ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರತಿಷ್ಠಿತ ಐಪಿಎಲ್ ಫೈನಲ್ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರಗೊಳ್ಳಲು ರಾಜ್ಯ ಸರ್ಕಾರದ ಅತಿಯಾದ "ಉಚಿತ ಟಿಕೆಟ್" ಬೇಡಿಕೆಯೇ ಅಸಲಿ ಕಾರಣ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿವಿಐಪಿಗಳಿಗಾಗಿ 10,000 ಟಿಕೆಟ್ಗಳ ಬೇಡಿಕೆ?
ಬೆಂಗಳೂರಿನಲ್ಲಿ ಪಂದ್ಯ ನಡೆಸಲು ಕ್ರೀಡಾಂಗಣದ ಸಾಮರ್ಥ್ಯದ ಕೊರತೆಯಿದೆ ಎಂದು ಸರ್ಕಾರ ಹೇಳುತ್ತಿರುವುದು ಶುದ್ಧ ಸುಳ್ಳು. ಅಸಲಿಗೆ, ತಮ್ಮ ವಿವಿಐಪಿ ಬಳಗಕ್ಕಾಗಿ ಬರೋಬ್ಬರಿ 10,000 ಉಚಿತ ಟಿಕೆಟ್ಗಳನ್ನು ನೀಡುವಂತೆ ಸರ್ಕಾರ ಬೇಡಿಕೆಯಿಟ್ಟಿತ್ತು ಎಂಬ ಸತ್ಯವನ್ನು ಬಿಸಿಸಿಐ ಬಿಚ್ಚಿಟ್ಟಿದೆ ಎಂದು ನಿಖಿಲ್ ತಿಳಿಸಿದ್ದಾರೆ.
ಬೇಡಿಕೆಯ ವಿವರ ಹೀಗಿದೆ:
ಶಾಸಕರಿಗಾಗಿ: 900 ಟಿಕೆಟ್ಗಳು. ಸರ್ಕಾರದ ಕೋಟಾ: 700 ಟಿಕೆಟ್ಗಳು.
ಒಟ್ಟು ವಿವಿಐಪಿ ಬಳಗಕ್ಕೆ: ಸುಮಾರು 10,000 ಉಚಿತ ಟಿಕೆಟ್ಗಳು.
"ಅಭಿಮಾನಿಗಳ ಆಸ್ತಿ, ನಿಮ್ಮ ಪಾರ್ಟಿ ಹಾಲ್ ಅಲ್ಲ"-
"ಚಿನ್ನಸ್ವಾಮಿ ಕ್ರೀಡಾಂಗಣ ಕ್ರಿಕೆಟ್ ಅಭಿಮಾನಿಗಳ ಆಸ್ತಿಯೇ ಹೊರತು ರಾಜಕಾರಣಿಗಳ ಖಾಸಗಿ ಪಾರ್ಟಿ ಹಾಲ್ ಅಲ್ಲ" ಎಂದು ಕಿಡಿಕಾರಿದ ನಿಖಿಲ್, ಸರ್ಕಾರಿ ಸವಲತ್ತುಗಳನ್ನು ಅನುಭವಿಸುತ್ತಿರುವ ಕೆಎಸ್ಸಿಎ ವ್ಯವಸ್ಥೆಯ ಬಗ್ಗೆಯೂ ನಿಖಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಸಾಮಾನ್ಯ ಅಭಿಮಾನಿಗಳಿಂದ "ಡೈನಾಮಿಕ್ ಪ್ರೈಸಿಂಗ್" ಹೆಸರಿನಲ್ಲಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಇನ್ನೊಂದೆಡೆ, ವಿವಿಐಪಿ ಬಾಕ್ಸ್ನಲ್ಲಿ ಕುಳಿತು ಉಚಿತವಾಗಿ ತಿಂಡಿ ತಿನ್ನಲು ಸರ್ಕಾರ ಅಭಿಮಾನಿಗಳ ಭಾವನೆಯನ್ನೇ ಮಾರಿಕೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಉಚಿತ ಟಿಕೆಟ್ಗಳ ಹಠಕ್ಕಾಗಿ ಬೆಂಗಳೂರಿನಿಂದ ಪಂದ್ಯವನ್ನು ಸ್ಥಳಾಂತರಿಸುವಂತೆ ಮಾಡಿರುವುದು ಇಡೀ ದೇಶದ ಮುಂದೆ ರಾಜ್ಯದ ಘನತೆಗೆ ಧಕ್ಕೆ ತಂದಿದೆ. ಬೆಂಗಳೂರಿನ ಜನತೆ ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ಮಾಡಿರುವ ಈ ದ್ರೋಹವನ್ನು ಜನ ಎಂದಿಗೂ ಮರೆಯುವುದಿಲ್ಲ ಎಂದು ನಿಖಿಲ್ ಅವರು ಎಚ್ಚರಿಸಿದ್ದಾರೆ.



