ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಅಪಘಾತದಲ್ಲಿ ಯುವಕನೊಬ್ಬ ಅಕಾಲಿಕ ಮರಣ ಹೊಂದಿದ ದುಃಖದ ನಡುವೆಯೂ, ಆತನ ನೇತ್ರಗಳನ್ನು ದಾನ ಮಾಡುವ ಮೂಲಕ ಕುಟುಂಬದವರು ಸಾವಿನಲ್ಲೂ ಸಾರ್ಥಕತೆ ಮೆರೆದ ಹೃದಯಸ್ಪರ್ಶಿ ಘಟನೆ ಸಂಭವಿಸಿದೆ.
ಘಟನೆಯ ವಿವರ:
ಬುಧವಾರದಂದು ಟೀ ನೂಲೇನೂರು ಗೇಟ್ಬಳಿಯ ಅಂಗಡಿಯೊಂದರ ಮುಂದೆ ನಿಂತಿದ್ದ ದಗ್ಗೆ ಗ್ರಾಮದ ನಿವಾಸಿ ಪ್ರದೀಪ್ ಅವರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ಸಾವಿನಲ್ಲೂ ಸಾರ್ಥಕತೆ - ನೇತ್ರದಾನ:
ಕುಟುಂಬಕ್ಕಿದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಶೋಕಸಾಗರದಲ್ಲಿದ್ದರೂ, ಪ್ರದೀಪ್ ಅವರ ಕುಟುಂಬದವರು ಸಾವಿನ ನಂತರವೂ ಬೇರೆಯವರ ಬಾಳಿಗೆ ಬೆಳಕಾಗಲಿ ಎಂಬ ಉದಾತ್ತ ಉದ್ದೇಶದಿಂದ ಕಣ್ಣುಗಳನ್ನು ದಾನ ಮಾಡಲು ಮುನ್ನೆಡೆದರು. ಆಸ್ಪತ್ರೆಯ ವೈದ್ಯರ ನೆರವಿನಿಂದ ನೇತ್ರದಾನ ಪ್ರಕ್ರಿಯೆ ಪೂರ್ಣಗೊಂಡಿತು. ದುಃಖದ ಮಡುವಿನಲ್ಲೂ ಇಂತಹ ಮಾದರಿ ನಿರ್ಧಾರ ಕೈಗೊಂಡ ಪ್ರದೀಪ್ ಅವರ ಕುಟುಂಬಕ್ಕೆ ದಗ್ಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿ ಗೌರವ ವ್ಯಕ್ತಪಡಿಸಿದ್ದಾರೆ.
ಮನೆಯವರ ಅಕ್ರಂದನ:
ಮೃತ ಪ್ರದೀಪ್ ಅವರು ತಂದೆಗೆ ಒಬ್ಬನೇ ಮಗನಾಗಿದ್ದು, ಅವರಿಗೆ ನಾಲ್ಕು ವರ್ಷದ ಎಳೆಯ ಗಂಡು ಮಗುವಿದೆ. ಕುಟುಂಬದ ಆಸರೆಯಾಗಿದ್ದ ಯುವಕನ ಅಗಲಿಕೆಯಿಂದ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು, ನೋಡುಗರ ಕಣ್ಣು ತೇವಗೊಳಿಸಿತು. ಪ್ರದೀಪ್ ಅವರ ಅಂತ್ಯಕ್ರಿಯೆಯು ಬುಧವಾರ ಸಂಜೆ ಅವರ ಸ್ವಂತ ತೋಟದಲ್ಲಿ ನೆರವೇರಿತು.
ಮತ್ತೊಬ್ಬರಿಗೆ ತೀವ್ರ ಗಾಯ:
ಇದೇ ಅಪಘಾತದ ಸಂದರ್ಭದಲ್ಲಿ ನೂಲೇನೂರು ಗ್ರಾಮದ ದಲಿತ ಕುಟುಂಬದ ದಿವಾಂಗತ ಮೂರ್ತಿಯವರ ಮಗಳ ಕಾಲಿನ ಮೇಲೆಯೂ ಕಾರು ಹರಿದಿದ್ದು, ಆಕೆಯ ಕಾಲು ಕಡಿತಗೊಂಡು ತೀವ್ರ ಗಾಯಗೊಂಡಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ..



