ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಶ್ನೆ ಪತ್ರಿಕೆ ಚೋರಿ ಅಥವಾ ಸೋರಿಕೆಯಾದರೆ ಜಿಲ್ಲಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕಾಂಗ್ರೆಸ್ ಪಕ್ಷದ 'ದ್ವಂದ್ವ ನೀತಿ' ಹಾಗೂ 'ರಾಜಕೀಯ ನಾಟಕ' ಎಂದು ವೀಕ್ಷಿಸಿದ್ದಾರೆ.
ದೆಹಲಿಯಲ್ಲಿ ಹೊಣೆಗಾರಿಕೆಯ ಭಾಷಣ ಬಿಗಿಯುವ ಕಾಂಗ್ರೆಸ್, ಕರ್ನಾಟಕದಲ್ಲಿ ತನ್ನ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಐಎಎಸ್ ಅಧಿಕಾರಿಗಳನ್ನು ಬಲಿಪಶು ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರಾಹುಲ್-ಪ್ರಿಯಾಂಕಾ-ಡಿಕೆಶಿ: ಒಂದೇ ನಾಣ್ಯದ ಎರಡು ಮುಖಗಳು
ಟ್ವಿಟರ್ ನಲ್ಲಿ ಕಿಡಿಕಾರಿರುವ ಆರ್. ಅಶೋಕ್, "ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಡಿ.ಕೆ. ಶಿವಕುಮಾರ್ - ಈ ಮೂವರೂ ಒಂದೇ ನಾಣ್ಯದ ಎರಡು ಮುಖಗಳು. ದೆಹಲಿಯಲ್ಲಿ ರಾಜೀನಾಮೆಗೆ ಆಗ್ರಹಿಸುವ ಕಾಂಗ್ರೆಸ್, ಕರ್ನಾಟಕದಲ್ಲಿ ಮಾತ್ರ ತನ್ನ ನೈಜ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದೆ," ಎಂದು ವಾಗ್ದಾಳಿ ನಡೆಸಿದ್ದಾರೆ.
ಐಎಎಸ್ ಅಧಿಕಾರಿಗಳನ್ನು ಬಲಿಪಶು ಮಾಡುವ ಯತ್ನ:
ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ವ್ಯವಸ್ಥಿತ ಬದಲಾವಣೆ ತರುವುದು ಅಥವಾ ಪರೀಕ್ಷಾ ಅಕ್ರಮ ತಡೆಯುವ ಸುರಕ್ಷಿತ ವ್ಯವಸ್ಥೆ ಮಾಡುವುದನ್ನು ಬಿಟ್ಟು, "ಮುಂದಿನ ಯಾವುದೇ ವೈಫಲ್ಯಕ್ಕೂ ಜಿಲ್ಲಾಧಿಕಾರಿಗಳೇ ಹೊಣೆ" ಎಂದು ಹೇಳಿರುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನ. "ರಾಜಕೀಯ ನಾಯಕರನ್ನು ರಕ್ಷಿಸಿ, ಅಧಿಕಾರಿಗಳ ಮೇಲೆ ಪೂರ್ಣ ಗೂಬೆ ಕೂರಿಸುವುದು ಕಾಂಗ್ರೆಸ್ಗೆ ಅಭ್ಯಾಸವಾಗಿಬಿಟ್ಟಿದೆ" ಎಂದು ಅವರು ಟೀಕಿಸಿದ್ದಾರೆ.
ಅಶೋಕ್ ಎತ್ತಿರುವ ನೇರ ಪ್ರಶ್ನೆ:
"ಬಿಜೆಪಿ ಆಡಳಿತದಲ್ಲಿದ್ದಾಗ ಅಧಿಕಾರಸ್ಥರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುವ ಕಾಂಗ್ರೆಸ್, ತಾನು ಅಧಿಕಾರದಲ್ಲಿದ್ದಾಗ ಮಾತ್ರ ಕೆಳಹಂತದ ಅಧಿಕಾರಿಗಳನ್ನು ಏಕೆ ಬಲಿಪಶು ಮಾಡುತ್ತದೆ? ದೆಹಲಿಯಲ್ಲಿ ನೈತಿಕತೆಯ ಪಾಠ, ಕರ್ನಾಟಕದಲ್ಲಿ ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ತಂತ್ರ - ಇದು ಕಾಂಗ್ರೆಸ್ನ ದ್ವಂದ್ವ ನೀತಿ ಹಾಗೂ ರಾಜಕೀಯ ನಾಟಕವಲ್ಲದೇ ಮತ್ತೇನು?".



