ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರೇಟರ್ ಬೆಂಗಳೂರು ಡೆವಲಪ್ಮೆಂಟ್ ಅಥಾರಿಟಿ ಯೋಜನೆಯಡಿ ಬಿಡದಿ ಟೌನ್ಶಿಪ್ಗಾಗಿ ಕೈಗೊಂಡಿರುವ ಅಕ್ರಮ ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣವೇ ಕೈಬಿಡುವಂತೆ ಆಗ್ರಹಿಸಿ, ಕರ್ನಾಟಕ ಪ್ರದೇಶ ಯುವ ಜನತಾದಳ (ಜಾತ್ಯತೀತ) ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
ಜೂನ್ 13, 2026 ರಂದು ಬರೆದಿರುವ ಈ ಪತ್ರದಲ್ಲಿ, ರಾಜ್ಯದ ಕಾಂಗ್ರೆಸ್ ಸರ್ಕಾರವು ಬಡ ಮತ್ತು ಸಣ್ಣ ರೈತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಬಲಿಗೊಟ್ಟು ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ರೈತರ ಹಿತಾಸಕ್ತಿಗೆ ಧಕ್ಕೆ: 498 ಎಕರೆ ಭೂಸ್ವಾಧೀನ
ಜೂನ್ 12, 2026 ರಂದು ರಾಜ್ಯ ಸರ್ಕಾರವು ಬಿದಿ ಪ್ರದೇಶದ ಮೂರು ಗ್ರಾಮಗಳ 498.34 ಎಕರೆ ಫಲವತ್ತಾದ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಿದೆ ಎಂದು ಅವರು ಕಿಡಿಕಾರಿದರು.
ಇದರಿಂದಾಗಿ 755 ಸಣ್ಣ ಮತ್ತು ಮಧ್ಯಮ ರೈತ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಇವರಲ್ಲಿ ಶೇಕಡಾ 82 ರಷ್ಟು ಜನರು ಅತ್ಯಂತ ಬಡವರಾಗಿದ್ದು, 360ಕ್ಕೂ ಹೆಚ್ಚು ಕುಟುಂಬಗಳು ಕೇವಲ ಅರ್ಧ ಎಕರೆಗಿಂತಲೂ ಕಡಿಮೆ ಜಮೀನು ಹೊಂದಿವೆ. ಸಂತ್ರಸ್ತರ ಪೈಕಿ ಬಹುಪಾಲು ಜನರು ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ ಎಂದು ನಿಖಿಲ್ ಪತ್ರದಲ್ಲಿ ವಿವರಿಸಿದ್ದಾರೆ.
9,600 ಎಕರೆ ವಶಪಡಿಸಿಕೊಳ್ಳಲು ಸಂಚು?:
ಪ್ರಸ್ತುತ ಹೊರಡಿಸಲಾಗಿರುವ ಅಧಿಸೂಚನೆಯು ಕೇವಲ ಆರಂಭವಷ್ಟೇ ಆಗಿದ್ದು, ಮುಂದಿನ ದಿನಗಳಲ್ಲಿ ಈ ಭಾಗದ ಸುಮಾರು 9,600 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕಾರ್ಪೊರೇಟ್ ಸಂಸ್ಥೆಗಳಿಗಾಗಿ ಬಲವಂತವಾಗಿ ಕಸಿದುಕೊಳ್ಳಲು ಸರ್ಕಾರ ಬೃಹತ್ ಯೋಜನೆ ರೂಪಿಸಿದೆ ಎಂದು ನಿಖಿಲ್ ಆತಂಕ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ನಿಲುವಿಗೆ ವಿರುದ್ಧವಾದ ನಡೆ:
ರಾಷ್ಟ್ರ ಮಟ್ಟದಲ್ಲಿ 'ದುರಾಶೆಗಿಂತ ಹಸಿರು ಮುಖ್ಯ' ಎಂದು ಭಾಷಣ ಮಾಡುವ ರಾಹುಲ್ ಗಾಂಧಿ ಅವರ ಸಿದ್ಧಾಂತಕ್ಕೆ ಕರ್ನಾಟಕದ ಅವರದೇ ಸರ್ಕಾರ ಸಂಪೂರ್ಣ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಪತ್ರದಲ್ಲಿ ಕುಟುಕಲಾಗಿದೆ. ಬಿಡದಿ ಟೌನ್ಶಿಪ್ ಹೆಸರಿನಲ್ಲಿ ಕಾಂಕ್ರೀಟ್ ಕಾಡು ನಿರ್ಮಿಸಲು ಹಸಿರು ಪರಿಸರವನ್ನು ನಾಶಮಾಡಲಾಗುತ್ತಿದ್ದು, ಬರೋಬ್ಬರಿ 10 ಲಕ್ಷ ಆಮ್ಲಜನಕ ನೀಡುವ ಮರಗಳ ಕತ್ತರಿಸುವಿಕೆಗೆ ಸರ್ಕಾರ ಮರಣಶಾಸನ ಬರೆದಿದೆ ಎಂದು ಅವರು ದೂರಿದ್ದಾರೆ.
ಕಾನೂನುಗಳ ಉಲ್ಲಂಘನೆ ಮತ್ತು ರೈತರ ಪ್ರತಿಭಟನೆ:
ಕೇಂದ್ರದ ಯುಪಿಎ ಸರ್ಕಾರವೇ ತಂದಿದ್ದ ಪ್ರಗತಿಪರ 2013ರ 'ಭೂಸ್ವಾಧೀನ ಕಾಯ್ದೆ'ಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ ಗಾಳಿಗೆ ತೂರಿದೆ. ರೈತರ ಕಡ್ಡಾಯ ಒಪ್ಪಿಗೆ ಮತ್ತು ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ ನಿಯಮಗಳನ್ನು ಬೈಪಾಸ್ ಮಾಡಲಾಗಿದೆ. ಈ ಅನ್ಯಾಯದ ವಿರುದ್ಧ ರೈತರು ಕಳೆದ 450 ದಿನ ಹಾಗೂ ರಾತ್ರಿಗಳಿಂದ ಧೂಳು ಮತ್ತು ಬೀದಿಯಲ್ಲಿ ಮಲಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರವು "ಅಲ್ಲಿ ಯಾವುದೇ ರೈತರಿಲ್ಲ" ಎಂದು ಹೇಳುವ ಮೂಲಕ ಅಹಂಕಾರದ ಪರಮಾವಧಿ ಪ್ರದರ್ಶಿಸಿದೆ ಎಂದು ನಿಖಿಲ್ ಆಕ್ರೋಶ ಹೊರಹಾಕಿದ್ದಾರೆ.
ಮುಖ್ಯಮಂತ್ರಿಗಳಿಗೆ ಸೂಚನೆ ನೀಡಲು ಆಗ್ರಹ:
"ರಾಷ್ಟ್ರ ಮಟ್ಟದಲ್ಲಿ ನೀವು ಪರಿಸರ ಸಂರಕ್ಷಣೆ ಮತ್ತು ದಲಿತರ ಸಬಲೀಕರಣದ ಬಗ್ಗೆ ಮಾತನಾಡುವುದನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ದುರಾಶೆ ಹತ್ತಿಕ್ಕುತ್ತಿದೆ. ದಯವಿಟ್ಟು ತಕ್ಷಣವೇ ಮಧ್ಯಪ್ರವೇಶಿಸಿ, ಈ ಅಂತಿಮ ಭೂಸ್ವಾಧೀನ ಅಧಿಸೂಚನೆಯನ್ನು ಹಿಂಪಡೆಯಲು ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಬೇಕು" ಎಂದು ನಿಖಿಲ್ ಕುಮಾರಸ್ವಾಮಿ ಪತ್ರದ ಮೂಲಕ ರಾಹುಲ್ ಗಾಂಧಿ ಅವರಲ್ಲಿ ಮನವಿ ಮಾಡಿದ್ದಾರೆ.



