ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ, ತೆರವಾಗಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಬಹುತೇಕ ಅಂತಿಮಗೊಂಡಿದೆ ಎಂದು ಕಾಂಗ್ರೆಸ್ ಹಿರಿಯ ಮೂಲಗಳು ತಿಳಿಸಿವೆ.
ತೀವ್ರ ಪೈಪೋಟಿ ನಡುವೆ ಹರಿಪ್ರಸಾದ್ಗೆ ಒಲಿದ ಅದೃಷ್ಟ:
ಡಿ.ಕೆ. ಶಿವಕುಮಾರ್ ಅವರ ರಾಜೀನಾಮೆ ಸಿದ್ಧತೆ ಬೆನ್ನಲ್ಲೇ ಕೆಪಿಸಿಸಿ ಗದ್ದುಗೆಗಾಗಿ ಕಾಂಗ್ರೆಸ್ನಲ್ಲಿ ಭಾರಿ ಪೈಪೋಟಿ ನಡೆದಿತ್ತು. ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಶಿವರಾಜ್ ತಂಗಡಗಿ ಹಾಗೂ ಜಿ. ಪರಮೇಶ್ವರ್ ಅವರ ಹೆಸರುಗಳು ಮುಂಚೂಣಿಯಲ್ಲಿದ್ದವು. ವಿಶೇಷವಾಗಿ ಸತೀಶ್ ಜಾರಕಿಹೊಳಿ ಅವರು, 'ಸಿದ್ದರಾಮಯ್ಯ ಅವರ ಬಳಿಕ ರಾಜ್ಯದಲ್ಲಿ ಅಹಿಂದ ನಾಯಕತ್ವವನ್ನು ನಾನೇ ಮುನ್ನಡೆಸುತ್ತೇನೆ' ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ತೀವ್ರ ಲಾಬಿ ನಡೆಸಿದ್ದರು.
ಆದರೆ, ಬದಲಾದ ರಾಜಕೀಯ ಲೆಕ್ಕಾಚಾರದಲ್ಲಿ ಹೈಕಮಾಂಡ್ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಿ, ಕೆಪಿಸಿಸಿ ಪೀಠಕ್ಕೆ ಮೂಲ ಕಾಂಗ್ರೆಸಿಗ ಹಾಗೂ ಹೈಕಮಾಂಡ್ ಆಪ್ತರಾದ ಬಿ.ಕೆ. ಹರಿಪ್ರಸಾದ್ ಅವರನ್ನು ತರಲು ನಿರ್ಧರಿಸಿದೆ ಎನ್ನಲಾಗಿದೆ.
ಜಾತಿ ಸಮೀಕರಣ ಮತ್ತು ಹೈಕಮಾಂಡ್ ತಂತ್ರಗಾರಿಕೆ:
ರಾಜ್ಯದಲ್ಲಿನ ಸದ್ಯದ ರಾಜಕೀಯ ಸಮೀಕರಣಗಳ ಆಧಾರದ ಮೇಲೆ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ. ಹಿಂದುಳಿದ ವರ್ಗದ (ಈಡಿಗ ಸಮುದಾಯ) ಪ್ರಬಲ ನಾಯಕರಾಗಿರುವ 71 ವರ್ಷದ ಬಿ.ಕೆ. ಹರಿಪ್ರಸಾದ್ ಅವರಿಗೆ ಮಣೆ ಹಾಕುವ ಮೂಲಕ ಅಹಿಂದ ವರ್ಗವನ್ನು ಜೊತೆಯಲ್ಲಿಟ್ಟುಕೊಳ್ಳುವುದು ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರವಾಗಿದೆ.
ಇದರೊಂದಿಗೆ, ಜಾತಿ ಲೆಕ್ಕಾಚಾರವನ್ನು ಬ್ಯಾಲೆನ್ಸ್ ಮಾಡಲು ಒಬ್ಬರು ಅಧ್ಯಕ್ಷರ ಜೊತೆಗೆ 2 ರಿಂದ 3 ಕಾರ್ಯಾಧ್ಯಕ್ಷರನ್ನು ನೇಮಿಸುವ ಬಗ್ಗೆಯೂ ಗಂಭೀರ ಚಿಂತನೆ ನಡೆದಿದ್ದು, ಎಲ್ಲ ಸಮುದಾಯಗಳಿಗೂ ಆದ್ಯತೆ ನೀಡುವ ತಂತ್ರ ಹೆಣೆಯಲಾಗಿದೆ.
ಹೈಕಮಾಂಡ್ ನಂಬಿಕೆ: ಬಿಜೆಪಿ ಹಾಗೂ ಆರ್ಎಸ್ಎಸ್ನ ಸದ್ಧಾಂತಿಕ ವಿರೋಧಿಯಾಗಿರುವ ಬಿ.ಕೆ. ಹರಿಪ್ರಸಾದ್ ಅವರ ವಾಕ್ಚಾತುರ್ಯ ಮತ್ತು ಚಾಣಾಕ್ಷತನವು ಮುಂಬರುವ ದಿನಗಳಲ್ಲಿ ಪಕ್ಷವನ್ನು ಚುನಾವಣಾ ತಂತ್ರಗಾರಿಕೆಯೊಂದಿಗೆ ಮುನ್ನಡೆಸಲು ನೆರವಾಗಲಿದೆ ಎಂಬ ಬಲವಾದ ನಂಬಿಕೆ ವರಿಷ್ಠರದ್ದಾಗಿದೆ.
ಬಿ.ಕೆ. ಹರಿಪ್ರಸಾದ್: ನಾಲ್ಕು ದಶಕಗಳ ರಾಜಕೀಯ ಪಯಣ:
ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಅಪಾರ ಸಂಘಟನಾ ಅನುಭವ ಹೊಂದಿರುವ ಬಿ.ಕೆ. ಹರಿಪ್ರಸಾದ್ ಅವರ ಸುದೀರ್ಘ ರಾಜಕೀಯ ಜವಾಬ್ದಾರಿಗಳ ಹೂರಣ ಇಲ್ಲಿದೆ.
1979-1981: ಅಖಿಲ ಭಾರತ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟದ (NSUI) ಪ್ರಧಾನ ಕಾರ್ಯದರ್ಶಿ.
1989-1990: ಅಖಿಲ ಭಾರತ ಯುವ ಕಾಂಗ್ರೆಸ್ ಉಪಾಧ್ಯಕ್ಷ.
1990, 2004, 2013, 2014: ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆ.
1997-1998: ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಜಂಟಿ ಕಾರ್ಯದರ್ಶಿ.
2000-2001: ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ರಾಷ್ಟ್ರೀಯ ಅಧ್ಯಕ್ಷ.
2001-2006: ಎಐಸಿಸಿ ಕಾರ್ಯದರ್ಶಿ.
2006-2018: ಸುದೀರ್ಘ ಅವಧಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ದೇಶದ ಹಲವು ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿ ನಿರ್ವಹಣೆ.
2022 - ಮೇ 2023: ಕರ್ನಾಟಕ ವಿಧಾನಪರಿಷತ್ನ ವಿರೋಧ ಪಕ್ಷದ ನಾಯಕ.
ರಾಜ್ಯದ ನಾಯಕರು ಹಾಗೂ ತಳಮಟ್ಟದ ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟ ಹೊಂದಿರುವ ಬಿ.ಕೆ. ಹರಿಪ್ರಸಾದ್ ಅವರು ಕೆಪಿಸಿಸಿ ಸಾರಥಿಯಾಗಲಿರುವ ಅಧಿಕೃತ ಆದೇಶ ಸದ್ಯದಲ್ಲೇ ದೆಹಲಿಯಿಂದ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.



