ಚಂದ್ರವಳ್ಳಿ ನ್ಯೂಸ್, ದುರ್ಗಾಪುರ (ಪಶ್ಚಿಮ ಬಂಗಾಳ):
ದೇಶದ ಮೂಲಸೌಕರ್ಯ ವಲಯಕ್ಕೆ ಅಗತ್ಯವಿರುವ ಅತ್ಯಾಧುನಿಕ ಹಾಗೂ ಉನ್ನತ ಗುಣಮಟ್ಟದ ಉಕ್ಕು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಪಶ್ಚಿಮ ಬಂಗಾಳದ ‘ದುರ್ಗಾಪುರ ಸ್ಟೀಲ್ ಪ್ಲಾಂಟ್’ಗೆ ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರ್ಖಾನೆಯ ಪ್ರಮುಖ ಘಟಕವಾದ 'ಮೀಡಿಯಂ ಸ್ಟ್ರಕ್ಚರಲ್ ಮಿಲ್'ಗೆ ಭೇಟಿ ನೀಡಿದ ಸಚಿವರು, ಅಲ್ಲಿನ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉತ್ಪಾದನಾ ಪ್ರಕ್ರಿಯೆಯನ್ನು ವೀಕ್ಷಿಸಿದರು. ನಿರ್ಮಾಣ, ಕೈಗಾರಿಕೆ ಹಾಗೂ ಮೂಲಸೌಕರ್ಯ ವಲಯದ ಬೆಳವಣಿಗೆಗೆ ಅಗತ್ಯವಿರುವ ಪ್ಯಾರಲಲ್ ಫ್ಲೇಂಜ್ ಬೀಮ್ಸ್, ಚಾನೆಲ್ಸ್, ಆಂಗಲ್ಸ್ ಸೇರಿದಂತೆ ಹಲವು ಪ್ರೀಮಿಯಂ ಉಕ್ಕಿನ ಉತ್ಪನ್ನಗಳನ್ನು ಈ ಘಟಕವು ಉತ್ಪಾದಿಸುತ್ತಿದೆ.
ಆತ್ಮನಿರ್ಭರ ಭಾರತಕ್ಕೆ ಬಲ:
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, "ದುರ್ಗಾಪುರ ಸ್ಟೀಲ್ ಪ್ಲಾಂಟ್ನಂತಹ ಅತ್ಯಾಧುನಿಕ ಘಟಕಗಳು ಭಾರತದ ಕೈಗಾರಿಕಾ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿವೆ. ಇದು ವಿದೇಶಗಳಿಂದ ಉಕ್ಕು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡುವುದಲ್ಲದೆ, ಉಕ್ಕಿನ ವಲಯದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ರೂಪಿಸುತ್ತಿದೆ" ಎಂದು ಶ್ಲಾಘಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದರ್ಶಿತ್ವದ ನಾಯಕತ್ವದಲ್ಲಿ, ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತ ಕನಸನ್ನು ನನಸು ಮಾಡಲು ಜಾಗತಿಕ ಮಟ್ಟದ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.
ಭೇಟಿಯ ವೇಳೆ ಕಾರ್ಖಾನೆಯ ಹಿರಿಯ ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರು ಉಪಸ್ಥಿತರಿದ್ದು, ಘಟಕದ ಕಾರ್ಯವೈಖರಿಯ ಕುರಿತು ಸಚಿವರಿಗೆ ವಿವರಣೆ ನೀಡಿದರು.



