ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಲೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ಕಲಾವಿದರು ತಮ್ಮ ಕುಟುಂಬಕ್ಕೆ ಆಸ್ತಿಯಾಗಿರದೇ ಸಮಾಜದ ಆಸ್ತಿ ಯಾಗಿದ್ದಾರೆ ಅಂಥವರನ್ನ ಗುರುತಿಸಿ ಗೌರವಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ ರಂಗಸ್ವಾಮಿ ಸಕ್ಕರ ಹೇಳಿದರು.
ಪಟ್ಟಣದ ಕೆ,ಎಂ, ಕೊಟ್ಟಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಗಲು ವೇಷಗಾರರ ಸಾಂಸ್ಕೃತಿಕ ಕಲಾ ಸಂಘ, ಪರಿಶಿಷ್ಟ ಜಾತಿ ಸೇವಾ ಸಮಿತಿ, ಕೆ,ಎಂ, ಕೊಟ್ಟಿಗೆ ,ಇವರುಗಳ ಆಶ್ರಯದಲ್ಲಿ ಆಯೋಜಿಸಿದ್ದ ಹಗಲು ವೇಷ ಕಲಾ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತೀಕರಣ ನಗರೀಕರಣ ಆಧುನಿಕರಣದಿಂದ ದೇಶಿಯ ಕಲೆಗಳಿಗೆ ಪೆಟ್ಟು ಬಿದ್ದಿದ್ದು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು ಜಾನಪದ ನೃತ್ಯ ಬೀಸುವ ಕಲ್ಲಿನ ಪದ ಉಯ್ಯಾಲೆ ಪದ ಕೋಲಾಟ ಭಾವಗೀತೆ ,ಭಕ್ತಿಗೀತೆ, ದಾಸರ ಪದ ಬಯಲಾಟ, ಹಗಲುವೇಷ, ಗೊಂಬೆ ಕುಣಿತ, ತತ್ವಪದ ಗಾಯನ ,ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ,ಕೋಲಾಟ, ಭಜನೆ, ಗೊರವನ ಕುಣಿತ ವೀರಗಾಸೆ ಮುಂತಾದ ಕಲೆಗಳನ್ನು ಪ್ರದರ್ಶನ ಮಾಡುವ ಕಲಾವಿದರನ್ನು ಗುರುತಿಸಿ ಗೌರವಿಸಿ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸಬೇಕು ಆಗ ಯುವ ಜನತೆಯಲ್ಲಿ ಕಲೆಯ ಬಗ್ಗೆ ಆಸಕ್ತಿ ಅಭಿರುಚಿ ಮೂಡುತ್ತದೆ.
ಹಣ ಆಸ್ತಿ ಅಂತಸ್ತು ಸಿರಿತನ ಇದ್ದವರು ಸಾಧನೆ ಮಾಡುವುದು ಸುಲಭ ,ಆದರೆ ಹಸಿವು ಬಡತನ ಇದ್ದವರು ಸಾಧನೆ ಮಾಡುವುದು ಕಷ್ಟ ಈ ನಿಟ್ಟಿನಲ್ಲಿ ಕಷ್ಟದಲ್ಲಿ ಸಾಧನೆ ಮಾಡಿದ ಕಲಾವಿದರು ಮತ್ತೊಬ್ಬರಿಗೆ ಮಾದರಿಯಾಗಬೇಕು, ಎಂದು ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಖ್ಯ ಶಿಕ್ಷಕಿ ಕೆ, ಎಂ. ರಾಜೇಶ್ವರಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಮೊಳಕಾಲ್ಮೂರು ತಾಲೂಕು, ಕರ್ನಾಟಕ ಜಾನಪದ ಪರಿಷತ್ತು ತಾಲೂಕ ಘಟಕದ ಅಧ್ಯಕ್ಷ ಬಿ ,ಎಸ್, ಮಂಜಣ್ಣ ,ಹಗಲು ವೇಷಗಾರರ ಸಾಂಸ್ಕೃತಿಕ ಕಲಾಸಂಘದ ಅಧ್ಯಕ್ಷರಾದ ಕೆ.ಎಂ ಗುರುಮೂರ್ತಿ, ಕಾರ್ಯದರ್ಶಿ ಕೃಷ್ಣಪ್ಪ, ಎಸ್. ಶಿವಮೂರ್ತಿ, ಎಂ.ಹೇಮಗಿರಿ, ಎಲೆನ್ ಮೇರಿ, ಕಲಾವಿದರಾದ ಭಿಕ್ಷಾ ಪತಿ ಕೂಡ್ಲಿಗಿ, ದುರ್ಗಾಪ್ರಸಾದ್, ಶಾಂತವೀರಪ್ಪ, ರಾಮಾಂಜನೇಯ, ತಮಟೆ ಚಂದ್ರು, ರಂಗಸ್ವಾಮಿ, ಹನುಮಂತರಾಯ, ಕೆ.ಎಂ ಕೊಟ್ಟಿಗೆ ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.
ಹಗಲು ವೇಷ ಗಾರರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಭೀಮಾಂಜನೇಯ ಯುದ್ದ ಎಂಬ ಕಿರು ನಾಟಕವನ್ನು ಕಲಾವಿದರು ಪ್ರಸ್ತುತಪಡಿಸಿದರು.



