ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಯುವಜನತೆಯಲ್ಲಿ ಕ್ರೀಡಾ ಮನೋಭಾವ, ಶಿಸ್ತು ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಹಾಗೂ ಕ್ರೀಡಾಪಟುಗಳಿಗೆ ಉತ್ತಮ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಅವರು ಕ್ರೀಡಾ ಸವಲತ್ತುಗಳ ವಿವರಗಳನ್ನು ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಶಿವಕುಮಾರ್ ಪ್ರಕಟಿಸಿರುವ ಪ್ರಮುಖ ಕ್ರೀಡಾ ಯೋಜನೆಗಳು:
23 ಕ್ರೀಡಾ ಸಂಸ್ಥೆಗಳಿಗೆ 11.65 ಕೋಟಿ ಅನುದಾನ: ರಾಜ್ಯದ ವಿವಿಧ ಕ್ರೀಡೆಗಳನ್ನು ತಳಮಟ್ಟದಿಂದ ಉತ್ತೇಜಿಸಲು ಮತ್ತು ಕ್ರೀಡಾಪಟುಗಳಿಗೆ ಸಕಾಲದಲ್ಲಿ ಸೌಲಭ್ಯ ಒಡಗಿಸಲು ಒಟ್ಟು 23 ಕ್ರೀಡಾ ಸಂಸ್ಥೆಗಳಿಗೆ ಹನ್ನೊಂದು ಕೋಟಿ ಅರವತ್ತೈದು ಲಕ್ಷ ರೂಪಾಯಿಗಳ ವಿಶೇಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಸಾಧಕರಿಗೆ ಬದುಕಿನ ಭರವಸೆ: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಹೊತ್ತಿರುವ ರಾಜ್ಯದ ಯುವ ಪ್ರತಿಭೆಗಳಿಗೆ ಕ್ರೀಡಾ ಇಲಾಖೆಯ ಮೂಲಕ ಹಲವು ಸವಲತ್ತುಗಳನ್ನು ನೀಡಲಾಗುತ್ತಿದ್ದು, ಅವರ ಉಜ್ವಲ ಭವಿಷ್ಯಕ್ಕೆ ಕ್ರೀಡೆಯ ಮೂಲಕವೇ ಬದುಕಿನ ಹೊಸ ಮಾರ್ಗಗಳನ್ನು ಸರ್ಕಾರ ಕಲ್ಪಿಸುತ್ತಿದೆ.
ಒಲಿಂಪಿಕ್ ಸಾಧಕರಿಗೆ ಕೋಟ್ಯಂತರ ರೂಪಾಯಿ ನಗದು ಬಹುಮಾನ: ಕ್ರೀಡಾಲೋಕದ ಅತ್ಯುನ್ನತ ಕ್ರೀಡಾಕೂಟವಾದ ಒಲಿಂಪಿಕ್ಸ್ನಲ್ಲಿ ರಾಜ್ಯದ ಕ್ರೀಡಾಪಟುಗಳು ದೇಶಕ್ಕೆ ಕೀರ್ತಿ ತಂದರೆ ಅವರಿಗೆ ನೀಡಲಾಗುವ ನಗದು ಬಹುಮಾನದ ಮೊತ್ತವನ್ನು ಸರ್ಕಾರ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ.
ಒಲಿಂಪಿಕ್ ಪದಕ ವಿಜೇತರಿಗೆ ಸಿಗಲಿರುವ ನಗದು ಬಹುಮಾನದ ವಿವರ:
ಪದಕದ ವಿವರ ನಗದು ಬಹುಮಾನದ ಮೊತ್ತ
ಚಿನ್ನದ ಪದಕ (Gold Medal)-6 ಕೋಟಿ, ಬೆಳ್ಳಿ ಪದಕ (Silver Medal) 4 ಕೋಟಿ, ಕಂಚಿನ ಪದಕ (Bronze Medal) 3 ಕೋಟಿ.
"ಯುವಜನತೆಯಲ್ಲಿ ಶಿಸ್ತು ಮತ್ತು ಆತ್ಮವಿಶ್ವಾಸ ಮೂಡಿಸಲು ಕ್ರೀಡೆ ಅತ್ಯುತ್ತಮ ಮಾಧ್ಯಮವಾಗಿದೆ. ನಮ್ಮ ರಾಜ್ಯದ ಕ್ರೀಡಾಪಟುಗಳು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ 6 ಕೋಟಿಯವರೆಗೆ ನಗದು ಬಹುಮಾನ ನೀಡುವ ಮೂಲಕ ಅವರ ಶ್ರಮಕ್ಕೆ ತಕ್ಕ ಮನ್ನಣೆ ನೀಡಲು ಸರ್ಕಾರ ಸಿದ್ಧವಿದೆ." ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ
ರಾಜ್ಯ ಸರ್ಕಾರದ ಈ ವಿಶೇಷ ಅನುದಾನ ಹಾಗೂ ಬಂಪರ್ ಬಹುಮಾನದ ಪ್ರಕಟಣೆಯು ಕ್ರೀಡಾ ವಲಯದಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದ್ದು, ಗ್ರಾಮೀಣ ಹಾಗೂ ನಗರ ಭಾಗದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಜಾಗತಿಕ ವೇದಿಕೆಯಲ್ಲಿ ಮಿಂಚಲು ಇದು ದೊಡ್ಡ ಪ್ರೇರಣೆಯಾಗಲಿದೆ ಎಂದು ಕ್ರೀಡಾ ಪ್ರೇಮಿಗಳು ಆಶಿಸಿದ್ದಾರೆ.



