ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದ ಹಿರಿಯ ನಾಯಕರಾದ ಡಿ. ಸುಧಾಕರ್ ಅವರ ಅಕಾಲಿಕ ಮರಣದ ನಂತರ, ಇಡೀ ಕ್ಷೇತ್ರದ ರಾಜಕೀಯ ಸಮೀಕರಣವೇ ಬದಲಾಗಿದೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಉದ್ದವಾಗುತ್ತಲೇ ಸಾಗಿದೆ.
ರಾಷ್ಟ್ರೀಯ ಪಕ್ಷಗಳ ಟಿಕೆಟ್ಗಾಗಿ ಪೈಪೋಟಿ ಒಂದೆಡೆಯಾದರೆ, ಪಕ್ಷೇತರ ಅಭ್ಯರ್ಥಿಗಳೂ ಸಹ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಆದರೆ, ಹಿರಿಯೂರಿನ ಇಂದಿನ ಅತಿ ದೊಡ್ಡ ಪ್ರಶ್ನೆ; "ಮುಂದಿನ ನಾಯಕ ಯಾರು?" ಎಂಬುದಲ್ಲ, "ನಮ್ಮ ತಾಲೂಕಿನ ಭವಿಷ್ಯವೇನು?" ಎನ್ನುವುದು.
'ಹಣವಿದ್ದರೆ ಗೆಲುವು' ಎಂಬ ಕಳಂಕ ಅಳಿಯಬೇಕಿದೆ!:
"ಹಿರಿಯೂರು ಕ್ಷೇತ್ರದಲ್ಲಿ ಹಣವಿದ್ದವರು ಬಂದರೆ ಗೆಲುವು ಖಚಿತ" ಎಂಬ ಮಾತು ಇಡೀ ರಾಜ್ಯ ರಾಜಕಾರಣದಲ್ಲೇ ಒಂದು ಚರ್ಚೆಯ ವಿಷಯವಾಗಿದೆ. ಇದು ಹಿರಿಯೂರು ತಾಲೂಕಿನ ಸ್ವಾಭಿಮಾನಿ ಮತದಾರರಿಗೆ ಅಂಟಿರುವ ದೊಡ್ಡ ಕಳಂಕ. ಚುನಾವಣೆಯ ಸಮಯದಲ್ಲಿ ಮತದಾರರನ್ನು ಹಣ, ಹೆಂಡ ಮತ್ತು ತಾತ್ಕಾಲಿಕ ಆಮಿಷಗಳ ಮೂಲಕ ದಿಕ್ಕು ತಪ್ಪಿಸುವ ಶಕ್ತಿಗಳು ಸಕ್ರಿಯವಾಗಿವೆ.
ಮತದಾರರೇ ಎಚ್ಚೆತ್ತುಕೊಳ್ಳಿ! ಚುನಾವಣೆಯ ಒಂದೇ ಒಂದು ದಿನ ನಮ್ಮ ಹಕ್ಕನ್ನು ಮಾರಿಕೊಂಡರೆ, ಮುಂದಿನ ಐದು ವರ್ಷಗಳ ಕಾಲ ನಾವು ನಮ್ಮ ಹಕ್ಕುಗಳಿಗಾಗಿ ಹಪಹಪಿಸಬೇಕಾಗುತ್ತದೆ. ಹಣ ಹಂಚುವ ವ್ಯಕ್ತಿ ತಾನು ಹೂಡಿಕೆ ಮಾಡಿದ ಹಣವನ್ನು ವಾಪಸ್ ಪಡೆಯಲು ನೋಡುತ್ತಾನೆಯೇ ಹೊರತು, ಕ್ಷೇತ್ರದ ಅಭಿವೃದ್ಧಿಯನ್ನಲ್ಲ. ಈ ಕಳಂಕವನ್ನು ತೊಡೆದುಹಾಕಿ, ಪ್ರಾಮಾಣಿಕ ಮತ್ತು ಬುದ್ಧಿವಂತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹೊಣೆಗಾರಿಕೆ ಸಂಪೂರ್ಣವಾಗಿ ಮತದಾರರ ಕೈಯಲ್ಲಿದೆ.
ವಾಣಿ ವಿಲಾಸ ಸಾಗರವಿದ್ದರೂ ನೀರಿಗಾಗಿ ಪರದಾಟ: ಇದು ಯಾವ ನ್ಯಾಯ?ಹಿರಿಯೂರು ತಾಲೂಕಿನ ಅತ್ಯಂತ ದೊಡ್ಡ ವಿಪರ್ಯಾಸವೆಂದರೆ ಅದು ನೀರಿನ ಸಮಸ್ಯೆ. ಏಷ್ಯಾದಲ್ಲೇ ಪ್ರಸಿದ್ಧವಾದ, ಇಡೀ ಚಿತ್ರದುರ್ಗ ಜಿಲ್ಲೆಗೆ ಆಸರೆಯಾಗಿರುವ 'ವಾಣಿ ವಿಲಾಸ ಸಾಗರ' (ವಿ.ವಿ. ಸಾಗರ) ಜಲಾಶಯ ಇರುವುದೇ ಹಿರಿಯೂರು ತಾಲೂಕಿನಲ್ಲಿ! ಆದರೆ, ಇಷ್ಟೊಂದು ದೊಡ್ಡ ಜಲಾಶಯವನ್ನು ಮಡಿಲಲ್ಲಿಟ್ಟುಕೊಂಡೂ ಹಿರಿಯೂರು ತಾಲೂಕಿನ ಜನತೆ ಕುಡಿಯುವ ನೀರಿಗಾಗಿ ಇಂದಿಗೂ ಪರದಾಡುವ ಪರಿಸ್ಥಿತಿ ಇರುವುದು ಜನಪ್ರತಿನಿಧಿಗಳ ಘೋರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ತಮ್ಮದೇ ತಾಲೂಕಿನ ಜಲಾಶಯದಿಂದ ತಮಗೆ ನೀರು ಸಿಗುತ್ತಿಲ್ಲ ಎಂದರೆ ಇದು ಈ ಭಾಗದ ಜನರಿಗೆ ಆಗುತ್ತಿರುವ ಅನ್ಯಾಯವಲ್ಲವೇ?
ಹೋರಾಟದ ಹಾದಿ ಮತ್ತು ಮತದಾರರ ಜಾಗೃತಿ:
ಈ ಹಿಂದೆ ಹಿರಿಯೂರು ತಾಲೂಕಿಗೆ ನೀರು ತರಲು ಇಡೀ ತಾಲೂಕಿನ ರೈತ ಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಹಾಗೂ ಜಾತಿ-ಧರ್ಮದ ಭೇದ ಮರೆತು ಸಾರ್ವಜನಿಕರು ಬೀದಿಗಿಳಿದು ಹೋರಾಟ ಮಾಡಿದ್ದರು. ತಾಲೂಕು ಕಚೇರಿ ಮುಂದೆ ನಿರಂತರ ಪ್ರತಿಭಟನೆ ನಡೆಸಿ, ವಿ.ವಿ. ಸಾಗರಕ್ಕೆ ಭದ್ರಾ ನೀರು ಹರಿಸುವಂತೆ ಮಾಡಿ ನೀರು ತಂದ ಇತಿಹಾಸ ನಮ್ಮ ಕಣ್ಣಮುಂದಿದೆ.
ಆದರೆ, ಜನಸಾಮಾನ್ಯರು ಹೋರಾಟ ಮಾಡಿ ತಂದ ನೀರು ಇಂದಿಗೂ ಪ್ರತಿಯೊಬ್ಬ ನಾಗರಿಕನ ಮನೆ ಬಾಗಿಲಿಗೆ ತಲುಪುತ್ತಿಲ್ಲ ಎಂದರೆ ವ್ಯವಸ್ಥೆಯಲ್ಲಿ ಲೋಪವಿದೆ ಎಂದರ್ಥ. ಇಂದೂ ಸಹ ಮತದಾರರು ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಅರಸಾಹಸ ಪಡಬೇಕಾದ ಭೀಕರ ದಿನಗಳು ಎದುರಾಗಲಿವೆ.
ಬದಲಾವಣೆಯ ಸಮಯ ಈಗ ಬಂದಿದೆ:
ಅಭ್ಯರ್ಥಿ ಯಾವುದೇ ಪಕ್ಷದವನಾಗಿರಲಿ ಅಥವಾ ಪಕ್ಷೇತರನಾಗಿರಲಿ; ಆತ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವ, ಜನರ ಕಷ್ಟಗಳಿಗೆ ಸ್ಪಂದಿಸುವ ಮತ್ತು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಾಯಕನಾಗಿರಬೇಕು.
ಮತದಾರರೇ ನೆನಪಿರಲಿ:
ನಿಮ್ಮ ಮತ ಕೇವಲ ಒಂದು ಗುಂಡಿ ಒತ್ತುವುದಲ್ಲ, ಅದು ನಿಮ್ಮ ಮಕ್ಕಳ ಭವಿಷ್ಯ.ಆಮಿಷಗಳಿಗೆ ಬಲಿಯಾಗಬೇಡಿ; ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ. ಜಾತಿ, ಹಣದ ಪ್ರಭಾವಕ್ಕೆ ಒಳಗಾಗದೆ ಅಭಿವೃದ್ಧಿಯನ್ನೇ ಮಾನದಂಡವಾಗಿಟ್ಟುಕೊಳ್ಳಿ.
ಹಿರಿಯೂರು ತಾಲೂಕಿನ ಇತಿಹಾಸವನ್ನು ಬದಲಾಯಿಸುವ, ತಾಲೂಕಿಗೆ ಹೊಸ ದಿಕ್ಸೂಚಿ ನೀಡುವ ಶಕ್ತಿ ನಿಮ್ಮ ಕೈಯಲ್ಲಿದೆ. ಜಾಗೃತರಾಗಿ ಮತದಾನ ಮಾಡಿ, ಹಿರಿಯೂರನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸಿ.



