ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕುಂಚಿಟಿಗ ಸಂಘದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಶಾಶ್ವತ ನಿಧಿಗಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪಿಲಾಜನಹಳ್ಳಿ ಜಯಣ್ಣ ಅವರು ₹1 ಲಕ್ಷ ದೇಣಿಗೆ ನೀಡಿದ್ದು, ಅವರ ಈ ಕೊಡುಗೆಗೆ ಸಮಾಜದ ಮುಖಂಡರಾದ ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕುರುಬರಹಳ್ಳಿ ಪ್ರೊ.ಮೈಸೂರು ಶಿವಣ್ಣ, ಪ್ರಧಾನ ಕಾರ್ಯದರ್ಶಿ ಕೆ.ಜಿ ಹನುಮಂತರಾಯ, ಕಸವನಹಳ್ಳಿ ರಮೇಶ್ ಮತ್ತು ಕುಬೇರಪ್ಪ ಅವರು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿ, ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, "ಸಂಘದ ವತಿಯಿಂದ ಪ್ರತಿ ವರ್ಷ ಆಯೋಜಿಸುವ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ವರ್ಷ ವರ್ಷವೂ ದೇಣಿಗೆ ಕ್ರೂಡೀಕರಣ ಮಾಡುವುದು ಬೇಡ. ಸಮಾಜದ ಪ್ರಮುಖರು, ಉಳ್ಳವರು ಮತ್ತು ಮುಖ್ಯಸ್ಥರು ತಲಾ ಒಂದು ಅಥವಾ ಎರಡು ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದರೆ, ಆ ಮೊತ್ತವನ್ನು ಬ್ಯಾಂಕಿನಲ್ಲಿ ಮುದ್ದತು(ಠೇವಣಿ) ಇಟ್ಟು, ಅದರಿಂದ ಬರುವ ಬಡ್ಡಿಯ ಹಣದಲ್ಲೇ ಪ್ರತಿ ವರ್ಷ ನಿರಂತರವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬಹುದು" ಎಂಬ ಜಯಣ್ಣ ಅವರ ದೂರದರ್ಶಿತ್ವದ ಯೋಚನೆಯಂತೆ ಇತ್ತೀಚೆಗೆ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಭರವಸೆ ನೀಡಿದ್ದು ಅಂದರಂತೆ ಹಣ ನೀಡಿದ್ದಾರೆ. ಇದನ್ನು ಮುಕ್ತಕಂಠದಿಂದ ಸಮಾಜದವರು ಶ್ಲಾಘಿಸಿದರು.
ಕಳೆದ ವರ್ಷವೇ ಹಿರಿಯ ಪತ್ರಕರ್ತ ಆಲೂರು ಹನುಮಂತರಾಯಪ್ಪನವರು ಸಹ ಇದೇ ಉದ್ದೇಶಕ್ಕಾಗಿ ಈಗಾಗಲೇ ₹1,00,000 (ಒಂದು ಲಕ್ಷ ರೂ.) ದೇಣಿಗೆಯನ್ನು ಸಂಘಕ್ಕೆ ನೀಡಿದ್ದಾರೆ. ಇವರ ಹಾದಿಯಲ್ಲೇ ಈಗ ಪಿಲಾಜನಹಳ್ಳಿ ಜಯಣ್ಣ ಅವರ ಕುಟುಂಬವೂ ಕೈಜೋಡಿಸಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಈ ದೇಣಿಗೆ ಕ್ರೂಡೀಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆಸರೆಯಾಗಬೇಕು ಎಂದು ಅವರು ಆಶಿಸಿದರು.
ಈ ದೇಣಿಗೆ ಹಸ್ತಾಂತರ ಹಾಗೂ ಅಭಿನಂದನಾ ಸಂದರ್ಭದಲ್ಲಿ ಪಿಟ್ಲಾಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಕರಿಯಣ್ಣ, ರಮೇಶ್ ಹಾಗೂ ಹುಲಗಲಕುಂಟೆ ಗಿರೀಶ್ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.



