ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೊಸ ವರ್ಷದ ಅಂಗವಾಗಿ ಸಾಲು ಸಾಲು ರಜೆಗಳಿವೆ ಎಂದು ಫ್ಯಾಮಿಲಿ, ಸ್ನೇಹಿತರ ಜೊತೆ ವಿವಿಧ ಪ್ರವಾಸಿ ತಾಣಗಳ ವೀಕ್ಷಣೆಗೆ ಹೋಗುವ ಮುನ್ನ ಈ ಸ್ಟೋರಿ ಓದಿ ತೀರ್ಮಾನ ಮಾಡಿ, ಏಕೆಂದರೆ ಕೆಲವು ಪ್ರಸಿದ್ಧ ಸ್ಥಳಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಬೆಂಗಳೂರು ಸಮೀಪದ ನಂದಿ ಗಿರಿಧಾಮ(ನಂದಿ ಬೆಟ್ಟ), ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸೇರಿ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ನಂದಿಗಿರಿಧಾಮಕ್ಕಿಲ್ಲ ಪ್ರವೇಶ–
ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವಪ್ರಸಿದ್ಧ ಪ್ರವಾಸಿತಾಣ ನಂದಿಗಿರಿಧಾಮಕ್ಕೆ ಡಿ.31ರ ಮಧ್ಯಾಹ್ನ 2ರಿಂದ ಜ.1ರ ಬೆಳಿಗ್ಗೆ 10 ಗಂಟೆಯವರೆಗೆ ಹೊಸ ವರ್ಷಾಚರಣೆಗೆ ಬಂದ್ ಆಗಿರಲಿದೆ.

ಅತಿಥಿಗೃಹ ಬುಕ್ ಮಾಡಿದವರನ್ನು ಹೊರತುಪಡಿಸಿ ಉಳಿದ ಪ್ರವಾಸಿಗರಿಗೆ ನಿಷೇಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಆದೇಶ ಮಾಡಿದ್ದಾರೆ. ಕುಡಿದು ಪ್ರವಾಸಿಗರ ಮೋಜು ಮಸ್ತಿ ಮಾಡೋದನ್ನು ತಡೆಯುವ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರೋದಾಗಿ ಅವರು ತಿಳಿಸಿದ್ದಾರೆ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಗೆ ನಿರ್ಬಂಧ–
ನ್ಯೂ ಇಯರ್ ಆಚರಣೆಗೆ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಜಿಲ್ಲಾಡಳಿತ ಅಲರ್ಟ್ ಆಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸೇರಿ ಪ್ರವಾಸಿತಾಣಗಳಿಗೆ ಡಿ.31ರ ಸಂಜೆ 6 ಗಂಟೆಯಿಂದ ಜ.1ರ ಬೆಳಗ್ಗೆ 6 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರವಾಸಿ ಸ್ಥಾಳಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಪ್ರವಾಸಿತಾಣಗಳಲ್ಲಿ ಪಾರ್ಟಿ, ನ್ಯೂ ಇಯರ್ ಆಚರಣೆಗೂ ನಿರ್ಬಂಧ ಹೇರಲಾಗಿದೆ.
ಬನ್ನೇರುಘಟ್ಟ ಮೃಗಾಲಯ ಮಂಗಳವಾರವೂ ಓಪನ್–
ಕ್ರಿಸ್ ಮಸ್ ಮತ್ತು ಹೊಸವರ್ಷಾಚರಣೆ ರಜೆ ಹಿನ್ನೆಲೆ ಮಂಗಳವಾರವೂ ಬನ್ನೇರುಘಟ್ಟ ಮೃಗಾಲಯ ಓಪನ್ ಇರಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಝೂಗೆ ಭೇಟಿ ನೀಡುವ ಸಾಧ್ಯತೆ ಹಿನ್ನಲೆ ವಾಡಿಕೆಯ ರಜೆ ದಿನವೂ ಮೃಗಾಲಯ ಓಪನ್ ಇರಲಿದೆ. ಪ್ರವಾಸಿಗರಿಗೆ ಮೃಗಾಲಯ ಮತ್ತು ಚಿಟ್ಟೆ ಪಾರ್ಕ್ ನೋಡಲು ಅವಕಾಶ ಇರಲಿದ್ದು, ಆನ್ಲೈನ್ ಮೂಲಕವೂ ಡಿಕೆಟ್ ಪಡೆದುಕೊಳ್ಳಬಹುದು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ಮಂಡಳಿ ತಿಳಿಸಿದೆ.

