ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಕುಂಚಿಟಿಗ ಸಮುದಾಯಕ್ಕೆ ಈಗ ಕೇವಲ ಭಾಷಣಗಳ ಅಗತ್ಯವಿಲ್ಲ, ಬದಲಿಗೆ ಬಲವಾದ ಅಸ್ಮಿತೆ, ಶಿಕ್ಷಣ ಮತ್ತು ಸಂಸ್ಕಾರದ ಅಗತ್ಯವಿದೆ. ನಮ್ಮ ಹಕ್ಕುಗಳಿಗಾಗಿ, ಅದರಲ್ಲೂ ಮುಖ್ಯವಾಗಿ ಕೇಂದ್ರ ಸರ್ಕಾರದ ಒಬಿಸಿ, ರಾಜ್ಯ ಸರ್ಕಾರದ ಪ್ರವರ್ಗ-1ರ ಮೀಸಲಾತಿಗಾಗಿ ನಾವು ಉಗ್ರ ಹೋರಾಟಕ್ಕೆ ಸಜ್ಜಾಗಬೇಕಿದೆ," ಎಂದು ಎಲೆರಾಂಪುರ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಅವರು ಸಮುದಾಯಕ್ಕೆ ಅತ್ಯಂತ ಕಟು ಶಬ್ದಗಳಲ್ಲಿ ಎಚ್ಚರಿಕೆಯ ಕರೆ ನೀಡಿದ್ದಾರೆ.
ನಗರದ ರೋಟರಿ ಭವನದಲ್ಲಿ ಭಾನುವಾರ ಹಿರಿಯೂರು ತಾಲೂಕು ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ 'ಕುಂಚಿಟಿಗ ಮಕ್ಕಳ ಪ್ರತಿಭಾ ಪುರಸ್ಕಾರ' ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಒಬಿಸಿ ಮೀಸಲಾತಿಗಾಗಿ ಉಗ್ರ ಹೋರಾಟ: ಕುಂಚಿಟಿಗ ಸಮುದಾಯ ಅತ್ಯಂತ ಹಿಂದುಳಿದಿದೆ. ನಮ್ಮ ಸಹೋದರ ಜಾತಿಗಳಾದ ಕಾಡುಗೊಲ್ಲ, ಕುರುಬ, ನಾಯಕ ಸೇರಿದಂತೆ ಮತ್ತಿತರ ಜಾತಿಗಳಿಗೆ ಹತ್ತಿರ ಇರುವ ಕುಂಚಿಟಿಗರು ಮೀಸಲಾತಿಯಿಂದ ವಂಚಿತರಾಗಿದ್ದಾರೆ. ಯುವಜನತೆಯ ಭವಿಷ್ಯಕ್ಕಾಗಿ ಕೇಂದ್ರದ ಒಬಿಸಿ ಮೀಸಲಾತಿ ಅತ್ಯಗತ್ಯ. ಇದನ್ನು ಪಡೆದುಕೊಳ್ಳಲು ಇನ್ಮುಂದೆ ಶಾಂತಿಯುತ ಮನವಿಗಳಷ್ಟೇ ಸಾಲದು, ನಾವೆಲ್ಲರೂ ಒಗ್ಗೂಡಿ ಉಗ್ರ ಹೋರಾಟ ನಡೆಸಲು ಸಿದ್ಧರಾಗಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಜಾತಿ ಅಸ್ಮಿತೆ ಮತ್ತು ಒಗ್ಗಟ್ಟು: ಕುಂಚಿಟಿಗ ಸಮಾಜದ ಪ್ರತಿಯೊಬ್ಬರೂ ತಮ್ಮ ಜಾತಿಯ ಅಸ್ಮಿತೆಯನ್ನು ಹೆಮ್ಮೆಯಿಂದ ಗುರುತಿಸಿಕೊಳ್ಳಬೇಕು. ಒಳಪಂಗಡಗಳ ಭಿನ್ನಾಭಿಪ್ರಾಯ ಮರೆತು ಇಡೀ ಸಮುದಾಯ ಒಂದೇ ತಾಯಿಯ ಮಕ್ಕಳಂತೆ ಒಗ್ಗಟ್ಟಿನಿಂದ ನಿಲ್ಲದಿದ್ದರೆ ಶೋಷಣೆ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ಶಿಕ್ಷಣದ ಜೊತೆಗೆ ಸಂಸ್ಕಾರ: ಕೇವಲ ಅಂಕಗಳನ್ನು ಗಳಿಸುವ ಶಿಕ್ಷಣದಿಂದ ಸಮಾಜದ ಉದ್ಧಾರ ಸಾಧ್ಯವಿಲ್ಲ. ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣದ ಜೊತೆಗೆ ಹೆತ್ತವರನ್ನು, ಗುರುಹಿರಿಯರನ್ನು ಗೌರವಿಸುವ ಸಂಸ್ಕಾರವನ್ನೂ ಕಲಿಸಬೇಕು ಎಂದು ಶ್ರೀಗಳು ಕರೆ ನೀಡಿದರು.
ಸಮುದಾಯಕ್ಕಾಗಿಯೇ ಬದುಕಿ ಬಾಳಿ: ಪ್ರತಿಯೊಬ್ಬ ವ್ಯಕ್ತಿಯೂ ವೈಯಕ್ತಿಕ ಸ್ವಾರ್ಥವನ್ನು ಬದಿಗಿಟ್ಟು, ತನ್ನ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು. ಕುಂಚಿಟಿಗ ಜಾತಿಯ ಉನ್ನತಿಗಾಗಿಯೇ ಬದುಕಿ ಬಾಳುವ ಜಾಗೃತಿಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಕಟು ಶಬ್ದಗಳಲ್ಲಿ ಸಮಾಜವನ್ನು ಎಚ್ಚರಿಸಿದರು.


"ನಮ್ಮ ಹಕ್ಕುಗಳನ್ನು ನಾವು ಕೇಳಿ ಪಡೆಯುವ ಕಾಲ ಮುಗಿದಿದೆ, ಇನ್ನು ಮುಂದೆ ಹೋರಾಟದ ಮೂಲಕ ಕಿತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಕುಂಚಿಟಿಗ ಸಮಾಜದ ಒಗ್ಗಟ್ಟೇ ನಮ್ಮ ಅತಿ ದೊಡ್ಡ ಶಕ್ತಿ."
ಶ್ರೀ ಹನುಮಂತನಾಥ ಸ್ವಾಮೀಜಿ, ಎಲೆರಾಂಪುರ ಸಂಸ್ಥಾನ ಮಠ.
ಬಯಲು ಸೀಮೆಯ ಕಠಿಣ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಕುಂಚಿಟಿಗ ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಪ್ರಗತಿಗಾಗಿ ಎಂದು ಶ್ರೀ ಹನುಮಂತನಾಥ ಸ್ವಾಮೀಜಿ ಒತ್ತಾಯಿಸಿದರು.
"ಕುಂಚಿಟಿಗರು ನೀರಾವರಿ ವಂಚಿತ ಗುಡ್ಡಗಾಡು ಪ್ರದೇಶಗಳು ಹಾಗೂ ಬಯಲು ಸೀಮೆಯ ಮಳೆ-ಬಿಸಿಲಿನ ಆಟದ ಕಠಿಣ ಪರಿಸ್ಥಿತಿಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಮಕ್ಕಳು ಎಷ್ಟೇ ಕಷ್ಟಪಟ್ಟು ಓದಿದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೀಸಲಾತಿ ಇಲ್ಲದ ಕಾರಣ ಬ್ಯಾಂಕಿಂಗ್, ಪೋಸ್ಟ್ ಆಫೀಸ್, ಸ್ಟಾಫ್ ಸೆಲೆಕ್ಷನ್ ಕಮಿಷನ್, ಹೆಚ್ಎಎಲ್, ಬಿಇಎಲ್, ಐಐಟಿ, ಐಎಎಸ್ , ಐಪಿಎಸ್ ನಂತಹ ಉನ್ನತ ಕ್ಷೇತ್ರಗಳಲ್ಲಿ ಅವಕಾಶ ವಂಚಿತರಾಗುತ್ತಿದ್ದಾರೆ ಈ ತಾರತಮ್ಯ ನಿವಾರಣೆಗೆ ಕೇಂದ್ರದ ಒಬಿಸಿ ಪಟ್ಟಿ ಸೇರ್ಪಡೆ ಅತ್ಯಗತ್ಯ" ಎಂದರು.
ಕೆಪಿಸಿಸಿ ವೀಕ್ಷಕ ಮುರಳೀಧರ ಹಾಲಪ್ಪ ಮಾತನಾಡಿದ ಅವರು, "ಸಮುದಾಯದ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ಹೋಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಮಾಜದ ಬಲಿಷ್ಠರು ಹಾಗೂ ಉಳ್ಳವರು ರಿಯಾಯಿತಿ ದರದಲ್ಲಿ ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಕಲ್ಪಿಸುವ ಮೂಲಕ ಇವರ ನೆರವಿಗೆ ಬರಬೇಕು" ಎಂದು ಕರೆ ನೀಡಿದರು.
ಕೆಎಎಸ್ ಅಧಿಕಾರಿ ಸುಷ್ಮಾ ಪಿಟ್ಲಾಲಿ: ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಮಾತನಾಡಿದ ಅವರು, "ಮುಂದಿನ 10 ವರ್ಷಗಳಲ್ಲಿ ನಾನು ಏನಾಗಬೇಕು ಎಂಬುದನ್ನು ಇಂದೇ ನಿರ್ಧರಿಸಿ, ಅದಕ್ಕೆ ತಕ್ಕಂತೆ ಕಷ್ಟಪಟ್ಟು ಅಧ್ಯಯನ ಮಾಡಬೇಕು" ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕುಂಚಿಟಿಗ ಸಂಘದ ಪ್ರಧಾನ ಕಾರ್ಯದರ್ಶಿ ಹರಿಯಬ್ಬೆ ಸಿ ಹೆಂಜಾರಪ್ಪ ಮಾತನಾಡಿ, ಕುಂಚಿಟಿಗ ಯಾವುದೇ ಜಾತಿಯ ಉಪಜಾತಿಯಲ್ಲ. ಇದೊಂದು ಪ್ರತ್ಯೇಕ ಜಾತಿ. ಕುಂಚಿಟಿಗರು ಒಕ್ಕಲಿಗ ಎಂದು ಶಾಲಾ ದಾಖಲಾತಿಗಳಲ್ಲಿ ಬರೆಸಿಕೊಂಡಿದ್ದರೆ ಕೂಡಲೇ ಶಿಕ್ಷಣ ಇಲಾಖೆಯ ಬಿಇಒ ಅವರಿಗೆ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಲು ಕರೆ ನೀಡಿದರು. ಜಾತಿ ಬದಲಾಯಿಸಿಕೊಂಡಲ್ಲಿ ಮುಂದೆ ಉದ್ಯೋಗಕ್ಕೆ ಸೇರಿಕೊಳ್ಳುವ ಸಂದರ್ಭದಲ್ಲಿ ಸಿಂಧುತ್ವ ದೊರೆಯುವುದಿಲ್ಲ ಎಂದು ಅವರು ಎಚ್ಚರಿಸಿದರು.
1 ಲಕ್ಷ ದೇಣಿಗೆ:
ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಜಿಪಂ ಮಾಜಿ ಅಧ್ಯಕ್ಷ ಪಿಲಾಜನಹಳ್ಳಿ ಜಯಣ್ಣ ಅವರು ವೇದಿಕೆಯಲ್ಲಿ 1 ಲಕ್ಷ ರೂಪಾಯಿಗಳ ನಗದು ದೇಣಿಗೆ ನೀಡುವುದಾಗಿ ಘೋಷಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಯಶಸ್ವಿಗೆ ಹೆಚ್ಚಿನ ಶ್ರಮ ವಹಿಸಿ ಗೊಂದಲಗಳಿಗೆ ಅವಕಾಶ ಇಲ್ಲದೆ ಕೆಲಸ ಮಾಡಿದ ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ. ಹನುಮಂತರಾಯ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕೆಂಪೇಗೌಡ ದಂತ ವೈದ್ಯಕೀಯ ಸಂಸ್ಥೆ ಅಧ್ಯಕ್ಷ ಬೇತೂರು ಪಾಳ್ಯ ಡಾ.ಜೆ.ರಾಜು, ಕೃಷಿಕ ಸಮಾಜದ ಅಧ್ಯಕ್ಷ ಚಿಗಳಿಕಟ್ಟೆ ಕಾಂತರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ಶ್ರವಣಗೆರೆ ಹನುಮಂತರಾಯ, ಹಾಗೂ ಪತ್ರಕರ್ತ ಆಲೂರು ಹನುಮಂತರಾಯಪ್ಪ, ತಾಲೂಕು ಅಧ್ಯಕ್ಷ ಪ್ರೊಫೆಸರ್ ಮೈಸೂರು ಶಿವಣ್ಣ, ಮಲ್ಲಪ್ಪನಹಳ್ಳಿ ಜೋಗೇಶ್, ಹುಲಗಲಕುಂಟೆ ಗ್ರಾಮ ಪಂಚಾಯತಿ ಸದಸ್ಯೆ ಶಶಿಕಲಾ, ಆಪ್ಟಿಕಲ್ಸ್ ರಾಜೇಶ್, ಚಿಲ್ಲಹಳ್ಳಿ ನಿಜಲಿಂಗಪ್ಪ, ಕಾತ್ರಿಕೇನಹಳ್ಳಿ ಮಂಜುನಾಥ್, ಶ್ರೀನಾಥ್, ಚಂದ್ರಶೇಖರ್, ಅವಿನಾಶ್, ಚೇತನ್ ಸೇರಿದಂತೆ ಸಮುದಾಯದ ಮುಖಂಡರು, ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.



