ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಬಲವಂತವಾಗಿ ಜಮೀನು ಪಡೆಯುವುದಿಲ್ಲ ಎಂಬ ಕೇವಲ ಮೌಖಿಕ ಮಾತು ನಮಗೆ ಸಾಲದು. ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ ಹಾಗೂ ಎಐ ಸಿಟಿ ಯೋಜನೆಯನ್ನು ಸಂಪೂರ್ಣವಾಗಿ ರದ್ದುಪಡಿಸುವ ಅಧಿಕೃತ ಘೋಷಣೆಯನ್ನು ಸರ್ಕಾರ ಮಾಡಬೇಕು" ಎಂದು ಬಿಡದಿ ಹೋಬಳಿಯ ರೈತರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಖಡಕ್ ಒತ್ತಾಯ ಮಾಡಿದ್ದಾರೆ.
ಸರ್ಕಾರ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿರುವುದರಿಂದ ಆತಂಕಗೊಂಡಿರುವ ಬಿಡದಿಯ 20ಕ್ಕೂ ಹೆಚ್ಚು ಗ್ರಾಮಗಳ ರೈತರು, ಈ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಆಗ್ರಹಿಸಿ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಸಣ್ಣ ರೈತರ ಆತಂಕ ಏನು?:
ಈ ಪ್ರದೇಶದಲ್ಲಿ ಶೇಕಡಾ 20ರಷ್ಟು ಜಮೀನುಗಳು ಹೊರಗಿನವರು ಹಾಗೂ ದೊಡ್ಡ ಉದ್ಯಮಿಗಳ ಪಾಲಾಗಿವೆ. ಒಂದು ವೇಳೆ ದೊಡ್ಡ ಜಮೀನುದಾರರು ಆಸೆಗೆ ಬಿದ್ದು ಸರ್ಕಾರಕ್ಕೆ ಭೂಮಿ ನೀಡಿದರೆ, ಸಣ್ಣ ರೈತರ ಬದುಕು ದುಸ್ತರವಾಗಲಿದೆ ಎಂಬುದು ಹೋರಾಟಗಾರರ ಪ್ರಮುಖ ಕಳವಳವಾಗಿದೆ.
ದಾರಿ ಹಾಗೂ ನೀರಿನ ಮೂಲ ಬಂದ್: ದೊಡ್ಡ ಜಮೀನುಗಳ ಮಧ್ಯೆ ಇರುವ 2 ರಿಂದ 5 ಎಕರೆಯ ಸಣ್ಣ ರೈತರ ಜಮೀನುಗಳಿಗೆ ಹೋಗುವ ದಾರಿ ಮತ್ತು ನೀರಿನ ಮೂಲಗಳು ಕಡಿತಗೊಳ್ಳಲಿವೆ.
ಬೇಲಿಯ ಸಂಕಷ್ಟ: "ನಮ್ಮ ಸುತ್ತಲಿನ 15-20 ಎಕರೆ ಜಮೀನಿನ ಮಾಲೀಕರು ಸರ್ಕಾರಕ್ಕೆ ಭೂಮಿ ನೀಡಿದರೆ, ಅಲ್ಲಿ ಬೇಲಿ ಹಾಕಲಾಗುತ್ತದೆ. ಆಗ ಸಣ್ಣ ರೈತರು ತಮ್ಮ ಜಮೀನಿಗೆ ಹೋಗುವುದು ಹೇಗೆ? ಕೃಷಿ ಮಾಡುವುದು ಹೇಗೆ?" ಎಂದು ಮಂಡಲಹಳ್ಳಿಯ ರೈತ ನಾಗರಾಜ್ ಆತಂಕ ವ್ಯಕ್ತಪಡಿಸಿದ್ದಾರೆ.
ಅಂತಿಮ ಅಧಿಸೂಚನೆಗೆ ತೀವ್ರ ವಿರೋಧ:
ರೈತರ ಅಭಿಪ್ರಾಯ ಸಂಗ್ರಹಿಸಲು ಸಮಿತಿ ರಚಿಸುವ ಸಿಎಂ ನಿರ್ಧಾರವನ್ನು ಸ್ವಾಗತಿಸಿರುವ ಮಾಜಿ ತಾಲ್ಲೂಕು ಸದಸ್ಯ ಎಚ್.ಜಿ. ಪ್ರಕಾಶ್, ಇದೇ ವೇಳೆಯಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿರುವ ಸರ್ಕಾರದ ದ್ವಂದ್ವ ನಿಲುವನ್ನು ಪ್ರಶ್ನಿಸಿದ್ದಾರೆ. "ಬಿಡದಿ ಹೋಬಳಿಯ ಹೊಸೂರು, ಕೆ.ಜಿ. ಗೊಳ್ಳರಪಾಳ್ಯ, ಅರಳಾಳುಸಂದ್ರ ಮತ್ತು ಬನ್ನಿಗಿರಿ ಗ್ರಾಮಗಳ ಭೂಸ್ವಾಧೀನಕ್ಕೆ ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ಸರ್ಕಾರ ಮೊದಲು ಹಿಂಪಡೆಯಬೇಕು. ಪ್ರಾಣ ಹೋದರೂ ಜಮೀನು ಬಿಡುವುದಿಲ್ಲ" ಎಂದು ಅವರು ಎಚ್ಚರಿಸಿದ್ದಾರೆ.
ಹೈನುಗಾರಿಕೆ, ರೇಷ್ಮೆ ಕೃಷಿಗೆ ಪೆಟ್ಟು:
ಬಿಡದಿ ಭಾಗದಲ್ಲಿ 20 ಸಾವಿರಕ್ಕೂ ಹೆಚ್ಚು ರೈತರು, ಅದರಲ್ಲೂ ಪ್ರಮುಖವಾಗಿ ಮಹಿಳೆಯರು ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಯ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾರೆ ಎಂದು ರೈತ ಮುಖಂಡೆ ಭಾಗ್ಯ ನಾಗರಾಜ್ ಹೇಳಿದ್ದಾರೆ. "ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಬಲವಂತದ ಭೂಸ್ವಾಧೀನ ಮಾಡಲ್ಲ ಎನ್ನುವ ಬದಲು, ಯೋಜನೆಯನ್ನೇ ರದ್ದುಗೊಳಿಸಿ ರೈತರ ಆತಂಕ ದೂರ ಮಾಡಲಿ" ಎಂದು ಅವರು ಒತ್ತಾಯಿಸಿದ್ದಾರೆ.
ಬಿಡದಿ ಟೌನ್ಶಿಪ್ ಹಾಗೂ ಎಐ ಸಿಟಿ ಯೋಜನೆ ವಿರುದ್ಧ ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಸರ್ಕಾರ ಸಮಿತಿ ರಚನೆ ಘೋಷಿಸಿದರೂ ಸಹ, ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವ ಅಧಿಕೃತ ಆದೇಶ ಬರುವವರೆಗೂ ಹೋರಾಟ ಮುಂದುವರಿಸುವುದಾಗಿ ರೈತರು ಸ್ಪಷ್ಟಪಡಿಸಿದ್ದಾರೆ.



