು. ಅವರ ಪುತ್ರನ ನೇತೃತ್ವದಲ್ಲಿ ಟ್ರಸ್ಟ್ ಸ್ಥಾಪಿಸಲು ಒಂದೇರಡು ಎಕರೆ ಭೂಮಿ ಕೊಟ್ಟು, ಟ್ರಸ್ಟ್ ಮೂಲಕ ಪರಿಸರ ಜಾಗೃತಿ ಮೂಡಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.

ಸಾಮಾನ್ಯ ಮಹಿಳೆ ತಿಮ್ಮಕ್ಕಳ ಬದ್ಧತೆ, ಪರಿಸರ ಕಾಳಜಿ, ಗಿಡ-ಮರಗಳ ಪ್ರಾಮುಖ್ಯತೆಯ ಅರಿವು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಬುಡಕಟ್ಟು, ಹಳ್ಳಿ ಜನರು ಪ್ರಕೃತಿಯೊಂದಿಗೆ ಬದುಕು ಕಟ್ಟಿಕೊಂಡವರು. ಮರಗಳನ್ನೇ ದೇವರ ಸ್ಥಾನದಲ್ಲಿಟ್ಟು ಪೂಜಿಸಿದವರು. ನಮ್ಮ ಪೂರ್ವಿಕರು ಪರಿಸರ ರಕ್ಷಣೆಗೆ ಟೊಂಕ ಕಟ್ಟಿ ನಿಂತಹ ಮಹನೀಯರು. ಒಂದು ಹೆಜ್ಜೆ ಮುಂದಿಟ್ಟ ತಿಮ್ಮಕ್ಕ ತನಗೆ ಮಕ್ಕಳಿಲ್ಲದ ಕೊರಗು ನೀಗಿಸಿಕೊಳ್ಳಲು ಸಸಿ ನೆಟ್ಟು ಅವುಗಳನ್ನು ಸಲುಹಿದ ರೀತಿಯೇ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ ಎಂದರು.

- Advertisement - 

ತನ್ನ ಪತಿ, ಸಂಬಂಧಿಗಳ ಜೊತೆಗೆ ಸುಃಖದಿಂದ ಇರಬೇಕಾದ ಸಂದರ್ಭದಲ್ಲಿಯೇ ರಸ್ತೆಬದಿ ಸಸಿ ನೆಟ್ಟು ಪೋಷಿಸುವ ಮಹತ್ತರ ಕಾರ್ಯ ಮಾಡಿ ಸಾಲುಮರದ ತಿಮ್ಮಕ್ಕ ಎಂದೇ ಜನಪ್ರಿಯತೆ ಗಳಿಸಿದ ಮೇಲೂ ನಾಡಿನಾದ್ಯಂತ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ನಿಸ್ವಾರ್ಥ ಬದುಕು ನಡೆಸಿದ ತಿಮ್ಮಕ್ಕ ಮಾದರಿ ಆಗಿದ್ದಾರೆ ಎಂದು ತಿಳಿಸಿದರು.

ಪತಿ ಸಾವಿನ ಬಳಿಕ ಸಂಕಷ್ಟಕ್ಕೆ ಸಿಲುಕಿದರೂ ಸಸಿ ನೆಟ್ಟು ಪೋಷಿಸುವ ಕಾರ್ಯ ಕೈಬಿಡದೆ ಮುಂದುವರಿಸಿಕೊಂಡಿದ್ದು ಸ್ಮರಣೀಯ. ಈ ಕಾರಣಕ್ಕೆ ತಿಮ್ಮಕ್ಕ ಸಾವಿನ ಬಳಿಕವೂ ಮರ-ಗಿಡಗಳಲ್ಲಿ ಸದಾ ಜೀವಂತವಾಗಿರುತ್ತಾರೆ ಎಂದರು.

ಸಸಿಯೊಂದನ್ನು ನೆಟ್ಟು ಮರವನ್ನಾಗಿಸಿದರೆ ನೆರಳು, ಹಣ್ಣು, ಶುದ್ಧ ಗಾಳಿ ಜೊತೆಗೆ ಮಳೆ ತರಿಸುತ್ತದೆ. ಸಕಲ ಜೀವರಾಶಿಗಳಿಗೆ ಅನುಕೂಲ ಕಲ್ಪಿಸುತ್ತದೆ. ಈ ಸತ್ಯವನ್ನು ಅನಕ್ಷರಸ್ತೆ ತಿಮ್ಮಕ್ಕ ಅರಿತು ವೃಕ್ಷಗಳ ಪಾಲಿಗೆ ತಾಯಿಯಾಗಿ ನಿಂತಿದ್ದು ಅಕ್ಷರವಂತರ ಜ್ಞಾನದೋಯಕ್ಕೆ ಪ್ರಮುಖ ವಸ್ತುವಾಗಿದ್ದಾರೆ ಎಂದು ತಿಳಿಸಿದರು.

ಈಚೆಗೆ ಅಭಿವೃದ್ಧಿ ಹೆಸರಲ್ಲಿ ಮರ-ಗಿಡಗಳನ್ನು ಕಡಿದರೂ ಇದಕ್ಕೆ ಪ್ರತಿಯಾಗಿ ಸಸಿಗಳನ್ನು ನೆಟ್ಟು ಪೋಷಿಸಬೇಕೆಂಬ ಕಾನೂನು ಸರ್ಕಾರ ಜಾರಿಗೊಳಿಸಿದೆ. ಆದರೆ, ಸಸಿ ನೆಟ್ಟ ಬಳಿಕ ಅವುಗಳ ಪೋಷಣೆ ಮರೆತು ಬಿಡುವ ಗುಣದಿಂದ ಪರಿಸರದಲ್ಲಿ ಏರುಪೇರಾಗುತ್ತಿದೆ. ಪರಿಣಾಮ ಮಳೆ ಕಡಿಮೆಯಾಗಿದೆ. ಶುದ್ಧಗಾಳಿಗಾಗಿ ಹಣ ಕೊಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮರಗಳು ಹೆಚ್ಚಿರುವ ಊರು ತಂಪು ಆಗಿರುತ್ತದೆ. ಮಳೆ ಸುರಿಯುತ್ತದೆ. ಬಿಸಿಲಿನ ಧಗೆಯಿಂದ ರಕ್ಷಣೆ ಪಡೆಯಬಹುದಾಗಿದೆ. ಪಕ್ಷಿಗಳ ಇಂಪಾದ ಚಿಲಿಪಿಲಿ ಕಿವಿ, ಮನಸ್ಸಿಗೆ ತಂಪು ತರಲಿದೆ. ಮಕ್ಕಳು ಸಂಭ್ರಮಿಸಲು, ಆಟವಾಡಲು ಅವಕಾಶ ದೊರೆಯಲಿದೆ. ಆದರೆ, ನಾವು ಸೀಮೆಂಟ್ ನಾಡು ನಿರ್ಮಾಣ ಮಾಡುತ್ತ, ಪರಿಸರ ರಕ್ಷಣೆಯನ್ನೇ ಮರೆಯುತ್ತಿದ್ದೇವೆ ಎಂದು ಬೇಸರಿಸಿದರು.

ಈ ತಪ್ಪು ಹಾದಿಯಿಂದ ಹೊರಬರುವ ಬಹುದೊಡ್ಡ ಸವಾಲು ನಮ್ಮ ಮುಂದಿದೆ. ಅಭಿವೃದ್ಧಿ ಪರಿಭಾಷೆ ಬದಲಾಗಬೇಕಿದೆ. ಪ್ರಾಣಿಪಕ್ಷಿಗಳು, ಗಿಡ-ಮರ, ಪ್ರಕೃತಿ ರಕ್ಷಣೆಗೆ ನಾವೆಲ್ಲರೂ ಕೈಜೋಡಿಸಬೇಕಿದೆ. ತಿಮ್ಮಕ್ಕಳನ್ನು ನಾವುಗಳು ಮಾದರಿಯನ್ನಾಗಿಸಿಕೊಂಡರೇ ನೆಮ್ಮದಿ ಬದುಕು ಸಾಧ್ಯವಾಗಲಿದೆ ಎಂದರು. ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜೆ.ಆರ್.ರವಿಕುಮಾರ್ ನಾಯಕನಹಟ್ಟಿ, ಮೇಘ ಗಂಗಾಧರ ನಾಯ್ಕ, ವಕೀಲರಾದ ರವೀಂದ್ರ, ಉಮಾಪತಿ, ಪರಿಸರವಾದಿ ಇನಾಯತ್ ಷರೀಫ್ ಮಾತನಾಡಿದರು.   ಕಾಂಗ್ರೆಸ್ ಎಸ್ಸಿ ವಿಭಾಗದ ತಾಲೂಕು ಅಧ್ಯಕ್ಷ ಅನಿಲ್ ಕೋಟಿ, ಹೊಳಲ್ಕೆರೆ ಕಾಂಗ್ರೆಸ್ ಮಾಧ್ಯಮ ವಿಭಾಗದ ಕಿರಣ್ ಶಿವಪುರ, ಅಜಾದ್ ನಗರ ಗ್ರಾಪಂ ಮಾಜಿ ಸದಸ್ಯ ದಾದಾಪೀರ್, ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮುನೀರಾ, ಒಬಿಸಿ ಘಟಕದ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್ ಭೀಮಸಮುದ್ರ, ಚೇತನ್ ಬೋರೇನಹಳ್ಳಿ ಇತರರಿದ್ದರು.

 

 

Share This Article
error: Content is protected !!
";