ಚಂದ್ರವಳ್ಳಿ ನ್ಯೂಸ್, ಶಿರಾ:
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂದು ಮಾನವ ದಿನದ ಕೂಲಿ ದರವನ್ನು ರೂ.349 ರಿಂದ ರೂ.370 ಕ್ಕೆ ಕೇಂದ್ರ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಹೆಚ್ಚಿಸಿದ್ದು, 2025 ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
ತಾಲ್ಲೂಕಿನ ಗ್ರಾಮೀಣ ಭಾಗದ ಜನರು ಹೆಚ್ಚಾಗಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸಿ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು. ಒಂದು ಆರ್ಥಿಕ ವರ್ಷದಲ್ಲಿ 100 ದಿನ ಪೂರೈಸಿದ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ 37000 ರೂ. ನೇರವಾಗಿ ಕೂಲಿಕಾರರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುವುದು.
2025-26 ರ ಆರ್ಥಿಕ ವರ್ಷದ ನರೇಗಾ ಯೋಜನೆಯ ಕ್ರಿಯಾಯೋಜನೆಯಲ್ಲಿ ಮುಂದಿನ ಪೀಳಿಗೆಗೆ ಅನುಕೂಲವಾಗುವಂತಹ ಮಣ್ಣು ಮತ್ತು ನೀರು ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ್ದು, ಜೊತೆಯಲ್ಲಿ ಶಾಲಾಭಿವೃದ್ಧಿ ಕಾಮಗಾರಿಗಳು, ಸಿ.ಸಿ.ಡ್ರೈನ್, ರಸ್ತೆ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಟಾನ ಮಾಡಿಕೊಳ್ಳಲು ಅವಕಾಶ ನೀಡಿದೆ.
ರೈತ ತನ್ನ ಜಮೀನಿನಲ್ಲಿ ತಾನು ಕೆಲಸ ನಿರ್ವಹಿಸಿದ್ದಕ್ಕಾಗಿ ನೇರವಾಗಿ ಫಲಾನುಭವಿಗೆ ಖಾತೆಗೆ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸಿದ ಆಧಾರದ ಮೇಲೆ ಹಣ ಸಂದಾಯವಾಗುತ್ತದೆ. ತಮ್ಮ ಜಮೀನಿನಲ್ಲಿ ಅನುಷ್ಟಾನ ಮಾಡಿಕೊಳ್ಳುವ ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿ ಅರಣ್ಯ ಹಾಗೂ ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ನಿಂಬೆ, ಹುಣಸೆ ಅಂಗಾಂಶ ಬಾಳೆ, ಪಪ್ಪಾಯ, ಸೀಬೆ, ಸೀತಾಫಲ, ನುಗ್ಗೆ, ನೇರಳೆ, ಬಾರೆ, ಗುಲಾಬಿ, , ತೆಂಗು, ಮಾವು, ಸಪೋಟ, ದಾಳಿಂಬೆ, ಮಲ್ಲಿಗೆ, ಕರಿಬೇವು, ವೀಳ್ಯದೆಲೆ ಬೆಳೆಗಳಿಗೆ ಸಹಾಯಧನ ಪಡೆಯಲು ಈ ಯೋಜನೆಯಡಿ ಅವಕಾಶವಿದೆ.
ನರೇಗಾ ಯೋಜನೆಯಡಿ ಅನುಕೂಲ ಪಡೆದುಕೊಳ್ಳಲು ಉದ್ಯೋಗ ಚೀಟಿ ಹೊಂದಿರುವುದು ಕಡ್ಡಾಯ. 18 ವರ್ಷ ಮೇಲ್ಪಟ್ಟವರು ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮೂನೆ-1 ನ್ನು ಭರ್ತಿ ಮಾಡಿ ಆಧಾರ ಕಾರ್ಡ್, ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಭಾವಚಿತ್ರ ನೀಡಿ ಉದ್ಯೋಗ ಚೀಟಿ ಪಡೆಯಬೇಕು.
ಒಂದು ಕುಟುಂಬಕ್ಕೆ ಒಂದು ಉದ್ಯೋಗ ಚೀಟಿಯನ್ನು ಮಾತ್ರವೇ ನೀಡಲಾಗುತ್ತದೆ. ಉದ್ಯೋಗ ಚೀಟಿ ಪಡೆದುಕೊಂಡ ಮೇಲೆ ಯೋಜನೆಯಡಿ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿ ಕೂಲಿ ಪಡೆಯಬಹುದು ಅಥವಾ ತಮ್ಮ ಜಮೀನುಗಳಲ್ಲಿ ವೈಯಕ್ತಿಕ ಕಾಮಗಾರಿ ಅನುಷ್ಟಾನ ಮಾಡಿಕೊಂಡು ಕೂಲಿ ಪಡೆಯಲು ಅವಕಾಶವಿದೆ.