Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಆರೋಪ ಪಟ್ಟಿ ( ಚಾರ್ಜ್ ಶೀಟ್ )....

ಆರೋಪ ಪಟ್ಟಿ ( ಚಾರ್ಜ್ ಶೀಟ್ )........

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:

ರಾಜ್ಯದಲ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿದ ಮತ್ತು ಈಗಲೂ ನಿರಂತರ ಎಲೆಕ್ಟ್ರಾನಿಕ್ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಆಗಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ದರ್ಶನ್ ಮತ್ತು ಇತರರ ಮೇಲಿನ ಆರೋಪ ಪಟ್ಟಿ ಮತ್ತು ಇಡೀ ದೇಶಾದ್ಯಂತ ಸುದ್ದಿ ಮಾಡಿದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪ ಪಟ್ಟಿ ಎರಡನ್ನು ಕಾನೂನಿನ ನಿಯಮದಂತೆ 90 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಆರೋಪ ಪಟ್ಟಿಯನ್ನು ದೃಶ್ಯ ಮಾಧ್ಯಮಗಳು ಮತ್ತು ಪತ್ರಿಕಾ ಮಾಧ್ಯಮಗಳು ವಿಮರ್ಶಾತ್ಮಕವಾಗಿ ಅದರ ಮುಖ್ಯಾಂಶಗಳನ್ನು ಚರ್ಚಿಸುತ್ತಾ, ಪ್ರಕಟಿಸುತ್ತಾ ಇವೆ. ಜನರಿಗೂ ಈ ಆರೋಪ ಪಟ್ಟಿಯ ಅಂಶಗಳು ಸಾಕಷ್ಟು ಕುತೂಹಲ ಮೂಡಿಸುತ್ತಿದೆ....

ಪೊಲೀಸರು ಸಲ್ಲಿಸಿರುವ ಈ ಆರೋಪ ಪಟ್ಟಿ ನ್ಯಾಯಾಲಯದಲ್ಲಿ ಹೇಗೆ ಸಾಕ್ಷಿ ಸಮೇತ ಆರೋಪಿಗಳ ಮೇಲೆ ಶಿಕ್ಷಾರ್ಹ ಅಪರಾಧವನ್ನು ನಿರೂಪಿಸುತ್ತದೆ, ಪ್ರತಿವಾದಿಗಳು ಹೇಗೆ ಆ ಆರೋಪಗಳನ್ನು ನಿರಾಕರಿಸುತ್ತಾರೆ, ಕೊನೆಗೆ ನ್ಯಾಯಾಲಯ ಯಾವ ರೀತಿಯ ತೀರ್ಪು ನೀಡಬಹುದು ಎಂದು ಅತ್ಯಂತ ಆಸಕ್ತಿಯಿಂದ ಗಮನಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ಈ ವಿಷಯಗಳ ವಾದ ಪ್ರತಿವಾದಗಳು ಸಹ ಇದೇ ರೀತಿ ಮಾಧ್ಯಮಗಳಲ್ಲಿ ಬಹಿರಂಗವಾಗಿ ಪ್ರಚಾರ ಮತ್ತು ಪ್ರಸಾರವಾಗಬಹುದು.....

ವಾಸ್ತವಿಕವಾಗಿ ನಮ್ಮ ಪೊಲೀಸ್ ವ್ಯವಸ್ಥೆ ಕಾರ್ಯನಿರ್ವಹಣೆ ವಿವಿಧ ರೀತಿಯಲ್ಲಿ ಭಿನ್ನವಾಗಿರುತ್ತದೆ. ಕಡು ಬಡವರು, ಹೆಚ್ಚು ಕಡಿಮೆ ಯಾರೂ ದಿಕ್ಕಿಲ್ಲದವರು, ಯಾವುದೇ ಪ್ರಭಾವ ಹೊಂದಿರದವರು ಅಪರಾಧ ಮಾಡಿದಾಗ ಅವರ ಮೇಲಿನ ಆರೋಪ ಪಟ್ಟಿ ಒಂದು ರೀತಿಯಲ್ಲಿದ್ದರೆ ಅಂದರೆ ಅವರು ಮಾಡಿರುವ ತಪ್ಪುಗಳ ಜೊತೆ ಅವಕಾಶ ಸಿಕ್ಕರೆ ಅವರು ಮಾಡದ ತಪ್ಪುಗಳನ್ನು ಸೇರಿಸಿ ಆರೋಪಪಟ್ಟಿ ಸಲ್ಲಿಸುತ್ತಾರೆ.....

ಹಾಗೆಯೇ ಅಪರಾಧ ಮಾಡುವವರು ಸ್ವಲ್ಪಮಟ್ಟಿಗೆ ಶ್ರೀಮಂತರು ಮತ್ತು ಪ್ರಭಾವಿಗಳು ಆಗಿದ್ದರೆ ಅವರ ಹಣ ಮತ್ತು ಪ್ರಭಾವದಿಂದಾಗಿ ಅದು ಆರೋಪ ಪಟ್ಟಿ ತಯಾರಿಸುವವರ ಮೇಲೆಯೂ ಸ್ವಲ್ಪ ಪ್ರಭಾವ ಬೀರಿ ಅದು ಇನ್ನೊಂದು ರೀತಿಯಲ್ಲಿ ಆರೋಪಿಗಳಿಗೆ ಸ್ವಲ್ಪ ಅನುಕೂಲಕರವಾಗಿ ಇರುತ್ತದೆ.....

ಕೆಲವೊಮ್ಮೆ ಅಪರಾಧಿಗಳು ಅಥವಾ ಆರೋಪಿಗಳು ಪ್ರಖ್ಯಾತ, ಜನಪ್ರಿಯ, ಶ್ರೀಮಂತ, ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದಾಗ ಅಥವಾ ಆ ಸ್ಥಾನದಲ್ಲಿದ್ದಾಗ ಅವರ ಮೇಲಿನ ಆರೋಪ ಪಟ್ಟಿ ಇನ್ನೊಂದು ರೀತಿಯಲ್ಲಿ ಇರುತ್ತದೆ. ಅಂದರೆ ಅವರಿಗೆ ಅವರ ಈ ಸಮಾಜದಲ್ಲಿರುವ ಅವರ ವ್ಯಾವಹಾರಿಕ ಸಂಬಂಧಗಳು ಸಾಕಷ್ಟು ಸಹಾಯ ಮಾಡಿ ಆರೋಪಪಟ್ಟಿ ಸ್ವಲ್ಪಮಟ್ಟಿಗೆ ಪೇಲವವಾಗಬಹುದು.....

ಒಂದು ವೇಳೆ ಒಬ್ಬ ನಿಷ್ಠಾವಂತ ಪೊಲೀಸ್ ತನಿಖಾಧಿಕಾರಿಯ ಕೈಯಲ್ಲಿ ಆ ಘಟನೆ ವಿಚಾರಣೆಗೆ ಒಳಪಟ್ಟಾಗ ಆತ ಅತ್ಯಂತ ಪ್ರಾಮಾಣಿಕವಾಗಿ, ನಡೆದ ಎಲ್ಲ ಘಟನೆಗಳನ್ನು ಸಂಪೂರ್ಣ ಸಾಕ್ಷಿ ಸಮೇತ ಅಪರಾಧಿಗೆ ಅಥವಾ ಆರೋಪಿಗೆ ಶಿಕ್ಷೆಯಾಗುವ ರೀತಿಯಲ್ಲಿ ಅತ್ಯಂತ ಕ್ರಮಬದ್ಧವಾಗಿ ಆರೋಪಪಟ್ಟೆ ಸಲ್ಲಿಸುತ್ತಾರೆ. ಇದು ಮತ್ತೊಂದು ರೀತಿಯದು......

ಹಾಗೆಯೇ ಕೆಲವೊಮ್ಮೆ ಮಗದೊಂದು ರೀತಿ ಅಂದರೆ ಅತ್ಯಂತ ನಿರ್ಲಕ್ಷದಿಂದ ಅಥವಾ ಪ್ರಭಾವಕ್ಕೊಳಗಾಗಿ ಅಥವಾ ಹಣ ಪಡೆದು ಆರೋಪಿಗಳಿಗೆ ಅನುಕೂಲಕರವಾಗುವ ಅಂಶಗಳನ್ನೇ ಆರೋಪ ಪಟ್ಟಿಯಲ್ಲಿ ಸೇರಿಸಿ ಅನಾನುಕೂಲಕರ ಅಂಶಗಳನ್ನು ಅದರಿಂದ ಮರೆಮಾಚಲಾಗುತ್ತದೆ. ಅದು ಅಪರಾಧಗಳಲ್ಲಿ ಭಾಗಿಯಾಗಿರುವವರ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ......

ಇದು ಈ ದೇಶದ ಕಾನೂನು ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ಸಹಜ ಸ್ವಾಭಾವಿಕ ಅನುಷ್ಠಾನದ ರೀತಿಯಾಗಿದೆ. ಈ ಆರೋಪ ಪಟ್ಟಿಯ ಆಧಾರದ ಮೇಲೆ ಆರೋಪಿಗಳು ತಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ವಕೀಲರನ್ನು ನೇಮಿಸಿಕೊಳ್ಳುತ್ತಾರೆ. ಆ ವಕೀಲರಲ್ಲೂ ಸಹ ಸಾಮರ್ಥ್ಯ, ಬುದ್ದಿವಂತಿಕೆ, ಚಾಣಾಕ್ಷತೆಯ ದೃಷ್ಟಿಯಿಂದ ಅನಧಿಕೃತವಾಗಿ ವಿವಿಧ ದರ್ಜೆಗಳನ್ನು, ಮಾರುಕಟ್ಟೆ ಮೌಲ್ಯವನ್ನು ಹೊಂದಿರುತ್ತಾರೆ....

ಅತ್ಯಂತ ಪ್ರಖ್ಯಾತರಾಗಿರುವ ಕ್ರಿಮಿನಲ್ ವಾದ ಮಂಡಿಸುವ ವಕೀಲರು ಬಹುತೇಕ ಎಂತಹ ಕಠಿಣ ಆರೋಪ ಹೊಂದಿರುವ ವ್ಯಕ್ತಿಗಳನ್ನು ಸಹ ತಮ್ಮ ವಕೀಲಿಕೆಯ ಜ್ಞಾನದಿಂದ ಜಾಮೀನು ಕೊಡಿಸುವ ಮತ್ತು ಆ ಕೇಸಿನಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ನಿರಪರಾಧಿ ಎಂದು ಸಾಧಿಸುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.....

ಮಧ್ಯಮ ದರ್ಜೆಯ ವಕೀಲರಾದರೆ ದೀರ್ಘಕಾಲ ಕೇಸನ್ನು ನಡೆಸಿ ಆರೋಪಿಗಳನ್ನು ರಕ್ಷಿಸುವ ಅಥವಾ ಶಿಕ್ಷೆಗೊಳಗಾಗುವ ಎರಡೂ ಸಾಧ್ಯತೆ ಇರುತ್ತದೆ. ಸಾಮಾನ್ಯ ವಕೀಲರಾದರೆ ಆರೋಪಿಗಳಿಗೆ ಶಿಕ್ಷೆಯಾಗುವ ಸಾಧ್ಯತೆಯೇ ಹೆಚ್ಚು......

ಇನ್ನು ಆರೋಪ ಪಟ್ಟಿಯ ರೀತಿಯಲ್ಲಿ ಅದನ್ನು ಸಮರ್ಥಿಸಿಕೊಳ್ಳುವ ಜವಾಬ್ದಾರಿ ಸಾಮಾನ್ಯವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಅಥವಾ ಸರ್ಕಾರಿ ವಕೀಲರಿಗೆ ಸೇರಿರುತ್ತದೆ. ಅದರಲ್ಲಿ ಕೆಲವೇ ಕೆಲವು ಪ್ರಖ್ಯಾತ, ದಕ್ಷ, ನಿಷ್ಠಾವಂತ ಸರ್ಕಾರಿ ವಕೀಲರನ್ನು ಹೊರತುಪಡಿಸಿದರೆ ಬಹುತೇಕರು ನಿರ್ಲಕ್ಷ್ಯದಿಂದಲೋ, ಪ್ರಭಾವಕ್ಕೊಳಗಾಗಿಯೋ ಅಥವಾ ಒಂದಷ್ಟು ಭ್ರಷ್ಟಾಚಾರದ ಆಸೆ ಅಂಶಗಳಿಗೆ ಒಳಗಾಗಿಯೋ ಕೇಸುಗಳನ್ನು ಸರಿಯಾಗಿ, ಪ್ರಾಮಾಣಿಕವಾಗಿ ನಿರ್ವಹಿಸದೆ ಆರೋಪಿಗಳಿಗೆ ಪರೋಕ್ಷವಾಗಿ ಸಹಾಯ ಮಾಡುವುದೂ ಉಂಟು....

ಸದ್ಯಕ್ಕೆ ನ್ಯಾಯಾಂಗ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿರುವುದೇ ಹೀಗೆ. ಈ ಎಲ್ಲಾ ವಾದ ಪ್ರತಿವಾದಗಳ ನಂತರ ನ್ಯಾಯಸ್ಥಾನದಲ್ಲಿ ಕುಳಿತಿರುವ ನ್ಯಾಯಾಧೀಶರ ವಿವೇಚನಾ ಶಕ್ತಿ ಸಹ ಯಾವ ರೀತಿ ಬೇಕಾದರೂ ಕೆಲಸ ಮಾಡಬಹುದು. ಕೆಳಹಂತದಲ್ಲಿ ಒಂದು ರೀತಿಯ ತೀರ್ಪು, ಮತ್ತೆ ಮೇಲಿನ ಹಂತದಲ್ಲಿ ಮತ್ತೊಂದು ರೀತಿಯ ತೀರ್ಪು, ಅದರ ಮೇಲೆ ಹಂತದಲ್ಲಿ ಮಗದೊಂದು ರೀತಿಯ ತೀರ್ಪು ಈ ರೀತಿ ನ್ಯಾಯಾಧೀಶರ ವಿವೇಚನೆಯನ್ನು ಅವಲಂಬಿಸಿರುತ್ತದೆ. ಏಕೆಂದರೆ ವಾದ ಪ್ರತಿವಾದಗಳು ಆ ಕ್ಷಣದಲ್ಲಿ ಉಂಟುಮಾಡುವ ಭಾವನೆಗಳು, ಸಾಕ್ಷ್ಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಗ್ರಹಿಸುವ ರೀತಿ ಬೇರೆ ಬೇರೆಯಾಗಿರುತ್ತದೆ. ಎಷ್ಟೋ ಬಾರಿ ವಾದ ಮಾಡುವಾಗ ಇದ್ದ ನ್ಯಾಯಾಧೀಶರು ತದನಂತರ ತೀರ್ಪು ನೀಡುವಾಗ ವರ್ಗಾವಣೆಯಾಗಿ ಆ ಜಾಗದಲ್ಲಿ ಮತ್ತೊಬ್ಬ ನ್ಯಾಯಾಧೀಶರು ಕುಳಿತುಕೊಂಡಿರುವ ಸಾಧ್ಯತೆಯೂ ಇರುತ್ತದೆ. ಈ ಎಲ್ಲಾ ಆಧಾರದ ಮೇಲೆ ಸಾಮಾನ್ಯವಾಗಿ ನ್ಯಾಯಾಲಯಗಳು ಸಂಪೂರ್ಣ ನ್ಯಾಯವನ್ನೇ ನೀಡುತ್ತವೆ ಎನ್ನುವ ಗ್ಯಾರಂಟಿ ಇರುವುದಿಲ್ಲ.....

ಈಗ ಆರೋಪ ಪಟ್ಟಿಯ ಬಗ್ಗೆ ಮಾತನಾಡುವುದಾದರೆ ಆರೋಪ ಪಟ್ಟಿಯಲ್ಲಿ ದಾಖಲಾಗಿರುವ ಹೇಳಿಕೆಗಳು, ಸಾಕ್ಷಿದಾರರು ಇವೆಲ್ಲವೂ ಕಾಲಕ್ರಮೇಣ ವಿವಿಧ ರೀತಿಯ ಪರಿವರ್ತನೆಯ ಪ್ರಕ್ರಿಯೆಗೆ ಒಳಪಡುತ್ತದೆ. ಆರೋಪ ಪಟ್ಟಿಯಲ್ಲಿ ಆ ಕ್ಷಣದಲ್ಲಿ ಇರಬಹುದಾದ ಆರೋಪದ ಅಥವಾ ಅಪರಾಧದ ಭಾವನೆ, ದಾಖಲೆ ಅಥವಾ ಮೂಡ್ ಏನಿರುತ್ತದೋ ಅದು ವರ್ಷಗಳು ಕಳೆದಂತೆ ಬೇರೆ ರೂಪ ಪಡೆಯುತ್ತಾ ಹೋಗುತ್ತದೆ. ಅನೇಕ ರೀತಿಯ ಒತ್ತಡಗಳಿಗೆ, ಭಾವನಾತ್ಮಕ ಸನ್ನಿವೇಶಗಳಿಗೆ, ಅನಿವಾರ್ಯತೆಗಳಿಗೆ ಆಮಿಷಗಳಿಗೆ, ಮರುಕಕ್ಕೆ ಒಳಗಾಗುತ್ತದೆ......

ಸಾಕ್ಷಿಗಳು ಬದಲಾಗಬಹುದು, ಸಾಕ್ಷಿಗಳು ವಿರುದ್ಧವಾಗಿ ನುಡಿಯಬಹುದು, ಸಾಕ್ಷಿಗಳು ಆರೋಪವನ್ನು ನಿರಾಕರಿಸಬಹುದು, ಸಾಕ್ಷಿಗಳು ಮತ್ತೊಂದು ರೀತಿಯ ಅರ್ಥ ಕೊಡಬಹುದು. ಹೀಗೆ ಈಗ ನಾವು ಏನು ನೋಡುತ್ತಿದ್ದೇವೆಯೋ ಆರೋಪ ಪಟ್ಟಿಯಲ್ಲಿ, ಅದರ ಮೂಲ ಸ್ವರೂಪ ನ್ಯಾಯಾಲಯದ ವಾದ ಪ್ರತಿವಾದಗಳಿಗೆ ಬರುವಷ್ಟರಲ್ಲಿ ಸಾಕಷ್ಟು ಬದಲಾವಣೆಯಾಗಿರುತ್ತದೆ....

ಇಷ್ಟೆಲ್ಲಾ ಕಷ್ಟಪಟ್ಟು ಬಹುದೊಡ್ಡ ಸಾಕ್ಷಿ ಸಮೇತ ಆರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ ನಂತರವೂ ಕೆಲವೇ ತಿಂಗಳು ಅಥವಾ ವರ್ಷಗಳಲ್ಲಿ ಇದೇ ಆರೋಪಿಗಳು ನಿರಪರಾಧಿಗಳಾಗಿ ಜೈಲಿನಿಂದ ಹೊರ ಬಂದರೆ, ಅದನ್ನು ಮಾಧ್ಯಮಗಳು ನಿರಂತರವಾಗಿ ಪ್ರಚಾರ, ಪ್ರಸಾರ ಮಾಡಿ, ಅದೇ ಆರೋಪಿಗಳು ಜೈಲಿನಿಂದ ಹೊರಬಂದಾಗ ಅವರ ಅಭಿಮಾನಿಗಳು ಹಾರ ಸಮೇತ ಮೆರವಣಿಗೆ ಮಾಡಿದಾಗ ಸಾಮಾನ್ಯ ಜನರ ಮನಸ್ಸಿನಲ್ಲಿ ನ್ಯಾಯದ ಬಗ್ಗೆ, ಇಲ್ಲಿನ ವ್ಯವಸ್ಥೆಯ ಬಗ್ಗೆ ಯಾವ ರೀತಿಯ ಅಭಿಪ್ರಾಯ ಮೂಡಬಹುದು ಎಂಬುದನ್ನು ಊಹಿಸಿಕೊಂಡರೆ ನಿಜಕ್ಕೂ ಬೇಸರವಾಗುತ್ತದೆ.....

ಅಪರಾಧ ಮಾಡಿಯೂ ಸುಲಭವಾಗಿ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದಾದರೆ ಈ ದೇಶದ ಅಪರಾಧಗಳನ್ನು ತಡೆಯುವುದು ತುಂಬಾ ಕಷ್ಟ. ಆದ್ದರಿಂದ ನಾವು ಕಾನೂನಿಗೆ, ದೇವರಿಗೆ, ಧರ್ಮಕ್ಕೆ ಭಯಪಡದಿದ್ದರು ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಮ್ಮ ಆತ್ಮ ಸಾಕ್ಷಿಗೆ ಭಯಪಡಬೇಕಾಗುತ್ತದೆ. ಸಾಧ್ಯವಾದಷ್ಟು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಯಾವುದೇ ಅಧ್ಯಯನ ಚಿಂತನೆ ಬೇಕಾಗಿಲ್ಲ ಒಂದು ಸಣ್ಣ ಮಾನವೀಯ ಪ್ರಜ್ಞೆ ಸಾಕಾಗುತ್ತದೆ...

ಕಾನೂನು, ದಾಖಲೆ, ಸಾಕ್ಷ್ಯ ಈ ಎಲ್ಲವನ್ನು ಮೀರಿದ್ದು ಮನುಷ್ಯ ನಾಗರಿಕ ಪ್ರಜ್ಞೆ, ಮಾನವೀಯ ಮೌಲ್ಯ. ಅವುಗಳು ಸಮಾಜದಲ್ಲಿ ಕನಿಷ್ಠ ಪ್ರಮಾಣದಲ್ಲಿಯಾದರೂ ಅಸ್ತಿತ್ವದಲ್ಲಿ ಇಲ್ಲದಿದ್ದರೆ ನ್ಯಾಯಾಲಯ, ಕಾನೂನು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಈಗ ಕಾನೂನು ಬಹುತೇಕ ಅಪರಾಧಿಗಳ ಮತ್ತು ಉಳ್ಳವರ ಪರವಾಗಿಯೇ ಕೆಲಸ ಮಾಡುತ್ತದೆ. ಏಕೆಂದರೆ ಎಷ್ಟೆಲ್ಲಾ ಕಷ್ಟಪಟ್ಟು ಅಪರಾಧಿಗಳನ್ನ ಹಿಡಿದು ಆರೋಪ ಪಟ್ಟಿ ಸಲ್ಲಿಸಿದ ಮೇಲೆ ವಾದ ಪ್ರತಿವಾದಗಳು ಆರೋಪಿಯ ಪರವಾಗಿಯೇ ತೀರ್ಪು ನೀಡುವಂತೆ ಬಹುತೇಕ ತೀರ್ಮಾನಗಳು ಬರುವುದು ಈ ಸಮಾಜದಲ್ಲಿ ಸಾಮಾನ್ಯವಾಗಿದೆ....

ಆ ಕಾರಣದಿಂದಲೇ ನ್ಯಾಯಾಲಯಗಳ ಮೇಲೆ ಜನರಿಗೆ ಅಂತಹ ದೊಡ್ಡಮಟ್ಟದ ವಿಶ್ವಾಸವಿಲ್ಲ. ಅದರಲ್ಲೂ ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ತುಂಬಾ ಕಡಿಮೆ ಇದೆ. ಈಗ ಯೋಚಿಸುವ ಸರದಿ ನಮ್ಮದು.ಅದನ್ನು ನಿಮ್ಮ ವಿವೇಚನೆಗೆ ಬಿಡುತ್ತಾ....

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ-ವಿವೇಕಾನಂದ. ಎಚ್. ಕೆ. 9844013068.....

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ