ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾಗತಿಕ ಸವಾಲುಗಳ ಈ ಸಂದಿಗ್ಧ ಸಮಯದಲ್ಲಿ ದೇಶದ ಹಿತರಕ್ಷಣೆ ಮತ್ತು ಭಾರತವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಏಳು ಪ್ರಮುಖ ಮನವಿಗಳನ್ನು ಪಾಲಿಸುವಂತೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನಾಗರಿಕರಲ್ಲಿ ವಿನಂತಿಸಿದ್ದಾರೆ.
"ಸೌಕರ್ಯಕ್ಕಿಂತ ದೇಶಹಿತವೇ ಮೊದಲ ಕರ್ತವ್ಯ" ಎಂಬ ಆಶಯದೊಂದಿಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯರೆಲ್ಲರೂ ಒಂದಾಗಿ ಮುನ್ನಡೆಯುವ ಮೂಲಕ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಬೇಕಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಯವರ 7 ಪ್ರಮುಖ ಮನವಿಗಳು ಇಂತಿವೆ:
ಮನೆಯಿಂದಲೇ ಕೆಲಸ: ಸಾಧ್ಯವಾದ ಕಡೆಯಲ್ಲೆಲ್ಲಾ ಮನೆಯಿಂದಲೇ ಕೆಲಸ ಮಾಡಲು ಆದ್ಯತೆ ನೀಡಿ.
ಇಂಧನ ಉಳಿತಾಯ: ಅನಗತ್ಯ ಇಂಧನ ಬಳಕೆಯನ್ನು ಕಡಿಮೆ ಮಾಡುವ ಮೂಲಕ ದೇಶದ ಆರ್ಥಿಕತೆಗೆ ನೆರವಾಗಿ.
ವಿದೇಶ ಪ್ರಯಾಣಕ್ಕೆ ಬ್ರೇಕ್: ಕನಿಷ್ಠ ಒಂದು ವರ್ಷದ ಕಾಲ ವಿದೇಶ ಪ್ರವಾಸಗಳನ್ನು ಕೈಗೊಳ್ಳದಿರಲು ನಿರ್ಧರಿಸಿ.
ಸ್ವದೇಶಿ ಉತ್ಪನ್ನಗಳ ಬಳಕೆ: ನಮ್ಮ ದೇಶದ ಆರ್ಥಿಕತೆ ಬಲಪಡಿಸಲು ಭಾರತೀಯ ಉತ್ಪನ್ನಗಳಿಗೇ ಹೆಚ್ಚಿನ ಆದ್ಯತೆ ನೀಡಿ.
ಆರೋಗ್ಯಕರ ಆಹಾರ ಪದ್ಧತಿ: ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ.
ನೈಸರ್ಗಿಕ ಕೃಷಿ: ಮಣ್ಣಿನ ಗುಣಮಟ್ಟ ಮತ್ತು ಆರೋಗ್ಯದ ದೃಷ್ಟಿಯಿಂದ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ.
ಚಿನ್ನದ ಖರೀದಿ ನಿಯಂತ್ರಣ: ದೇಶದ ವಿದೇಶಿ ವಿನಿಮಯದ ಹಿತದೃಷ್ಟಿಯಿಂದ ಒಂದು ವರ್ಷದವರೆಗೆ ಚಿನ್ನದ ಖರೀದಿಯನ್ನು ಸಾಧ್ಯವಾದಷ್ಟು ತಪ್ಪಿಸಿ.
"ನಾಗರಿಕರ ಸಾಮೂಹಿಕ ಜವಾಬ್ದಾರಿಯುತ ನಡವಳಿಕೆಯು ಜಾಗತಿಕ ಸವಾಲುಗಳ ನಡುವೆಯೂ ಭಾರತವನ್ನು ಹೆಚ್ಚು ಬಲಿಷ್ಠ ಮತ್ತು ಸ್ವಾವಲಂಬಿಯನ್ನಾಗಿಸಲಿದೆ. ಭಾರತಕ್ಕಾಗಿ ನಾವೆಲ್ಲರೂ ಒಂದಾಗಿ ಮುನ್ನಡೆಯೋಣ."
ಬಿ.ವೈ. ವಿಜಯೇಂದ್ರ.
ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಲು ಪ್ರಧಾನಿಯವರು ಈ ಕರೆಯನ್ನು ನೀಡಿದ್ದು, ಪ್ರತಿಯೊಬ್ಬ ಭಾರತೀಯನೂ ರಾಷ್ಟ್ರದ ಏಳಿಗೆಗಾಗಿ ಈ ಶಿಸ್ತನ್ನು ಪಾಲಿಸಬೇಕೆಂದು ವಿಜಯೇಂದ್ರ ಮನವಿ ಮಾಡಿದ್ದಾರೆ.



