ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ರಾಜ್ಯದ ಕಾಂಗ್ರೆಸ್ ಸರ್ಕಾರದ ಲೂಟಿಗೆ ಕೊನೆಯಿಲ್ಲ, ಹಗರಣಗಳ ಸರಮಾಲೆಗೆ ಅಂತ್ಯವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿಯೊಂದು ಇಲಾಖೆಯೂ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆ," ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಜಾರಿ ನಿರ್ದೇಶನಾಲಯ ನಡೆಸಿರುವ ದಾಳಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಇ.ಡಿ ದಾಳಿಯಲ್ಲಿ ಬಯಲಾದ ನಗ್ನಸತ್ಯಗಳು:
ಪತ್ರಿಕಾ ವರದಿಯನ್ನು ಆಧರಿಸಿ ಆರ್. ಅಶೋಕ್ ಅವರು ಪ್ರಮುಖವಾಗಿ ಮೂರು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
ಸಚಿವರ ಆಪ್ತರ ನಂಟು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸ್ವಂತ ಭಾವ, ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ವೈ.ಡಿ. ಮಂಜುನಾಥ್ ಮತ್ತು ಅವರ ಸಹಚರರ ಕಡೆಯಿಂದ ಬರೋಬ್ಬರಿ 13.3 ಕೋಟಿ ಮೌಲ್ಯದ ಕಪ್ಪು ಹಣ ಹಾಗೂ ಚಿನ್ನ ಪತ್ತೆಯಾಗಿದೆ.
ಲಂಚ ಲೆಕ್ಕದ ‘ಮಾಸ್ಟರ್ ಬುಕ್’: ಯಾರಿಂದ ಎಷ್ಟು ಕಲೆಕ್ಷನ್ ಆಗಿದೆ? ಆ ಹಣ ಯಾರಿಗೆಲ್ಲ ತಲುಪಿದೆ? ಎಂಬ ಇಂಚಿಂಚು ಮಾಹಿತಿಯಿರುವ ‘ರಹಸ್ಯ ಲಂಚದ ಪುಸ್ತಕ’ ಈಗ ಇ.ಡಿ ಅಧಿಕಾರಿಗಳ ಕೈಸೇರಿದೆ.
ಬೇನಾಮಿ ಬಾರ್ ಲೈಸೆನ್ಸ್ ದಂಧೆ: ಅಧಿಕಾರಿಗಳೇ ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಹೆಸರಿನಲ್ಲಿ ಬೇನಾಮಿ ಲೈಸೆನ್ಸ್ ಪಡೆದು ಇಡೀ ವ್ಯವಸ್ಥೆಯನ್ನು ನುಂಗಿ ನೀರು ಕುಡಿಯುತ್ತಿದ್ದಾರೆ.
ಸರ್ಕಾರಕ್ಕೆ ಆರ್. ಅಶೋಕ್ ನೇರ ಪ್ರಶ್ನೆಗಳು:
ರಾಜ್ಯದ 14 ಪ್ರಮುಖ ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಈ ಬ್ರಹ್ಮಾಂಡ ಹಗರಣದ ಬಣ್ಣ ಬಯಲು ಮಾಡಿದ್ದಾರೆ ಎಂದು ತಿಳಿಸಿರುವ ಅವರು, ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಮೂರು ನೇರ ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ‘ರಹಸ್ಯ ಪುಸ್ತಕ’ದಲ್ಲಿ ದಾಖಲಾಗಿರುವ ಹಣದ ಪಾಲಿನಲ್ಲಿ ನಿಮ್ಮ ಪಾಲೂ ಸೇರಿದೆಯೇ?, ತಿಂಗಳ ಕಮಿಷನ್ ದಂಧೆಯ ಹಣ ದೆಹಲಿ ಹೈಕಮಾಂಡ್ಗೆ ತಲುಪುತ್ತಿದ್ದೆಯೇ?, ರಾಜ್ಯದ ಜನತೆಯ ರಕ್ತ ಹಿರುವ ಈ ಸಂಘಟಿತ ಸಿಂಡಿಕೇಟ್ನ ಅಸಲಿ ಪಿತಾಮಹ ಯಾರು?.
"ನಿಮ್ಮ ಸರ್ಕಾರದ ಒಂದೊಂದೇ ಇಲಾಖೆಯ ಲೂಟಿ ಬಯಲಾಗುತ್ತಿದ್ದರೂ ಇನ್ನು ಎಷ್ಟು ದಿನ ಮೌನವಾಗಿರುತ್ತೀರಿ? ಕರ್ನಾಟಕದ ಜನತೆ ನಿಮ್ಮ ಈ ಕಮಿಷನ್ ಆಡಳಿತವನ್ನು ಎಂದಿಗೂ ಕ್ಷಮಿಸುವುದಿಲ್ಲ," ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಈ ಹಗರಣವನ್ನು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆಗೆ ಅಥವಾ ಸಿಬಿಐಗೆ ವಹಿಸಬೇಕು ಮತ್ತು ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.



