ಜಾಗೃತಿಯೋ? ಅಥವಾ ಐದು ವರ್ಷದ ಅಡಮಾನವೋ? ಮತದಾರ ಬದಲಾಗದಿದ್ದರೆ ತಾಲೂಕಿನ ಭವಿಷ್ಯಕ್ಕೆ ಬೆಳಕಿಲ್ಲ!
ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ನಮ್ಮ ಮತ, ನಮ್ಮ ಹಕ್ಕು, ನಮ್ಮ ಭವಿಷ್ಯ" – ಈ ಮಾತುಗಳು ಕೇವಲ ಚುನಾವಣೆಯ ಸಂದರ್ಭದಲ್ಲಿ ಕೇಳಿಬರುವ ಘೋಷಣೆಗಳಾಗಬಾರದು. ಆದರೆ ಇಂದಿನ ಕಹಿ ವಾಸ್ತವವೆಂದರೆ, ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಾಗದೆ, ಕೇವಲ ಒಂದು "ಲಾಭದಾಯಕ ವ್ಯಾಪಾರ" (Business) ಆಗಿ ಪರಿವರ್ತನೆಯಾಗಿದೆ. ಹಣ ಮತ್ತು ಜಾತಿ ಬಲವಿದ್ದವರು ಮಾತ್ರ ಚುನಾವಣೆಗೆ ಸ್ಪರ್ಧಿಸಬಹುದು, ಉಳಿದವರಿಗೆ ಅವಕಾಶವೇ ಇಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ.
ಆದರೆ, ಈ ದುಸ್ಥಿತಿಗೆ ಸಂಪೂರ್ಣ ಕಾರಣ ರಾಜಕಾರಣಿಗಳು ಮಾತ್ರವೇ? ಅಥವಾ ನಮ್ಮ ಮತವನ್ನು ನಾವೇ ಮಾರಿಕೊಳ್ಳುತ್ತಿರುವ ನಾವೂ ಕಾರಣವೇ? ಎಂದು ಪ್ರತಿಯೊಬ್ಬ ಮತದಾರನು ಕಣ್ಣು ಮುಚ್ಚಿ ಯೋಚಿಸಬೇಕಾಗಿದೆ.
೧. ಉಚಿತ ಹಣಕ್ಕೆ ನಮ್ಮ ಹಕ್ಕುಗಳ ಅಡಮಾನ
ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಗಳು ಕೊಡುವ ಸಾವಿರಾರು ರೂಪಾಯಿಗಳ ಆಸೆಗೆ ಬಿದ್ದು ಮತ ಮಾರಿಕೊಂಡರೆ, ಅದು ನಮ್ಮ ಕ್ಷೇತ್ರವನ್ನು ಐದು ವರ್ಷಗಳ ಕಾಲ ಅವರ ಬಳಿ ಅಡ ಇಟ್ಟಂತೆ.
ಅಭ್ಯರ್ಥಿಯ ಲೆಕ್ಕಾಚಾರ: ಚುನಾವಣೆ ಗೆಲ್ಲಲು ಕೋಟಿಗಟ್ಟಲೆ ಬಂಡವಾಳ ಹೂಡುವ ಅಭ್ಯರ್ಥಿ, ಅಧಿಕಾರಕ್ಕೆ ಬಂದ ಮೇಲೆ ಆ ಬಂಡವಾಳವನ್ನು ಬಡ್ಡಿ ಸಮೇತ ಲೂಟಿ ಮಾಡಲು ಯತ್ನಿಸುತ್ತಾನೆ.
ನಮ್ಮ ಮೇಲೆಯೇ ಬೀಳುವ ಒರೆ: ಆ ರಾಜಕಾರಣಿ ಮಾಡಿದ ವೆಚ್ಚವನ್ನು ಭರಿಸಲು ಕೊನೆಗೆ ಹೊರೆಯಾಗುವುದು ಸಾಮಾನ್ಯ ಜನರ ಮೇಲೆಯೇ. ರೈತರ ರಸಗೊಬ್ಬರ, ಬಿತ್ತನೆ ಬೀಜ, ಪೆಟ್ರೋಲ್, ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯ ರೂಪದಲ್ಲಿ ಆ ಹಣವನ್ನು ನಮ್ಮಿಂದಲೇ ವಸೂಲಿ ಮಾಡಲಾಗುತ್ತದೆ.
೨. ಕೈಚಾಚಿ ಪಡೆದ ಮೇಲೆ ಹಕ್ಕು ಪ್ರತಿಪಾದಿಸಲು ಸಾಧ್ಯವೇ?
ಚುನಾವಣೆಯ ದಿನ ಯಾರಿಂದ ಹಣಕ್ಕಾಗಿ ಕೈಚಾಚುತ್ತೇವೋ, ಆ ಜನಪ್ರತಿನಿಧಿಯ ಮುಂದೆ ನಾಳೆ ಕೆಲಸಕ್ಕಾಗಿ ಧೈರ್ಯವಾಗಿ ಹೋಗಿ ನಿಲ್ಲಲು ನಮಗೆ ಶಕ್ತಿ ಇರುತ್ತದೆಯೇ?.
"ಹಣ ಪಡೆದು ಮತ ಹಾಕಿದ ದಿನವೇ ನಾವು ಅವರ ಮುಂದೆ ಕೈಕಟ್ಟಿ ನಿಲ್ಲುವ ಗುಲಾಮರಾಗುತ್ತೇವೆ."
ನಂತರ ರಸ್ತೆ ಇಲ್ಲ, ರೈತರಿಗೆ ನೀರಿಲ್ಲ, ಶಾಲೆಗಳು ಸರಿಯಿಲ್ಲ, ಯುವಕರಿಗೆ ಉದ್ಯೋಗವಿಲ್ಲ ಎಂದು ದೂರುವುದರಲ್ಲಿ ಅರ್ಥವೇ ಇಲ್ಲ. ಹಣಕ್ಕೆ ಬಲಿಯಾಗದೆ ಮತ ಚಲಾಯಿಸಿದರೆ ಮಾತ್ರ, ಆರಿಸಿ ಕಳುಹಿಸಿದ ಜನಪ್ರತಿನಿಧಿಯನ್ನು ರಾಜರೋಷವಾಗಿ ಪ್ರಶ್ನಿಸುವ ಮತ್ತು ಅಭಿವೃದ್ಧಿ ಕೆಲಸಗಳನ್ನು ಕೇಳುವ ಪೂರ್ಣ ಹಕ್ಕು ನಮಗಿರುತ್ತದೆ.
೩. ಹಿರಿಯೂರು ಕ್ಷೇತ್ರದ ಸವಾಲು ಮತ್ತು ಯುವಜನತೆಯ ಭವಿಷ್ಯ
ರಾಜ್ಯಾದ್ಯಂತ ಕೆಲವು ಕ್ಷೇತ್ರಗಳ ಬಗ್ಗೆ – "ಹಣವಿದ್ದರೆ ಸಾಕು, ಯಾರಾದರೂ ಗೆಲ್ಲಬಹುದು" ಎಂಬ ಪ್ರತಿಬಿಂಬ ಮೂಡಿದೆ. ಹಿರಿಯೂರು ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲದಿರುವುದು ದುರಂತ. ಹಣದ ಮಹಿಮೆಯಿಂದಲೇ ಗೆಲ್ಲಬಹುದು ಎಂಬ ಭಾವನೆ ರಾಜಕಾರಣಿಗಳಲ್ಲಿ ಬಂದರೆ, ಅಲ್ಲಿ ಪ್ರಾಮಾಣಿಕರಿಗೆ ಮತ್ತು ನೈಜ ನಾಯಕರಿಗೆ ಜಾಗವೆಲ್ಲಿದೆ?
ಇದರ ನೇರ ಪರಿಣಾಮ ಬೀರುತ್ತಿರುವುದು ಯುವಜನತೆಯ ಭವಿಷ್ಯದ ಮೇಲೆ. ಸರ್ಕಾರಿ ಶಾಲೆಗಳು ಸೌಲಭ್ಯಗಳಿಲ್ಲದೆ ಸೊರಗುತ್ತಿವೆ.
ಸರಿಯಾದ ವಿದ್ಯಾಭ್ಯಾಸ ಸಿಗುತ್ತಿಲ್ಲ.
ಉದ್ಯೋಗಾವಕಾಶಗಳಿಲ್ಲದೆ ಯುವಕರು ಬೀದಿಪಾಲಾಗುತ್ತಿದ್ದಾರೆ.
ರೈತನ ಬೆಳೆಗೆ ಬೆಲೆಯಿಲ್ಲ, ನೀರಿಲ್ಲದೆ ಭೂಮಿ ಒಣಗುತ್ತಿದೆ.
೪. ಮತದಾರರೇ ಎಚ್ಚೆತ್ತುಕೊಳ್ಳಿ: ಈಗಾಗದಿದ್ದರೆ ಇನ್ನೆಂದಿಗೂ ಇಲ್ಲ!
ಅಭ್ಯರ್ಥಿ ಕೊಡುವ ಆ ಅಲ್ಪ ಹಣದಿಂದ ನಮ್ಮ ಜೀವನ ಕೊನೆಯಾಗುತ್ತದೆಯೇ? ಖಂಡಿತ ಇಲ್ಲ. ಆ ಹಣ ಕೆಲವು ದಿನಗಳಿಗಷ್ಟೇ ಸೀಮಿತ, ಆದರೆ ಅದರ ಪರಿಣಾಮ ಐದು ವರ್ಷಗಳ ಕಾಲ ನರಕಯಾತನೆ ತರುತ್ತದೆ!.
ಆದ್ದರಿಂದ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು. ರಾಜಕಾರಣಿಗಳನ್ನು ದೂಷಿಸುವ ಮೊದಲು ಮತದಾರರಾದ ನಾವು ಬದಲಾಗಬೇಕು.
ನಮ್ಮ ಮತ ಮಾರಾಟಕ್ಕಿಲ್ಲ: ಹಣ, ಜಾತಿ ಅಥವಾ ಹೆಂಡದ ಆಸೆಗೆ ಮತ ಮಾರಿಕೊಳ್ಳಬಾರದು.
ಅಭಿವೃದ್ಧಿಯೇ ಮಾನದಂಡವಾಗಲಿ: ನಮ್ಮ ತಾಲೂಕಿನ/ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವ, ಯುವಕರ ಮತ್ತು ರೈತರ ಕಷ್ಟಕ್ಕೆ ಮಿಡಿಯುವ ವ್ಯಕ್ತಿಯನ್ನು ನೋಡಿ ಮತ ಚಲಾಯಿಸಬೇಕು.
ಮತದಾರರು 'ಮತದೇವರು'ಗಳಾಗಬೇಕೇ ಹೊರತು 'ಬಲಿಪಶು'ಗಳಾಗಬಾರದು. ನಾವು ಜಾಗೃತರಾದರೆ ಮಾತ್ರ ಪ್ರಜಾಪ್ರಭುತ್ವ ಗೆಲ್ಲುತ್ತದೆ, ನಮ್ಮ ತಾಲೂಕು ಅಭಿವೃದ್ಧಿಯತ್ತ ಸಾಗುತ್ತದೆ. ಈಗಲಾದರೂ ಎಚ್ಚೆತ್ತುಕೊಳ್ಳೋಣ, ಮತವನ್ನು ಮಾರಿಕೊಳ್ಳದೆ ಕ್ಷೇತ್ರವನ್ನು ಉಳಿಸಿಕೊಳ್ಳೋಣ!.
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore