ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಲವು ದಿನಗಳಿಂದ ಸೃಷ್ಟಿಯಾಗಿದ್ದ ತೀವ್ರ ವಿವಾದ ಹಾಗೂ ರೈತರ ಸರಣಿ ಪ್ರತಿಭಟನೆಗಳ ನಡುವೆಯೂ, ಮಹತ್ವಾಕಾಂಕ್ಷಿ 'ಬಿಡದಿ ಟೌನ್ ಶಿಪ್' ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಕೊನೆಗೂ ಅಂತಿಮ ಅಧಿಸೂಚನೆ ಹೊರಡಿಸಿದೆ. ನಗರಾಭಿವೃದ್ಧಿ ಇಲಾಖೆಯು ಮೊದಲ ಹಂತದಲ್ಲೇ ಸುಮಾರು 500ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕೃತ ಕ್ರಮ ಆರಂಭಿಸಿದೆ.
ಮೊದಲ ಹಂತದ ಭೂ ಸ್ವಾಧೀನ ಪ್ರಕ್ರಿಯೆಯು ರಾಮನಗರ ಹಾಗೂ ಹಾರೋಹಳ್ಳಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ನಡೆಯಲಿದೆ. ಯೋಜನಾ ವ್ಯಾಪ್ತಿಗೆ ಒಟ್ಟು 9 ಕಂದಾಯ ಗ್ರಾಮಗಳು ಒಳಪಡಲಿದ್ದು, ಪ್ರಾರಂಭಿಕವಾಗಿ 3 ಗ್ರಾಮಗಳ 518 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ. ಬಿಡದಿ ಹೋಬಳಿಯ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಮತ್ತು ವಡೇರಹಳ್ಳಿ ಗ್ರಾಮಗಳ ಸುಮಾರು 754 ರೈತರ ಜಮೀನುಗಳು ಈ ಅಧಿಸೂಚನೆಯ ವ್ಯಾಪ್ತಿಗೆ ಬರಲಿವೆ.
ರೈತರಿಗೆ ಸಿಗಲಿರುವ ಪರಿಹಾರದ ಆಯ್ಕೆಗಳು:
ಭೂಮಿ ಕಳೆದುಕೊಳ್ಳುವ ರೈತರಿಗೆ ಸರ್ಕಾರ ಎರಡು ಪ್ರಮುಖ ಆಯ್ಕೆಗಳನ್ನು ಮುಂದಿಟ್ಟಿದೆ.
ನಗದು ಪರಿಹಾರ: ಪ್ರತಿ ಎಕರೆ ಭೂಮಿಗೆ ಕನಿಷ್ಠ 2.07 ಕೋಟಿ ರೂಪಾಯಿಯಿಂದ 2.5 ಕೋಟಿ ರೂಪಾಯಿ ವರೆಗೆ ಪರಿಹಾರ ನೀಡಲು ಪ್ರಸ್ತಾಪಿಸಲಾಗಿದೆ.
ಅಭಿವೃದ್ಧಿಪಡಿಸಿದ ಭೂಮಿ:
ನಗದಿನ ಬದಲು ಶೇ. 50 ರಷ್ಟು ಅಭಿವೃದ್ಧಿಪಡಿಸಿದ ಭೂಮಿಯನ್ನು ರೈತರಿಗೆ ಹಿಂತಿರುಗಿಸಿ ನೀಡುವ ವ್ಯವಸ್ಥೆಯನ್ನೂ ಸರ್ಕಾರ ಸೂಚಿಸಿದೆ.
ಸೂಚನೆ: ರೈತರು ತಮ್ಮ ಭೂಮಿಗೆ ಸಂಬಂಧಿಸಿದ ಎಲ್ಲಾ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ನಿರ್ದಿಷ್ಟ ಸಮಯದೊಳಗೆ ತಮಗೆ ಇಷ್ಟವಿರುವ ಪರಿಹಾರದ ಆಯ್ಕೆ ಪಡೆದುಕೊಳ್ಳುವಂತೆ ಸರ್ಕಾರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮುಂದುವರಿದ ರೈತರ ಆಕ್ರೋಶ:
ಉದ್ದೇಶಿತ ಬಿಡದಿ ಟೌನ್ ಶಿಪ್ ಯೋಜನೆಗೆ ಸ್ಥಳೀಯ ರೈತರಿಂದ ಮೊದಲಿನಿಂದಲೂ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ತಲೆಮಾರುಗಳಿಂದ ಉಳುಮೆ ಮಾಡುತ್ತಾ ಬಂದಿರುವ ಫಲವತ್ತಾದ ಕೃಷಿಭೂಮಿಯನ್ನು ಕಳೆದುಕೊಂಡರೆ ತಮಗೆ ಜೀವನೋಪಾಯವೇ ಇಲ್ಲದಂತಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಬಾರಿ ಬೃಹತ್ ಪ್ರತಿಭಟನೆಗಳೂ ನಡೆದಿವೆ. ರೈತರ ಇಷ್ಟೊಂದು ದೊಡ್ಡ ಮಟ್ಟದ ಆಕ್ರೋಶದ ನಡುವೆಯೂ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿರುವುದು ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.



