ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತ ಸರ್ಕಾರದ ಅರಣ್ಯ ಸಚಿವಾಲಯ ಮತ್ತು ಹವಮಾನ ಬದಲಾವಣೆ ಸಚಿವಾಲಯವು ಜಾರಿಗೆ ತಂದಿರುವ ಹೊಸ ಘನತ್ಯಾಜ್ಯ ನಿರ್ವಹಣಾ ನಿಯಮ 2026ರ ಅನ್ವಯ, ಹಿರಿಯೂರು ನಗರಸಭಾ ವ್ಯಾಪ್ತಿಯಲ್ಲಿ ಇನ್ನುಮುಂದೆ ಸಾರ್ವಜನಿಕರು ಕಸವನ್ನು ಕಡ್ಡಾಯವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಿ ನೀಡಬೇಕು.
ಈ ನಿಯಮವನ್ನು ಉಲ್ಲಂಘಿಸುವ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಎ. ವಾಸೀಂ ಅವರು ತೀವ್ರ ಎಚ್ಚರಿಕೆ ನೀಡಿದ್ದಾರೆ.
ನಗರದ ವಾರ್ಡ್ ನಂಬರ್ 08ರ ಬಸವನಕಟ್ಟೆ ಹತ್ತಿರ ಸಾರ್ವಜನಿಕರಿಗೆ ಕಸ ವಿಂಗಡಣೆ ಕುರಿತು ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
4 ಬಣ್ಣದ ಬಕೆಟ್ಗಳು:
ಕಸ ವಿಂಗಡಣೆ ಹೇಗೆ?ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಪ್ರಾಯೋಗಿಕವಾಗಿ ತ್ಯಾಜ್ಯ ವಿಂಗಡಣೆ ಮಾಡಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಕಸವನ್ನು ನಾಲ್ಕು ಬಣ್ಣಗಳ ಬುಟ್ಟಿಗಳಲ್ಲಿ ಪ್ರತ್ಯೇಕಿಸಬೇಕು. ಬಕೆಟ್ ಬಣ್ಣ ತ್ಯಾಜ್ಯದ ವಿಧ ಒಳಗೊಳ್ಳುವ ವಸ್ತುಗಳು.
ಹಸಿರುಹಸಿ ತ್ಯಾಜ್ಯಅಡುಗೆ ಮನೆ ತ್ಯಾಜ್ಯ, ಆಹಾರ, ತರಕಾರಿ, ಹಣ್ಣು, ಮಾಂಸದ ತ್ಯಾಜ್ಯ, ಹೂವು ಹಾಗೂ ಕೊಳೆಯುವ ವಸ್ತುಗಳು.
ನೀಲಿಒಣ ತ್ಯಾಜ್ಯಎಲ್ಲಾ ರೀತಿಯ ಪ್ಲಾಸ್ಟಿಕ್, ಬಟ್ಟೆ, ಕಬ್ಬಿಣ, ರಬ್ಬರ್, ಮರದ ತ್ಯಾಜ್ಯ ಇತ್ಯಾದಿ.
ಕೆಂಪುಸ್ಯಾನಿಟರಿ (ನೈರ್ಮಲ್ಯ) ತ್ಯಾಜ್ಯಡೈಪರ್, ಸ್ಯಾನಿಟರಿ ನ್ಯಾಪ್ಕಿನ್ಸ್, ಕಾಂಡೂಮ್ಸ್ ಇತ್ಯಾದಿ.
ಕಪ್ಪುವಿಶೇಷ ಕಾಳಜಿ (ಸ್ಪೆಷಲ್ ಕೇರ್) ತ್ಯಾಜ್ಯಪೇಂಟ್ ಡಬ್ಬಿ, ಔಷಧಿ ಬಾಟಲಿ, ಬಲ್ಬ್/ಟ್ಯೂಬ್ಲೈಟ್, ಇ-ತ್ಯಾಜ್ಯ, ಅವಧಿ ಮೀರಿದ ಔಷಧಿಗಳು, ಒಡೆದ ಥರ್ಮಾಮೀಟರ್, ಬ್ಯಾಟರಿ, ಸೂಜಿ/ಸಿರಿಂಜ್, ಬ್ಯಾಂಡೇಜ್ ಇತ್ಯಾದಿ.
ಆರ್.ಆರ್.ಆರ್ ನಿಯಮ ಪಾಲಿಸಿ: ಮುಂದುವರಿದು ಮಾತನಾಡಿದ ಪೌರಾಯುಕ್ತರು, "ಸಾರ್ವಜನಿಕರು Reduce (ಕಡಿಮೆ ಮಾಡಿ), Reuse (ಮರುಬಳಕೆ ಮಾಡಿ), Recycle (ಮರುಸಂಸ್ಕರಿಸಿ) ಸೂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ನಿಮ್ಮಲ್ಲಿ ಮರುಬಳಕೆ ಮಾಡಬಹುದಾದ ಯಾವುದೇ ವಸ್ತುಗಳಿದ್ದಲ್ಲಿ ಅವುಗಳನ್ನು ನಗರಸಭೆ ವಾಹನಕ್ಕೆ ನೀಡಬಹುದು. ಆ ವಸ್ತುಗಳನ್ನು ಅವಶ್ಯಕತೆ ಇರುವ ಆಶ್ರಮಗಳಿಗೆ ಅಥವಾ ಬಡ ಮಕ್ಕಳಿಗೆ ವಿತರಿಸಲಾಗುವುದು," ಎಂದರು.
ಎಲ್ಲಂದರಲ್ಲಿ ಕಸ ಹಾಕದೆ 'ಸ್ವಚ್ಛ ಹಿರಿಯೂರು' ಮತ್ತು 'ಪ್ಲಾಸ್ಟಿಕ್ ಮುಕ್ತ ಹಿರಿಯೂರು' ನಿರ್ಮಾಣಕ್ಕೆ ಸಹಕರಿಸಲು ಕೋರಿದರು.
ಜನಪ್ರತಿನಿಧಿಗಳ ಕರೆ:ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಾರ್ಡ್ ಮಾಜಿ ಸದಸ್ಯರಾದ ಅಬ್ದುಲ್ ನಭಿ, ಮಹಮ್ಮದ್ ಸೈಫುಉಲ್ಲಾ ಮತ್ತು ಆಶಿಯಾ ಅವರು ಮಾತನಾಡಿ, ನಗರದ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಇನ್ನುಮುಂದೆ ನಗರಸಭೆ ವಾಹನಕ್ಕೆ ಕಸವನ್ನು ಕಡ್ಡಾಯವಾಗಿ ವಿಂಗಡಿಸಿಯೇ ನೀಡೋಣ ಮತ್ತು ನಗರಸಭೆಯ ಸ್ವಚ್ಛತಾ ಅಭಿಯಾನದೊಂದಿಗೆ ಕೈಜೋಡಿಸೋಣ ಎಂದು ವಾರ್ಡಿನ ಜನತೆಗೆ ಕರೆ ನೀಡಿದರು.



