ಚಂದ್ರವಳ್ಳಿ ನ್ಯೂಸ್, ಬೆಂಗಳೂರು/ನವದೆಹಲಿ:
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸ್ಯಾಂಡಲ್ವುಡ್ ನಟ ದರ್ಶನ್ಗೆ ಸುಪ್ರೀಂಕೋರ್ಟ್ನಲ್ಲಿ ತೀವ್ರ ನಿರಾಶೆಯಾಗಿದೆ. ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ಜೊತೆಗೆ, ಪ್ರಕರಣದ ಪ್ರಮುಖ ೬೦ ಸಾಕ್ಷಿಗಳ ವಿಚಾರಣೆಯನ್ನು ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಕಡಕ್ ನಿರ್ದೇಶನ ನೀಡಿದೆ.
ವಿಚಾರಣಾಧೀನ ಕೈದಿಗಳಿಗೆ ನೀಡಬೇಕಾದ ಮೂಲಸೌಕರ್ಯಗಳನ್ನು ಒದಗಿಸುವಂತೆ ಮತ್ತು ಜಾಮೀನು ಮಂಜೂರು ಮಾಡುವಂತೆ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ನ್ಯಾಯಪೀಠ ನಡೆಸಿತು.
ಸುಪ್ರೀಂಕೋರ್ಟ್ ಆದೇಶದಲ್ಲಿ ಏನಿದೆ?:
ಒಂದು ವರ್ಷ ಕಾಲಾವಕಾಶ: ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಮುಂದಿನ ೧ ವರ್ಷದಲ್ಲಿ ಪ್ರಮುಖ ೬೦ ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಎಂದು ಪ್ರಾಸಿಕ್ಯೂಷನ್ಗೆ ಗಡುವು ನೀಡಿದೆ.
ದಿನಂಪ್ರತಿ ವಿಚಾರಣೆ: ಸಾಕ್ಷ್ಯ ವಿಚಾರಣೆ ತ್ವರಿತವಾಗಿ ನಡೆಯಲು ಅಗತ್ಯವಿದ್ದಲ್ಲಿ ವಿಚಾರಣಾ ನ್ಯಾಯಾಲಯವು ದಿನಂಪ್ರತಿ (ಡೈಲಿ ಬೇಸಿಸ್) ವಿಚಾರಣೆ ನಡೆಸಬಹುದಾಗಿದೆ. ಇದಕ್ಕೆ ದರ್ಶನ್ ಮತ್ತು ಅವರ ವಕೀಲರು ಸಂಪೂರ್ಣ ಸಹಕಾರ ನೀಡಬೇಕು.
ಮತ್ತೆ ಜಾಮೀನು ಕೋರಲು ಅವಕಾಶ: ಒಂದು ವೇಳೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ವಿಚಾರಣೆಯಲ್ಲಿ ಯಾವುದೇ ಗಣನೀಯ ಪ್ರಗತಿ ಕಾಣದಿದ್ದಲ್ಲಿ, ದರ್ಶನ್ ಅವರು ಮತ್ತೆ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಬಹುದು ಎಂದು ಪೀಠ ತಿಳಿಸಿದೆ.
ಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದಗಳು:
ದರ್ಶನ್ ಪರ ವಕೀಲರ ವಾದ:
ದರ್ಶನ್ ಪರ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ, "ಪ್ರಾಸಿಕ್ಯೂಷನ್ ಒಟ್ಟು ೨೭೨ ಸಾಕ್ಷಿಗಳ ವಿಚಾರಣೆ ನಡೆಸಲು ಉದ್ದೇಶಿಸಿದೆ. ಆದರೆ ಕಳೆದ ೭ ತಿಂಗಳಲ್ಲಿ ಕೇವಲ ೧೦ ಸಾಕ್ಷಿಗಳನ್ನು ಮಾತ್ರ ವಿಚಾರಣೆ ಮಾಡಲಾಗಿದೆ. ದರ್ಶನ್ ಅವರನ್ನು ಜೈಲಿನ ಕ್ವಾರಂಟೈನ್ ಸೆಲ್ನಲ್ಲಿ ಇರಿಸಲಾಗಿದ್ದು, ಇತರ ಕೈದಿಗಳೊಂದಿಗೆ ಮಾತನಾಡಲು ಬಿಡುತ್ತಿಲ್ಲ. ಹೀಗಾಗಿ ಅವರಿಗೆ ಜಾಮೀನು ನೀಡಬೇಕು" ಎಂದು ವಾದಿಸಿದರು.
ಸರ್ಕಾರದ ಪರ ವಕೀಲರ ಪ್ರತಿವಾದ:
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂತ್ರಾ, "ಕೊರೊನಾ ಸಮಯದಲ್ಲಿ ಬಳಸುತ್ತಿದ್ದ ಸೆಲ್ ಅನ್ನು ಈಗ ಕ್ವಾರಂಟೈನ್ ಸೆಲ್ ಎಂದು ಕರೆಯಲಾಗುತ್ತಿದೆಯೇ ಹೊರತು, ಅಲ್ಲಿ ದರ್ಶನ್ ಅವರಿಗೆ ಇತರ ಕೈದಿಗಳೊಂದಿಗೆ ಮಾತನಾಡಲು ಅವಕಾಶ ನೀಡಲಾಗಿದೆ. ಅದಕ್ಕೆ ಸೂಕ್ತ ಸಾಕ್ಷ್ಯಗಳಿವೆ. ಜೈಲು ಕೈಪಿಡಿಯನ್ವಯ ವಿಚಾರಣಾಧೀನ ಕೈದಿಗಳಿಗೆ ಲಭ್ಯವಿರುವ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಅವರಿಗೆ ಒದಗಿಸಲಾಗುತ್ತಿದೆ" ಎಂದು ಸ್ಪಷ್ಟಪಡಿಸಿದರು.
ನ್ಯಾಯಪೀಠದ ಕೊನೆಯ ಮಾತು:
"ಜಾಮೀನು ಅರ್ಜಿಯನ್ನು ಪರಿಗಣಿಸಲು ಇದು ಸೂಕ್ತ ಸಮಯವಲ್ಲ. ನಾವು ಇನ್ನೂ ಸ್ವಲ್ಪ ಸಮಯ ಕಾಯುತ್ತೇವೆ. ೨೦೨೫ರ ನವೆಂಬರ್? ೩ರಂದೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದರೂ ವಿಚಾರಣೆ ನಿಧಾನಗತಿಯಲ್ಲಿ ಸಾಗುತ್ತಿದೆ. ಆರೋಪಿಗಳ ಪರ ವಕೀಲರು ಕೂಡ ಪಾಟಿಸವಾಲು ನಡೆಸಲು ಪದೇ ಪದೇ ಕಾಲಾವಕಾಶ ಕೇಳುತ್ತಿರುವುದು ಇದಕ್ಕೆ ಕಾರಣವಾಗಿದೆ. ಇನ್ಮುಂದೆ ಯಾವುದೇ ಕಾರಣಕ್ಕೂ ವಿಚಾರಣೆಯನ್ನು ಮುಂದೂಡಬಾರದು."
ಸದ್ಯಕ್ಕೆ ಸುಪ್ರೀಂಕೋರ್ಟ್ನ ಈ ತೀರ್ಪಿನಿಂದಾಗಿ ದರ್ಶನ್ ಕನಿಷ್ಠ ಒಂದು ವರ್ಷದ ಅವಧಿಗೆ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.



