ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಅಭಿವೃದ್ಧಿಯ ಹೆಸರಿನಲ್ಲಿ ನಿರ್ಮಾಣವಾದ ಹೆದ್ದಾರಿ ಇಂದು ಕಳವಿಭಾಗಿ ಗ್ರಾಮಸ್ಥರ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿದೆ. ಈಗಾಗಲೇ ಹಲವು ಜೀವಗಳು ಬಲಿಯಾಗಿದ್ದರೂ ಇಲಾಖೆಯ ಅಧಿಕಾರಿಗಳ ಕಣ್ಣು ತೆರೆದಿಲ್ಲವೇ?" ಎಂದು ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರಾದ ಎಂ. ರವೀಂದ್ರಪ್ಪ ತೀವ್ರ ಆಕ್ರೋಶ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ.
ಹಿರಿಯೂರು ತಾಲೂಕು, ಐಮಂಗಳ ಹೋಬಳಿಯ ಕಳವಿಭಾಗಿ ಗ್ರಾಮದ ರಂಗೇಗೌಡ ಎಂಬುವವರು ರಸ್ತೆ ದಾಟುವಾಗ ಭೀಕರ ಅಪಘಾತಕ್ಕೀಡಾಗಿದ್ದು, ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಜೆಡಿಎಸ್ ಮುಖಂಡ ಎಂ. ರವೀಂದ್ರಪ್ಪ ಅವರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಕ್ತಸಿಕ್ತವಾಗುತ್ತಿದೆ ಭಕ್ತರು ನಡೆಯುವ ಹಾದಿ:
ಕಳವಿಭಾಗಿ ಗ್ರಾಮದ ಪ್ರಸಿದ್ಧ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅವರೆಲ್ಲರೂ ಇದೇ ರಸ್ತೆಯನ್ನೇ ದಾಟಿಕೊಂಡು ಬರಬೇಕಾದ ಅನಿವಾರ್ಯತೆ ಇದೆ. ಆದರೆ, ಅತ್ಯಂತ ಜನನಿಬಿಡವಾದ ಈ ಸ್ಥಳದಲ್ಲಿ ರಸ್ತೆ ದಾಟಲು ಸಾರ್ವಜನಿಕರಿಗೆ ಯಾವುದೇ ಸುರಕ್ಷಿತ ವ್ಯವಸ್ಥೆ ಇಲ್ಲ. ಇಲ್ಲಿ ಮೇಲ್ಸೇತುವೆ(ಫ್ಲೈಓವರ್), ಯು-ಟರ್ನ್ ಆಗಲಿ ಅಥವಾ ಕೆಳಸೇತುವೆ (ಅಂಡರ್ಪಾಸ್) ಆಗಲಿ ಇಲ್ಲದಿರುವುದು ಸಾರ್ವಜನಿಕರ ಜೀವಕ್ಕೆ ಕುತ್ತು ತರುತ್ತಿದೆ.
ಅಧಿಕಾರಿಗಳೊಂದಿಗೆ ಚರ್ಚೆ - ಕಠಿಣ ಎಚ್ಚರಿಕೆ:
ಸ್ಥಳಕ್ಕೆ ಭೇಟಿ ನೀಡಿದ ಎಂ. ರವೀಂದ್ರಪ್ಪ ಅವರು ತಕ್ಷಣವೇ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ, ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ, ಸ್ಥಳೀಯರ ಆಕ್ರೋಶ ಮತ್ತು ಭೀಕರ ಪರಿಸ್ಥಿತಿಯನ್ನು ವಿವರಿಸಿದರು.
"ಇಲ್ಲಿಯವರೆಗೆ ಸುಮಾರು 15 ರಿಂದ 16 ಭೀಕರ ಅಪಘಾತಗಳು ಸಂಭವಿಸಿವೆ. ಅಮಾಯಕರು ರಕ್ತ ಚೆಲ್ಲುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು, ತಕ್ಷಣವೇ ಕಳವಿಭಾಗಿ ಗ್ರಾಮದ ಬಳಿ ಅಂಡರ್ಪಾಸ್ ನಿರ್ಮಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಸೇರಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ" ಎಂದು ರವೀಂದ್ರಪ್ಪ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಪಘಾತದಿಂದ ಆತಂಕಗೊಂಡಿರುವ ಕಳವಿಭಾಗಿ ಗ್ರಾಮಸ್ಥರು, ಪ್ರತಿ ಬಾರಿ ರಸ್ತೆ ದಾಟುವಾಗಲೂ ಪ್ರಾಣವನ್ನು ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ ಎಂದು ರವೀಂದ್ರಪ್ಪ ನೋವು ತೋಡಿಕೊಂಡರು.



