ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಕಲಿ ದಾಖಲೆಗಳನ್ನು ಸೃಷ್ಟಿಸಿ, ನ್ಯಾಯಾಲಯವನ್ನೇ ದಾರಿ ತಪ್ಪಿಸುವ ಮೂಲಕ ಆದಿಚುಂಚನಗಿರಿ ಮಠಕ್ಕೆ ಸೇರಿದ ಸುಮಾರು 100 ಕೋಟಿ ರೂಪಾಯಿ ಮೌಲ್ಯದ 6 ಎಕರೆ ಭೂಮಿಯನ್ನು ಕಬಳಿಸಲು ಯತ್ನಿಸಿದ್ದ ಖತರ್ನಾಕ್ ಜಾಲವನ್ನು ಕುಂಬಳಗೋಡು ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಹಗರಣದಲ್ಲಿ ಭಾಗಿಯಾಗಿದ್ದ 6 ಸರ್ಕಾರಿ ನೌಕರರು ಸೇರಿದಂತೆ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಕುರಿತು ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್, "ಆದಿಚುಂಚನಗಿರಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿಗಳು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಜೈಲಿಗಟ್ಟಲಾಗಿದೆ" ಎಂದು ತಿಳಿಸಿದರು.
ಬಂಧಿತ ಆರೋಪಿಗಳಾದ ಫ್ರಾನ್ಸಿಸ್ (ಮುಖ್ಯ ಆರೋಪಿ), ಆರೋಗ್ಯಸ್ವಾಮಿ, ಶ್ರೀನಿವಾಸ್, ನರೇಂದ್ರ ಕುಮಾರ್, ಜೊಸೆಪ್. ಹಾಗೂ ಕಂದಾಯ ಇಲಾಖೆ ಅಧಿಕಾರಿ ದೀಪಕ್ (ಉಪ ತಹಶೀಲ್ದಾರ್, ಬೇಗೂರು ನಾಡ ಕಚೇರಿ), ಎಂ.ಪಿ. ರವಿ (ಉಪ ತಹಶೀಲ್ದಾರ್, ಕೆಂಗೇರಿ ನಾಡ ಕಚೇರಿ), ಕಿರಣ್ ಕುಮಾರ್ (ರಾಜಸ್ವ ನಿರೀಕ್ಷಕ, ಬನಶಂಕರಿ), ಎ.ಸಿ. ಅರುಣ್ ಕುಮಾರ್ (ರಾಜಸ್ವ ನಿರೀಕ್ಷಕ), ಶಿವಪ್ರಸಾದ್ (ಗ್ರಾಮ ಆಡಳಿತಾಧಿಕಾರಿ, ಬೇಗೂರು), ಎಂ. ಸತೀಶಕುಮಾರ್ (ಗ್ರಾಮ ಆಡಳಿತಾಧಿಕಾರಿ, ಕುಂಬಳಗೋಡು ವೃತ್ತ).
ಏನಿದು ಪ್ರಕರಣ?:
ಕೆಂಗೇರಿ ಹೋಬಳಿಯ ಕಂಬಿಪುರ ಗ್ರಾಮದ ಸರ್ವೆ ನಂಬರ್ 43ರಲ್ಲಿನ 45 ಎಕರೆ ಜಮೀನನ್ನು 2004ರಲ್ಲಿ ಕಂದಾಯ ಇಲಾಖೆಯಿಂದ ಆದಿಚುಂಚನಗಿರಿ ಮಠಕ್ಕೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿತ್ತು. ಈ ಪೈಕಿ ಶೈಕ್ಷಣಿಕ ಉದ್ದೇಶಕ್ಕಾಗಿ 35 ಎಕರೆ ಜಾಗವನ್ನು 2018ರಲ್ಲಿ ಮಠವು ಸರ್ಕಾರದಿಂದ ಅಧಿಕೃತವಾಗಿ ಖರೀದಿ ಮಾಡಿತ್ತು. ಇನ್ನುಳಿದ 10 ಎಕರೆ ಜಾಗವನ್ನು ಗೋಶಾಲೆಗಾಗಿ ಮೀಸಲಿಡಲಾಗಿತ್ತು.
ಈ ಬೆಲೆಬಾಳುವ ಜಾಗದ ಮೇಲೆ ಕಣ್ಣಿಟ್ಟ ಮುಖ್ಯ ಆರೋಪಿ ಫ್ರಾನ್ಸಿಸ್, ಅದರಲ್ಲಿನ 6 ಎಕರೆ ಜಾಗ ತನ್ನ ತಂದೆ ಆರೋಗ್ಯ ಸ್ವಾಮಿಗೆ ಸೇರಿದ್ದು ಎಂದು ಸುಳ್ಳು ತಕರಾರು ತೆಗೆದಿದ್ದ. ತಾನೇ ಆ ಭೂಮಿಯ ವಾರಸುದಾರ ಎಂದು ಬಿಂಬಿಸಿಕೊಳ್ಳಲು ನಕಲಿ ಮರಣ ಪ್ರಮಾಣಪತ್ರ, ನಕಲಿ ಸಾಗುವಳಿ ಚೀಟಿ ಸೇರಿದಂತೆ ಹತ್ತಾರು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. ಇಷ್ಟೇ ಅಲ್ಲದೆ, ಈ ನಕಲಿ ದಾಖಲೆಗಳನ್ನೇ ಕೋರ್ಟ್ಗೆ ಸಲ್ಲಿಸಿ ಜಿಲ್ಲಾ ನ್ಯಾಯಾಲಯದಿಂದ ಮಠದ ಜಾಗದ ವಿರುದ್ಧ ಆದೇಶವನ್ನೂ ಪಡೆದುಕೊಂಡಿದ್ದ!.
ಅಧಿಕಾರಿಗಳದ್ದೇ ಮೇಜರ್ ರೋಲ್!:
ಕೋಟಿ ಕೋಟಿ ಬೆಲೆಬಾಳುವ ಈ ಭೂಮಿಯನ್ನು ನುಂಗಲು ಫ್ರಾನ್ಸಿಸ್ಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ತಾಲೂಕು ಕಚೇರಿ ಮತ್ತು ಕಂದಾಯ ಇಲಾಖೆಯ ಭ್ರಷ್ಟ ನೌಕರರು ಸಾಥ್ ನೀಡಿದ್ದರು. ಮಧ್ಯವರ್ತಿಗಳ ಕುಮ್ಮಕ್ಕಿನಿಂದ ಕೆಂಗೇರಿ ನಾಡ ಕಚೇರಿಯ ಉಪ ತಹಶೀಲ್ದಾರ್ ಎಂ.ಪಿ ರವಿ, ಕಾನೂನು ಬಾಹಿರವಾಗಿ ಸುಳ್ಳು ವಂಶವೃಕ್ಷ ಪ್ರಮಾಣಪತ್ರ ಮಾಡಿಸಿಕೊಟ್ಟಿದ್ದರು. ಉಳಿದ ಕಂದಾಯ ಅಧಿಕಾರಿಗಳು ನಕಲಿ ದಾಖಲೆಗಳು ಅಸಲಿಯೆಂದು ವರದಿ ನೀಡಿ ದಗಾಬಾಜಿ ಆಟವಾಡಿದ್ದರು.
"ಮುಖ್ಯ ಆರೋಪಿ ಫ್ರಾನ್ಸಿಸ್ ತನ್ನದೇ ಆದ ಒಂದು ಸಂಘಟಿತ ತಂಡ ರಚಿಸಿಕೊಂಡು ಬೆಂಗಳೂರಿನ ಸುತ್ತಮುತ್ತಲಿರುವ ಸರ್ಕಾರಿ ಹಾಗೂ ಬೆಲೆ ಬಾಳುವ ಖಾಸಗಿ ಜಮೀನುಗಳನ್ನು ಕಬಳಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ 11 ಜನರನ್ನು ಬಂಧಿಸಲಾಗಿದ್ದು, ವಂಚಕ ಜಾಲದ ಬೇರುಗಳನ್ನು ಹುಡುಕಲು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ," ಎಂದು ಡಿಸಿಪಿ ಅನಿತಾ ಹದ್ದಣ್ಣನವರ್ ವಿವರಿಸಿದ್ದಾರೆ.



