ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ೨೦೨೩-೨೪ ಮತ್ತು ೨೦೨೪-೨೫ನೇ ಸಾಲಿನಲ್ಲಿ ಬರಪೀಡಿತ ಪ್ರದೇಶಗಳ ತುರ್ತು ಕುಡಿಯುವ ನೀರಿನ ಯೋಜನೆಗಾಗಿ ಬಿಡುಗಡೆಯಾಗಿದ್ದ ಸುಮಾರು ೭ ಕೋಟಿ ರೂಪಾಯಿ ಅನುದಾನದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಾಗೂ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಜಿಪಂ ಸಿಇಒ ಸೋಮಶೇಖರ್, ಹಿಂದಿನ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್ ಹಾಗೂ ಹಾಲಿ ಕಾರ್ಯಪಾಲಕ ಅಭಿಯಂತರ ಅಮರ್ನಾಥ್ ಜೈನ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಅಭಿಯಂತರರ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಿಸಲಾಗಿದೆ.
ಬರ ಪರಿಹಾರ ಅನುದಾನ ಬಿಡುಗಡೆ:
೨೦೨೩-೨೪ನೇ ಸಾಲಿನಲ್ಲಿ ತೀವ್ರ ಮಳೆಯ ಅಭಾವ ಮತ್ತು ಬರದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ೦೬ ತಾಲೂಕುಗಳಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ಸರ್ಕಾರದಿಂದ ೪ ಹಂತಗಳಲ್ಲಿ ಒಟ್ಟು ೭ ಕೋಟಿ ಅನುದಾನ ಬಿಡುಗಡೆಯಾಗಿತ್ತು.
ಆರ್ಟಿಐ ಅರ್ಜಿಗೆ ಸ್ಪಂದಿಸದ ಅಧಿಕಾರಿಗಳು:
ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ೬ ತಾಲೂಕುಗಳ ಉಪವಿಭಾಗಗಳಿಗೆ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಉಪವಿಭಾಗದಿಂದ ಸರಿಯಾದ ಮಾಹಿತಿ ಸಿಗದ ಕಾರಣ ದಾವಣಗೆರೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತದ ಅಧೀಕ್ಷಕ ಅಭಿಯಂತರರಿಗೆ ದೂರು ನೀಡಿ ಇಲಾಖಾ ತನಿಖೆಗೆ ಒತ್ತಾಯಿಸಲಾಗಿತ್ತು.
ಕಡತ ಪರಿಶೀಲನೆ ವೇಳೆ ಬಯಲಾದ ಕಾಯ್ದಿಟ್ಟ ಸತ್ಯ:
ದಾವಣಗೆರೆ ಎಸ್ಇ ಅವರ ಸೂಚನೆ ಮೇರೆಗೆ ಚಿತ್ರದುರ್ಗ ಕಾರ್ಯಪಾಲಕ ಅಭಿಯಂತರರು ಅರ್ಜಿದಾರರಿಗೆ ಕಡತ ಪರಿಶೀಲನೆಗೆ ಅವಕಾಶ ನೀಡಿದರು. ಆದರೆ, ವಿವಿಧ ಉಪವಿಭಾಗಗಳಿಗೆ ಭೇಟಿ ನೀಡಿದಾಗ ಅಧಿಕಾರಿಗಳ ಅಸಲಿ ಬಣ್ಣ ಬಯಲಾಗಿದೆ.
ಚಿತ್ರದುರ್ಗ ಉಪವಿಭಾಗ: ಒಟ್ಟು ೮೦ ಕಾಮಗಾರಿಗಳ ಪೈಕಿ ಕೇವಲ ೨೩ ಕಾಮಗಾರಿಗಳ ಕಡತಗಳು (ಅಂದಾಜು ೩೭.೮೮ ಲಕ್ಷ) ಲಭ್ಯವಿದ್ದು, ಉಳಿದ ೫೭ ಕಡತಗಳು ಇಲ್ಲವೆಂದು ಸಿಬ್ಬಂದಿ ದೃಢೀಕರಿಸಿದ್ದಾರೆ.
ಚಳ್ಳಕೆರೆ ಉಪವಿಭಾಗ: ೮೦ ಕಾಮಗಾರಿಗಳಲ್ಲಿ ಕೇವಲ ೨೮ ಕಡತಗಳು ಲಭ್ಯವಿದ್ದು, ಉಳಿದ ೫೨ ಕಡತಗಳು ನಾಪತ್ತೆಯಾಗಿವೆ.
ಹಿರಿಯೂರು, ಹೊಸದುರ್ಗ ಮತ್ತು ಹೊಳಲ್ಕೆರೆ ಉಪವಿಭಾಗಗಳು: ಈ ಕಚೇರಿಗಳಲ್ಲಿ ತುರ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ಯಾವುದೇ ಒಂದೂ ಕಡತ (ಫೈಲ್) ಲಭ್ಯವಿಲ್ಲ ಎಂದು ಸಿಬ್ಬಂದಿ ಲಿಖಿತ ದೃಢೀಕರಣ ನೀಡಿದ್ದಾರೆ.
ಹಾಲಿ ಇಇ ವಿರುದ್ಧ ಕರ್ತವ್ಯ ಲೋಪ ಆರೋಪ:
ಕಡತಗಳು ಸಿಗದಿದ್ದಾಗ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಮತ್ತು ತನಿಖಾ ವರದಿ ನೀಡುವಂತೆ ಚಿತ್ರದುರ್ಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಹಾಲಿ ಕಾರ್ಯಪಾಲಕ ಅಭಿಯಂತರ ಅಮರ್ನಾಥ್ ಜೈನ್ ಅವರಿಗೆ ಮನವಿ ಮಾಡಲಾಗಿತ್ತು. ಆದರೆ ಅವರು ಸೂಕ್ತ ತನಿಖೆ ನಡೆಸಲು ಹಾಗೂ ಮಾಹಿತಿ ನೀಡಲು ವಿಫಲರಾದ ಕಾರಣ ಅವರ ವಿರುದ್ಧ ಕರ್ತವ್ಯ ಲೋಪದಡಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಯಾರ್ಯಾರ ವಿರುದ್ಧ ಲೋಕಾಯುಕ್ತ ದೂರು?
ಸರ್ಕಾರ ಬಿಡುಗಡೆ ಮಾಡಿದ ಹಣಕ್ಕೆ ಸೂಕ್ತ ಲೆಕ್ಕಪತ್ರ ಹಾಗೂ ಕಡತಗಳೇ ಇಲ್ಲದಿರುವುದು ಕೋಟ್ಯಂತರ ರೂಪಾಯಿ ದುರುಪಯೋಗವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಹಿಂದಿನ ಚಿತ್ರದುರ್ಗದ ಜಿಪಂ ಸಿಇಒ ಸೋಮಶೇಖರ್, ಅಂದಿನ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್, ಹಾಲಿ ಕಾರ್ಯಪಾಲಕ ಅಭಿಯಂತರ ಅಮರ್ನಾಥ್ ಜೈನ್, ಜಿಲ್ಲೆಯ ೬ ಉಪವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ 23 ಸಹಾಯಕ ಕಾರ್ಯಪಾಲಕ ಅಭಿಯಂತರರು, 13 ಸಹಾಯಕ ಅಭಿಯಂತರರು ಮತ್ತು ಕಿರಿಯ ಅಭಿಯಂತರರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ದುರುಪಯೋಗವಾದ ಅನುದಾನವನ್ನು ವಸೂಲಿ ಮಾಡಬೇಕು ಎಂದು ವಕೀಲ ಡಾ.ಕೆ.ಎ ಓಬಳಪ್ಪ ಒತ್ತಾಯಿಸಿದ್ದಾರೆ.
ಅಶೋಕ್, ನಾಗರಾಜ್ ಪೂಜಾರ್, ಹನುಮಂತಪ್ಪ ಅವರು ಸುದ್ದಿ ಗೋಷ್ಠಿಯಲ್ಲಿ ಇದ್ದರು.



