ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜೂನ್ 5ರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೇವಲ ಭಾಷಣ, ಸಸಿ ನೆಡುವ ಸಾಂಪ್ರದಾಯಿಕ ಆಚರಣೆಗಳಿಗೆ ಸೀಮಿತವಾಗದೆ, ಇಬ್ಬರು ವಿದ್ಯಾರ್ಥಿಗಳು ಕಾಡನ್ನು ಬೆಳೆಸಲು ವಿನೂತನ ಹೆಜ್ಜೆ ಇಟ್ಟಿದ್ದಾರೆ. ಮುಂಗಾರು ಮಳೆ ಆರಂಭವಾಗುವ ಮುನ್ನವೇ ಸದ್ದಿಲ್ಲದೆ ಪರಿಸರ ಉಳಿಸುವ ಬೃಹತ್ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನವನ್ನು ನಿಯಂತ್ರಿಸಲು 'ಕಾಡು ಬೆಳೆಸಿ ನಾಡು ಉಳಿಸಿ' ಎಂಬ ಪಣದೊಂದಿಗೆ, ಚಿತ್ರದುರ್ಗದ ಎಸ್ಆರ್ಎಸ್ ಸಂಸ್ಥೆಯ ಸಿಬಿಎಸ್ಇ ಶಾಲೆಯ 9ನೇ ತರಗತಿಯ ಸ್ಕೌಟ್ ವಿದ್ಯಾರ್ಥಿ ಜೀವನ್ ಎಂ.ಎಸ್. ಹಾಗೂ ಮೈಸೂರಿನ ವಿವೇಕಾನಂದ ಸೈನಿಕ್ ಸ್ಕೂಲ್ ವಿದ್ಯಾರ್ಥಿನಿ ಸಿಂಚನ ಎಂ.ಎಸ್. ಈ ಪರಿಸರ ಸ್ನೇಹಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಬೇಸಿಗೆ ರಜೆಯ ಸದ್ಬಳಕೆ – ಬೀಜದ ಉಂಡೆಗಳ ತಯಾರಿ:
ಸಾಮಾನ್ಯವಾಗಿ ಬೇಸಿಗೆ ರಜೆಯಲ್ಲಿ ಮಕ್ಕಳು ಆಟ ಆಡುತ್ತಾ ಸಮಯ ಕಳೆಯುವುದು ಹೆಚ್ಚು. ಆದರೆ ಈ ಇಬ್ಬರು ವಿದ್ಯಾರ್ಥಿಗಳು ತಾವು ವಿವಿಧೆಡೆ ಚಾರಣ ಹೋದ ಸಂದರ್ಭದಲ್ಲಿ ಹಾಗೂ ನಾಡಿನಾದ್ಯಂತ ಸಿಗುವ ಬೇವಿನ ಬೀಜ, ಹಲಸಿನ ಬೀಜ, ನೇರಳೆ ಹಣ್ಣಿನ ಬೀಜ, ಮಾವಿನ ಬೀಜ, ಹುಣಸೆ ಹಣ್ಣಿನ ಬೀಜ ಹಾಗೂ ಕಾಡಿನಲ್ಲಿ ಸಿಗುವ ಬೇಟೆ ಕಾಯಿ ಬೀಜಗಳನ್ನು ಶೇಖರಿಸಿದ್ದರು.
ತಾವು ಸಂಗ್ರಹಿಸಿದ ಬೀಜಗಳನ್ನು ಮನೆಗೆ ತಂದು, ಅದಕ್ಕೆ ಕೆಮ್ಮಣ್ಣು ಮತ್ತು ದನದ ಕೊಟ್ಟಿಗೆ ಗೊಬ್ಬರವನ್ನು ಸಮರ್ಪಕವಾಗಿ ಮಿಶ್ರಣ ಮಾಡಿ, ಸುಮಾರು 1,000ಕ್ಕೂ ಹೆಚ್ಚು ಬೀಜದ ಉಂಡೆಗಳನ್ನು ಸಿದ್ಧಪಡಿಸಿದ್ದಾರೆ.
ಬೀಜದ ಉಂಡೆಗಳ ಪಸರಿಸುವಿಕೆ:
ಭೂಮಿ ಗೀತೆ ಸಂಸ್ಥೆಯ ಪ್ರಸಿದ್ಧ ಪರಿಸರವಾದಿ ಮಿಠಾಯಿ ಆರ್. ಮುರುಗೇಶ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಸಿದ್ಧಪಡಿಸಲಾದ ಬೀಜದ ಉಂಡೆಗಳನ್ನು ಗಿಡ-ಮರಗಳ ಅಗತ್ಯವಿರುವ ಚಿತ್ರದುರ್ಗದ ಪ್ರಸಿದ್ಧ ಪ್ರವಾಸಿ ತಾಣಗಳಾದ ಜೋಗಿಮಟ್ಟಿ, ಆಡುಮಲ್ಲೇಶ್ವರ, ಚಂದ್ರವಳ್ಳಿ ಭಾಗದ ಖಾಲಿ ಜಾಗಗಳಲ್ಲಿ ಹಾಗೂ ಹೊಲದ ಇಕ್ಕೆಲ ಮತ್ತು ಬದುಗಳಲ್ಲಿ ಪಸರಿಸಲಾಯಿತು.
ಪರಿಸರ ವಾಕ್ ಮಾಡುವ ಸಾರ್ವಜನಿಕರಲ್ಲಿ ಜಾಗೃತಿ:
ಬೆಳಿಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ಈ ಭಾಗಗಳಲ್ಲಿ ಪರಿಸರ ವಾಕ್ ಮಾಡುವ ಸಾರ್ವಜನಿಕರಿಗೂ ಸಹ ಈ ಬೀಜದ ಉಂಡೆಗಳ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು. ಅವರ ಕೈಯಿಂದಲೂ ಬೀಜದ ಉಂಡೆಗಳನ್ನು ಹಾಕಿಸುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಲಾಯಿತು.
ಸಾರ್ವಜನಿಕರಿಗೆ ಕರೆ:
ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆಯ ಸುತ್ತಮುತ್ತಲಿರುವ ಖಾಲಿ ಜಾಗದಲ್ಲಿ ಕನಿಷ್ಠ 10 ಗಿಡಗಳನ್ನು ನೆಟ್ಟು, ಅವುಗಳನ್ನು ಕೇವಲ ನೆಡುವುದಷ್ಟೇ ಅಲ್ಲದೆ ಪೋಷಿಸಿ ಬೆಳೆಸಬೇಕಾಗಿದೆ ಎಂದು ವಿದ್ಯಾರ್ಥಿಗಳು ಕರೆ ನೀಡಿದ್ದಾರೆ.
ಈ ವಿನೂತನ ಪರಿಸರ ಜಾಗೃತಿ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಇಚ್ಛಿಸುವವರು ವಿದ್ಯಾರ್ಥಿ ಜೀವನ್ ಎಂ.ಎಸ್. (ಮೊಬೈಲ್ ಸಂಖ್ಯೆ: 9449682119) ಇವರನ್ನು ಸಂಪರ್ಕಿಸಬಹುದಾಗಿದೆ.
ಮಕ್ಕಳ ಈ ಪರಿಸರ ಪ್ರೇಮಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.



