ಚಂದ್ರವಳ್ಳಿ ನ್ಯೂಸ್, ಹೊಸದಿಲ್ಲಿ:
ಜುಲೈ 20 ರಂದು ನೀಟ್ ಪರೀಕ್ಷೆಯ ಅಕ್ರಮ ಖಂಡಿಸಿ 'ಕಾಕ್ರೋಚ್ ಜನತಾ ಪಕ್ಷ' ನೇತೃತ್ವದಲ್ಲಿ ನಡೆದ ಶಾಂತಿಯುತ 'ಸಂಸತ್ ನಡಿಗೆ' ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಕ್ರಿಮಿನಲ್ಗಳೇ ಕಾರಣ ಎಂಬ ಆಘಾತಕಾರಿ ಸತ್ಯ ದೆಹಲಿ ಪೊಲೀಸರ ತನಿಖೆಯಿಂದ ಬಯಲಾಗಿದೆ.
ಪ್ರತಿಭಟನೆಯ ವಿಡಿಯೋ, ಸಿಸಿಟಿವಿ ಫೂಟೇಜ್ ಹಾಗೂ ಸಾರ್ವಜನಿಕರ ವಿಡಿಯೋಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಪೊಲೀಸರ ಮೇಲೆ ಹಲ್ಲೆ, ಕಲ್ಲು ತೂರಾಟ ಹಾಗೂ ವಾಹನ ಜಖಂಗೊಳಿಸಿದ ಕೃತ್ಯದಲ್ಲಿ ಬರೋಬ್ಬರಿ 2,863 ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಭಾಗಿಯಾಗಿರುವುದು ಪತ್ತೆಯಾಗಿದೆ.
ಕಲ್ಲು ತೂರಿದವರಲ್ಲಿ ಕೊಲೆಗಾರರು, ಡಕಾಯಿತರು!: ಪ್ರತಿಭಟನೆಯ ನೆಪದಲ್ಲಿ ಗುಂಪು ಸೇರಿದವರಲ್ಲಿ ಭಾರಿ ಅಪರಾಧ ಎಸಗಿದ ಕಿಲಾಡಿ ಕ್ರಿಮಿನಲ್ ಗಳೇ ಹೆಚ್ಚಾಗಿದ್ದರು ಎಂಬುದು ವರದಿಯಿಂದ ಸ್ಪಷ್ಟವಾಗಿದೆ.
101 ಜನರು ಕೊಲೆ ಆರೋಪ ಎದುರಿಸುತ್ತಿರುವವರು. 284 ಜನರು ಡಕಾಯಿತಿ ಮತ್ತು ಕಳ್ಳತನ ಪ್ರಕರಣಗಳ ಆರೋಪಿಗಳು. 92 ಜನರು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾದವರು. 989 ಜನರು ವಿವಿಧ ಗಂಭೀರ ಕ್ರಿಮಿನಲ್ ಹಿನ್ನೆಲೆ ಹೊಂದಿರುವವರು.
ವಿಶೇಷ ಅಪರಾಧಗಳು: 61 ಜನರ ಮೇಲೆ ಮಹಿಳಾ ದೌರ್ಜನ್ಯ, 6 ಜನರ ಮೇಲೆ ಪೋಕ್ಸೋ ಹಾಗೂ ಹಲವರ ಮೇಲೆ ಅಪಹರಣ, ಡ್ರಗ್ಸ್ ಮಾರಾಟ, ಸರಗಳ್ಳತನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸುಗಳಿವೆ.
ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್: ಪ್ರಕರಣಗಳ ರದ್ದು!
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಅಪರಾಧ ಹಿನ್ನೆಲೆ ಇಲ್ಲದ ಮತ್ತು ಶಾಂತಿಯುತವಾಗಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ಕೈಬಿಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಹಿಂಸಾಚಾರ ಎಸಗಿದ ಕ್ರಿಮಿನಲ್ಗಳನ್ನು ಬಂಧಿಸಿ ಕಠಿಣ ತನಿಖೆಗೆ ಗುರಿಪಡಿಸಲಾಗುತ್ತಿದೆ.
ಭದ್ರತಾ ನಿಯಮ ಮೀರಿ ಸಂಸತ್ತಿಗೆ ಮುತ್ತಿಗೆ ಯತ್ನ:
ಪ್ರತಿಭಟನೆಗೆ ಜಂತರ್ ಮಂತರ್ನಲ್ಲಿ ಮಾತ್ರ ಅನುಮತಿ ನೀಡಲಾಗಿತ್ತು. ಆದರೆ ಪ್ರತಿಭಟನಾಕಾರರು ಭದ್ರತಾ ತಡೆಗಳನ್ನು ಲೆಕ್ಕಿಸದೆ ಸಂಸತ್ತಿನ ಕಡೆಗೆ ನುಗ್ಗಿದರು. ಬ್ಯಾರಿಕೇಡ್ಗಳನ್ನು ತಳ್ಳಿ ಮುನ್ನುಗ್ಗಿದಾಗ, ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ಲಾಠಿಚಾರ್ಜ್ ನಡೆಸಬೇಕಾಯಿತು.
ಶಾಂತಿಯುತವಾಗಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಹೋರಾಟದ ಮಧ್ಯೆ ಕ್ರಿಮಿನಲ್ಗಳು ತೂರಿಕೊಂಡಿದ್ದರಿಂದ ಹಲವು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಆದಾಗ್ಯೂ, ಪೊಲೀಸರು ಅಪಾರ ಸಂಯಮದಿಂದ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
"ಕಲ್ಲು ತೂರುತ್ತಿರುವವರು ನಮ್ಮ ಪಕ್ಷದವರಲ್ಲ!":ಅಭಿಜಿತ್ ದೀಪ್ಕೆ
ಜುಲೈ 22ರಂದು ಪ್ರತಿಭಟನೆ ಭೀಕರ ರೂಪ ಪಡೆದಾಗ, CJP ಸಂಸ್ಥಾಪಕ ಅಭಿಜಿತ್ ದೀಪ್ಕೆ ಪೊಲೀಸ್ ವಾಹನವೇರಿ ಹಿಂಸೆಗೆ ಇಳಿಯದಂತೆ ಮನವಿ ಮಾಡಿದ್ದರು. "ಕಲ್ಲು ಎಸೆಯುತ್ತಿರುವ ಕಿಡಿಗೇಡಿಗಳಿಗೂ ಸಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಅವರು ಪೊಲೀಸರಿಗೆ ಸ್ಪಷ್ಟನೆ ನೀಡಿದ್ದರು.
ಸಾವಿರಾರು ವಿದ್ಯಾರ್ಥಿಗಳು ಉತ್ತಮ ಉದ್ದೇಶದಿಂದ ಕೈಗೊಂಡಿದ್ದ ಶಾಂತಿಯುತ ಹೋರಾಟವನ್ನು ದಾರಿ ತಪ್ಪಿಸಲು ಮತ್ತು ಭದ್ರತೆಗೆ ಧಕ್ಕೆ ತರಲು ಕ್ರಿಮಿನಲ್ ಶಕ್ತಿಗಳು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.



