ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
"ಚಿತ್ರದುರ್ಗ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಸಂಸದನಾಗಿರುವ ನನಗೇ ಸರಿಯಾಗಿ ಕುಡಿಯುವ ನೀರು ಸಿಗುತ್ತಿಲ್ಲ ಎಂದಾದರೆ, ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಎಷ್ಟು ಭೀಕರವಾಗಿರಬೇಡ? ನಗರಸಭೆ ಪೌರಾಯುಕ್ತೆ ಲಕ್ಷ್ಮಿ ಅವರು ಕೇವಲ ಎಸಿ ಕಚೇರಿಯಲ್ಲಿ ಕೂರಬಾರದು. ಮೊದಲು ಕಚೇರಿ ಬಿಟ್ಟು ಹೊರಬಂದು, ನೀರಿಗಾಗಿ ಜನಸಾಮಾನ್ಯರು ಪಡುತ್ತಿರುವ ಪರದಾಟವನ್ನು ಕಣ್ಣಾರೆ ನೋಡಲಿ!" ಎಂದು ಸಂಸದರು ತಾಕೀತು ಮಾಡಿದರು.
ಹೀಗೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಗೋವಿಂದ ಎಂ. ಕಾರಜೋಳ ಅವರು ನಗರಸಭೆ ಪೌರಾಯುಕ್ತರ ವಿರುದ್ಧ ಅತ್ಯಂತ ತೀಕ್ಷ್ಣವಾಗಿ ಹಾಗೂ ಕಠಿಣ ಶಬ್ದಗಳಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಂಸದರ ಕೆಂಡಾಮಂಡಲ
ನಗರದಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕುಡಿಯುವ ನೀರಿನ ಅಭಾವ ಮತ್ತು ಸಾರ್ವಜನಿಕರ ಆಕ್ರೋಶವನ್ನು ಪ್ರಸ್ತಾಪಿಸಿದ ಸಂಸದರು, ಅಧಿಕಾರಿಗಳ ನಿಷ್ಕ್ರಿಯತೆಯ ವಿರುದ್ಧ ಕೆಂಡಾಮಂಡಲರಾದರು. ನಗರದ ಮೂಲೆ ಮೂಲೆಗಳಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದ್ದರೂ ನಗರಸಭೆ ಆಡಳಿತ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಅವರು ತೀವ್ರ ಅಸಮಾಧಾನ ಹೊರಹಾಕಿದರು.
"ನಗರಸಭೆ ಪೌರಾಯುಕ್ತರು ತಕ್ಷಣವೇ ಹವಾನಿಯಂತ್ರಿತ ಕಚೇರಿಯಿಂದ ಆಚೆ ಬರಬೇಕು. ನಗರದ ವಾರ್ಡ್ಗಳಿಗೆ ಭೇಟಿ ನೀಡಿ, ಕೊಡ ಹಿಡಿದು ಬೀದಿ ಬೀದಿ ಅಲೆಯುತ್ತಿರುವ ಸಾರ್ವಜನಿಕರ ಕಷ್ಟ ಆಲಿಸಬೇಕು. ಜನಪ್ರತಿನಿಧಿಗಳಿಗೇ ನೀರಿನ ವ್ಯವಸ್ಥೆ ಕಲ್ಪಿಸಲು ಯೋಗ್ಯತೆ ಇಲ್ಲದ ಈ ಆಡಳಿತದಿಂದ ಜನಸಾಮಾನ್ಯರು ಏನನ್ನು ನಿರೀಕ್ಷಿಸಲು ಸಾಧ್ಯ?" ಎಂದು ಕಾರಜೋಳ ಅತ್ಯಂತ ಕಠಿಣ ಧ್ವನಿಯಲ್ಲಿ ಪ್ರಶ್ನಿಸಿದರು.
ಜನರ ತಾಳ್ಮೆ ಪರೀಕ್ಷಿಸಬೇಡಿ: ನೇರ ಎಚ್ಚರಿಕೆ
ಮೂಲಸೌಕರ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ನಗರಸಭೆಯ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದ ಸಂಸದರು, ಕುಡಿಯುವ ನೀರಿನಂತಹ ಅತ್ಯಗತ್ಯ ಸೇವೆಯ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದರು. ತಕ್ಷಣವೇ ನಗರದಾದ್ಯಂತ ಸಮರ್ಪಕ ನೀರು ಸರಬರಾಜಿಗೆ ಪರ್ಯಾಯ ಹಾಗೂ ಶಾಶ್ವತ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಸಂಸದರೇ ಸ್ವತಃ ಬೀದಿಗಿಳಿದು ಅಧಿಕಾರಿಗಳ ತಲೆದಂಡಕ್ಕೆ ಆಗ್ರಹಿಸುವ ಮುನ್ನ, ಪೌರಾಯುಕ್ತೆ ಲಕ್ಷ್ಮಿ ಹಾಗೂ ನಗರಸಭೆ ಸಿಬ್ಬಂದಿ ಎಚ್ಚೆತ್ತುಕೊಂಡು ಕೋಟೆ ನಾಡಿನ ಜನರ ದಾಹ ನೀಗಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.



