ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ರಾಜ್ಯದ ಪ್ರಭಾವಿ ನಾಯಕ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಅವರ ಅಭಿಮಾನಿಗಳು ವಿಭಿನ್ನವಾಗಿ ಸಂಭ್ರಮಿಸಿದ್ದಾರೆ. ದಾವಣಗೆರೆಯ ಆರಾಧ್ಯ ದೈವ, ಶಕ್ತಿ ದೇವತೆ ಶ್ರೀ ದುರ್ಗಾಂಭಿಕಾ ದೇವಿಗೆ (ದುಗ್ಗಮ್ಮ) ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿ ಬಳಗ, "ಡಿಕೆಶಿ ಶೀಘ್ರದಲ್ಲೇ ಮುಖ್ಯಮಂತ್ರಿಯಾಗಲಿ" ಎಂದು ವಿಶೇಷ ಹರಕೆ ಕಟ್ಟಿಕೊಂಡಿದೆ.
ದೇವಿಯ ಮುಂದೆ ಫೋಟೋ ಹಿಡಿದು ಜೈಕಾರ!:
ಅಭಿಮಾನಿ ಬಳಗದ ಜಯಪ್ರಕಾಶ್ ನೇತೃತ್ವದಲ್ಲಿ ದೇವಸ್ಥಾನಕ್ಕೆ ಧಾವಿಸಿದ ನೂರಾರು ಅಭಿಮಾನಿಗಳು, ದುಗ್ಗಮ್ಮ ದೇವಿಯ ಗರ್ಭಗುಡಿಯ ಮುಂದೆ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಭಕ್ತಿಯಿಂದ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ನೆಚ್ಚಿನ ನಾಯಕನ ಪರವಾಗಿ ದೇವಸ್ಥಾನದ ಆವರಣದಲ್ಲಿ ಜೈಕಾರದ ಘೋಷಣೆಗಳು ಮೊಳಗಿದವು.
‘ಬಲಗಡೆಯಿಂದ ಹೂ ಬಿತ್ತು, ದೇವಿ ಗ್ರೀನ್ ಸಿಗ್ನಲ್ ನೀಡಿದಳು!’:
ಡಿಕೆಶಿ ಅವರು ಮುಖ್ಯಮಂತ್ರಿಯಾಗಲಿ ಎಂದು ಸಂಕಲ್ಪ ಮಾಡಿ ದೇವಸ್ಥಾನದ ಮುಂಭಾಗದಲ್ಲಿ ಏಕಕಾಲಕ್ಕೆ ೧೦೧ ತೆಂಗಿನಕಾಯಿಗಳನ್ನು ಒಡೆದು ಹರಕೆ ತೀರಿಸಲಾಯಿತು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಮಾನಿಗಳು, "ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕುಮಾರ್ ಅವರ ಶ್ರಮ ಮತ್ತು ಚಾಣಾಕ್ಷತನವೇ ಪ್ರಮುಖ ಕಾರಣ. ಹೀಗಾಗಿ ಇದೇ ಅವಧಿಯಲ್ಲಿ ಅವರನ್ನು ಮುಖ್ಯಮಂತ್ರಿ ಮಾಡಲೇಬೇಕು ಎಂಬುದು ನಮ್ಮ ಆಸೆ. ಇಂದು ನಾವು ಪೂಜೆ ಸಲ್ಲಿಸುವಾಗ ದೇವಿಯ ಬಲಭಾಗದಿಂದ ಹೂ ಕೆಳಗೆ ಬಿದ್ದಿದೆ. ಇದು ದೇವಿ ಆಶೀರ್ವಾದ ಮಾಡಿರುವುದಕ್ಕೆ ಸಾಕ್ಷಿ. ಡಿಕೆಶಿ ಅವರು ಸಿಎಂ ಆದ ತಕ್ಷಣವೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಭರ್ಜರಿ ಮಹಾಪ್ರಸಾದ ಸೇವೆ ನೀಡುವುದಾಗಿ ಹರಕೆ ಹೊತ್ತಿದ್ದೇವೆ" ಎಂದು ಹರ್ಷ ವ್ಯಕ್ತಪಡಿಸಿದರು.
ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಡಿಕೆಶಿ ಅಭಿಮಾನಿ ಬಳಗದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



