Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯೋಧರ ನಿಧಿಗೆ 10 ಲಕ್ಷ ಧನಸಹಾಯ: ವೃದ್ಧಾಶ್ರಮದಿಂದಲೇ ದೇಶಪ್ರೇಮ ಮೆರೆದ ಕರಿಬಸಮ್ಮ!

Advertisement
Advertisement

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ವೃತ್ತಿಯಲ್ಲಿದ್ದಾಗ ಅದೆಷ್ಟೋ ಗ್ರಾಮೀಣ ಕಣ್ಮಣಿಗಳಿಗೆ ಅಕ್ಷರ ದಾಸೋಹ ನೀಡಿದ ಹೆಣ್ಣುಜೀವ, ವಯೋಸಹಜ ಕಾಯಿಲೆಗಳಿಂದ ಬಳಲಿ ವೃದ್ಧಾಶ್ರಮ ಸೇರಿದರೂ ಅವರಲ್ಲಿನ ದೇಶಪ್ರೇಮದ ಕಿಚ್ಚು ಮಾತ್ರ ಆರಲಿಲ್ಲ. ತಮಗಿರುವ ಮಾರಕ ಕಾಯಿಲೆಗಳಿಂದ ಮುಕ್ತಿ ಪಡೆಯಲು 'ದಯಾಮರಣ'ಕ್ಕಾಗಿ ದೇಶದಲ್ಲೇ ಕಾನೂನು ಹೋರಾಟ ನಡೆಸುತ್ತಿರುವ ದಾವಣಗೆರೆಯ ನಿವೃತ್ತ ಶಿಕ್ಷಕಿ ಕರಿಬಸಮ್ಮ (86), ಗಡಿ ಕಾಯುವ ಯೋಧರಿಗಾಗಿ ತಮ್ಮ ಜೀವಮಾನದ ಸಂಪಾದನೆಯಾದ 10 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.

ತಮ್ಮ ಮನೆ ಮಾರಾಟ ಮಾಡಿದ ಹಣ ಹಾಗೂ ನಿವೃತ್ತಿ ಪಿಂಚಣಿಯನ್ನು ಒಗ್ಗೂಡಿಸಿ ಒಟ್ಟು 10 ಲಕ್ಷ ರೂಪಾಯಿಗಳ ಚೆಕ್ ಅನ್ನು ಕರಿಬಸಮ್ಮ ಅವರು ದಾವಣಗೆರೆ ಜಿಲ್ಲಾಧಿಕಾರಿ ಡಾ. ಗಂಗಾಧರಸ್ವಾಮಿ ಜಿ.ಎಂ. ಅವರ ಮೂಲಕ ಕೇಂದ್ರ ಸರ್ಕಾರದ 'ಭಾರತ್ ಕೀ ವೀರ್' ನಿಧಿಗೆ ಹಸ್ತಾಂತರಿಸಿದ್ದಾರೆ.

ದೇಶಪ್ರೇಮದ ಸಂಕಲ್ಪ ಈಡೇರಿಸಿದ ತೃಪ್ತಿ:
ಪ್ರಸ್ತುತ ದಾವಣಗೆರೆಯ ಎಂಸಿಸಿ 'ಬಿ' ಬ್ಲಾಕ್‌ನಲ್ಲಿರುವ ವೃದ್ಧಾಶ್ರಮದಲ್ಲಿ ವಾಸಿಸುತ್ತಿರುವ ಕರಿಬಸಮ್ಮ, ಯೋಧರ ಮೇಲಿನ ಭಕ್ತಿಯ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.

"ಐವತ್ತು ವರ್ಷಗಳ ಹಿಂದಿನಿಂದಲೂ ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಹಂಬಲ ನನ್ನಲ್ಲಿ ಪ್ರಶ್ನೆಯಾಗಿಯೇ ಉಳಿದಿತ್ತು. ಕಡಿದಾದ ಬೆಟ್ಟ-ಗುಡ್ಡಗಳಲ್ಲಿ ಹೆಂಡತಿ, ಮಕ್ಕಳನ್ನು ಬಿಟ್ಟು ದೇಶ ಕಾಯುವ ಯೋಧರ ತ್ಯಾಗ ಅನನ್ಯ. ನನ್ನ ಮನೆ ಮಾರಿದ 6 ಲಕ್ಷ ಹಣ ಈಗ ಬಡ್ಡಿ ಸೇರಿ 10 ಲಕ್ಷ ಆಗಿದೆ. ಅದನ್ನು ಯೋಧರಿಗೆ ಅರ್ಪಿಸಿ ಇಂದು ದೇಶದ ಋಣಮುಕ್ತಳಾಗಿದ್ದೇನೆ. ನನ್ನ ಸಂಕಲ್ಪ ಪೂರ್ಣಗೊಂಡಿದೆ."
ಕರಿಬಸಮ್ಮ, ನಿವೃತ್ತ ಶಿಕ್ಷಕಿ.

ಒಂದೆಡೆ ದೇಶಪ್ರೇಮ, ಮತ್ತೊಂದೆಡೆ ದಯಾಮರಣಕ್ಕಾಗಿ ಹೋರಾಟ:
ಕರಿಬಸಮ್ಮ ಅವರ ಬದುಕು ಕೇವಲ ದೇಶಪ್ರೇಮಕ್ಕೆ ಸೀಮಿತವಾಗಿಲ್ಲ, ಬದಲಿಗೆ ದೇಶದ ಕಾನೂನು ಇತಿಹಾಸದಲ್ಲಿಯೇ ಅವರು ವಿಶಿಷ್ಟ ಹೋರಾಟಗಾರ್ತಿ. 

ಕಾಯಿಲೆಗಳ ವಿರುದ್ಧ ಹೋರಾಟ: ಪ್ರಸ್ತುತ ಅವರು ತೀವ್ರ ರಕ್ತದೊತ್ತಡ, ಮಧುಮೇಹ, ಸ್ಲಿಪ್ ಡಿಸ್ಕ್ ಹಾಗೂ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ದಯಾಮರಣಕ್ಕಾಗಿ ಪತ್ರ: ಅಸಹನೀಯ ದೈಹಿಕ ನೋವಿನಿಂದ ಮುಕ್ತಿ ಪಡೆಯಲು ತಮಗೆ ದಯಾಮರಣ ಕಲ್ಪಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಹಲವು ಬಾರಿ ಪತ್ರ ಬರೆದಿದ್ದಾರೆ.

ಮಾರ್ಗಸೂಚಿಗಾಗಿ ಆಗ್ರಹ: ಕಳೆದ 30-40 ವರ್ಷಗಳಿಂದ ದೇಶಾದ್ಯಂತ ದಯಾಮರಣ ಕಾಯ್ದೆ ವಿಸ್ತರಣೆಯಾಗಬೇಕು ಹಾಗೂ ಅದಕ್ಕೆ ಪೂರಕವಾದ ಸ್ಪಷ್ಟ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಹೊರಡಿಸಬೇಕು ಎಂದು ಅವರು ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ.

ಕರಿಬಸಮ್ಮ ಎಲ್ಲರಿಗೂ ಮಾದರಿ: ಜಿಲ್ಲಾಧಿಕಾರಿ ಶ್ಲಾಘನೆ
ಕರಿಬಸಮ್ಮ ಅವರ ವೃದ್ಧಾಶ್ರಮಕ್ಕೆ ಖುದ್ದಾಗಿ ಭೇಟಿ ನೀಡಿ ಚೆಕ್ ಸ್ವೀಕರಿಸಿದ ದಾವಣಗೆರೆ ಜಿಲ್ಲಾಧಿಕಾರಿ ಡಾ. ಗಂಗಾಧರಸ್ವಾಮಿ ಜಿ.ಎಂ. ಅವರು, "ಕರಿಬಸಮ್ಮ ಅವರ ನಡೆ ಪ್ರತಿಯೊಬ್ಬ ಭಾರತೀಯನಿಗೂ ಮಾದರಿ. ಅವರು ದಯಾಮರಣ ಕೋರಿ ಪತ್ರ ಬರೆದಾಗ ನಾನು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಪ್ರಸ್ತುತ ಇರುವ ಕಾನೂನುಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆ. ಆದರೆ, ಈ ಇಳಿ ವಯಸ್ಸಿನಲ್ಲೂ ಅವರು ಯೋಧರಿಗಾಗಿ ಇಷ್ಟೊಂದು ದೊಡ್ಡ ಮೊತ್ತದ ಹಣ ನೀಡಿರುವುದು ಅವರ ಉದಾತ್ತ ಗುಣವನ್ನು ತೋರಿಸುತ್ತದೆ. ನಮ್ಮ ದೇಶದ ಜನರೂ ಇಂತಹ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು" ಎಂದು ಕೃತಜ್ಞತೆ ಸಲ್ಲಿಸಿದರು.

ಅನಾರೋಗ್ಯದ ಮಂಚದ ಮೇಲಿದ್ದೂ ಭಾರತದ ವೀರ ಯೋಧರ ಕಲ್ಯಾಣಕ್ಕಾಗಿ ಮಿಡಿದ ಕರಿಬಸಮ್ಮ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.