ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಾಬಾ ಸಾಹೇಬರ ಶಿಕ್ಷಣಕ್ಕೆ ದಕ್ಕೆ ಆಗಬಾರದೆಂದು, ತನ್ನ ಹೆತ್ತ ಮಗುವಿನ ಸಾವಿನ ಸುದ್ದಿಯು ಸಹ ತಿಳಿಸದೇ ತನ್ನಲ್ಲಿ ಅದುವಿಟ್ಟುಕೊಂಡ ಸಹನಮೂರ್ತಿ ರಮಾಬಾಯಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.
ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ರಮಾಬಾಯಿ ಅಂಬೇಡ್ಕರ್ ಅವರ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಿಕ್ಕವಯಸ್ಸಿಗೆ ಬಾಬಾರನ್ನು ಮದುವೆಯಾದರೂ, ಅವರ ಎಲ್ಲಾ ಹೋರಾಟ, ತ್ಯಾಗಕ್ಕೆ ಆಕ್ಷೇಪಿಸದೇ, ಹೆಗಲಾಗಿ ನಿಂತ ದರಿದ್ರ್ಯಬದುಕಿನ ಭಾರತೀಯರಿಗೆ ಮಾತೆಯಾಗಿದ್ದಾರೆ. ಆಕೆಯ ತ್ಯಾಗ, ಬಾಬಾರ ಮೇಲಿನ ಪ್ರೀತಿ, ಸಂಸಾರ ಹೊಣೆ ನಿಭಾಯಿಸಿದ ರೀತಿ, ಭಾರತದ ಚರಿತ್ರೆಯನ್ನು ಬದಲಾಯಿಸುವಂತ ಅಂಬೇಡ್ಕರ್ ವ್ಯಕ್ತಿತ್ವ ರೂಪಿಸುವಲ್ಲಿ ಆಕೆಯ ಪಾತ್ರ ಅಜರಾಮರವಾಗಿದೆ. ಸಮಾನತೆ ಬಯಸುವವರ ಆತ್ಮದಲ್ಲಿ ಜೈ ಭೀಮ್ ನಾಮ ಇರುವವರೆಗೂ ರಮಾಬಾಯಿ ಎಂಬ ಹೆಸರು ಅಚ್ಚಳಿಯದೇ ಉಳಿಯುತ್ತದೆ ಎಂದರು.
ಸಗಣಿ ಮಾರಿ ಅಂಬೇಡ್ಕರವರ ಓದಿಗೆ ಸಹಕರಿಸಿ, ತಮ್ಮ ಜೀವನ ತ್ಯಾಗ ಮಾಡಿ ಶೋಷಿತರ ಕತ್ತಲೆಯ ಬಾಳಿಗೆ ಸೂರ್ಯನನ್ನು ನೀಡಿದ ಮಹಾತಾಯಿ ಆಗಿದ್ದಾರೆ. ಅಲ್ಲದೇ ಅನಕ್ಷರತೆಯ ಪರಿಣಾಮ ಅರಿತಿದ್ದ ರಮಾಬಾಯಿ ಅವರು ತನ್ನಂತೆಯೇ ಬೇರೆ ಮಹಿಳೆಯರು ಅನುಭವಿಸಬಾರೆದಂದು ತಮ್ಮ ಪತಿಯ ಜೊತೆಗೂಡಿ ಇಡೀ ಜೀವನದುದ್ದಕ್ಕೂ ಶೋಷಿತರು ಮಹಿಳೆಯರ ಶಿಕ್ಷಣ, ಹಕ್ಕುಗಳನ್ನು ದೊರಕಿಸಿಕೊಡಲು ಹೋರಾಟ ಮಾಡುವ ಮೂಲಕ ಅನನ್ಯವಾದ ಸಾಮಾಜಿಕ ಕೊಡುಗೆ ನೀಡಿದ್ದಾರೆ ಎಂದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ದೇಶ ಕಟ್ಟುವ ಕಾರ್ಯಕ್ಕೆ ನಿರಂತರವಾಗಿ ಸಹಕಾರ, ಶ್ರಮವಹಿಸಿದ ಮಾತೆ ರಮಾಬಾಯಿ ಅಂಬೇಡ್ಕರ್ ಅವರು ಹೆಂಡತಿಯಾಗಿ ಗಂಡನ ಯಶಸ್ಸಿಗಾಗಿ ಮಾಡಿದ ತ್ಯಾಗ, ಸಾಮಾಜಿಕ ತುಡಿತದ ಮಾದರಿ ನಡೆಯನ್ನು ಇಂದಿನ ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಅವರ ಚರಿತ್ರೆಯನ್ನು ಪಠ್ಯಕ್ಕೆ ಸೇರ್ಪಡೆಯಾಗಬೇಕು. ಸರ್ಕಾರದ ವತಿಯಿಂದ ಜಯಂತಿ ಆಚರಿಸಬೇಕು. ಮರಣೋತ್ತರವಾಗಿ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಬೇಕು. ಮಾತೆ ರಮಾಬಾಯಿ ಅವರ ತ್ಯಾಗ ಮರೆಯುವಂತಿಲ್ಲ. ಸಮಸ್ಥ ಮಹಿಳೆಯರಿಗೆ ಆದರ್ಶ ಪ್ರಾಯರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಸುಮಾ, ಉಷಾ, ಉಪನ್ಯಾಸಕರಾದ ಈ.ನಾಗೇಂದ್ರಪ್ಪ, ಶಾಂತಮ್ಮ, ಶಕುಂತಲಾ, ಸಚಿನ್ ಗೌತಮ್, ಬೆಸ್ಕಾಂ ತಿಪ್ಪೇಸಾಮಿ, ಗಿರಿಜಾ, ತಿಪ್ಪಮ್ಮ, ತಿಪಟೂರು ಮಂಜು, ಬನ್ನಿಕೋಡ್ ರಮೇಶ ಇತರರಿದ್ದರು.