ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೆಹರು ಕಾಲದಿಂದ ಇಂದಿನವರೆಗೂ ಕಾಂಗ್ರೆಸ್ ಜನಪರ ಕಾರ್ಯಕ್ರಮಗಳನ್ನೇ ಜನರಿಗಾಗಿ ನೀಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ದೇಶದ ಮೊದಲ ಪ್ರಧಾನಿಗಳಾದ ಪಂಡಿತ್ ಜವಹರಲಾಲ್ ನೆಹರು ಅವರ ಬಗ್ಗೆ ಮಾತನಾಡಲು ಶುರು ಮಾಡಿದರೆ ಮುಗಿಯುವುದಿಲ್ಲ; ದೇಶಕ್ಕೆ ಅವರ ಕೊಡುಗೆ ಅಷ್ಟಿದೆ. ‘ನಿನ್ನ ಮೇಲೆ ನಿನಗೆ ನಂಬಿಕೆ ಇದ್ದರೆ ಎಲ್ಲವೂ ಸಾಧ್ಯ’ ಎಂಬ ಮಾತನ್ನು ನೆಹರು ಅವರು ಆಗಾಗ ಹೇಳುತ್ತಿದ್ದರು ಎಂದು ಅವರು ಸ್ಮರಿಸಿದರು.
ಬೆಂಗಳೂರಿನಲ್ಲಿ ಬಿಹೆಚ್ಇಎಲ್, ಬಿಇಎಲ್, ಇಸ್ರೋ ಸೇರಿದಂತೆ ಹಲವು ಸಂಸ್ಥೆ- ಕೈಗಾರಿಕೆಗಳನ್ನು ನಿರ್ಮಿಸಿದ್ದರು. ದೇಶದ ಪವಿತ್ರ ಗ್ರಂಥ ‘ಸಂವಿಧಾನ‘ವನ್ನು ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಗುರುತಿಸಿ ನೆಹರು ಅವರು ಕಾನೂನು ಸಚಿವರನ್ನಾಗಿ ಮಾಡಿದ್ದರು. ತಮ್ಮ ನಾಯಕತ್ವದಲ್ಲಿ ಎಲ್ಲಾ ವರ್ಗದ ನಾಯಕರನ್ನು ಬೆಳೆಸುವ ಗುಣವನ್ನು ನೆಹರು ಹೊಂದಿದ್ದರು ಎಂದು ಅವರು ತಿಳಿಸಿದರು.
ಕೈಗಾರಿಕಾ ಕ್ರಾಂತಿ, ಹಸಿರು ಕ್ರಾಂತಿ, ಶೈಕ್ಷಣಿಕ ಬೆಳವಣಿಗೆ ಸೇರಿದಂತೆ ದೇಶದ ಅಭಿವೃದ್ಧಿಗೆ ನೆಹರು ಅವರು ಸಾಕಷ್ಟು ಕೊಡುಗೆಯನ್ನು ನೀಡಿದ್ದರು. ನೆಹರು ಅವರ ಕಾಲದಿಂದ ಇಂದಿನವರೆಗೂ ಕಾಂಗ್ರೆಸ್ ಜನಪರ ಕಾರ್ಯಕ್ರಮಗಳನ್ನೇ ಜನರಿಗಾಗಿ ನೀಡುತ್ತಿದೆ; ನಮ್ಮ ಸರ್ಕಾರ ಎಂದಿಗೂ ಜನಪರವಾಗಿ ಇರಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.