ಚಂದ್ರವಳ್ಳಿ ನ್ಯೂಸ್ ಬೆಂಗಳೂರು: ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದ್ದು, ಜೆಡಿಎಸ್ ಪ್ರಮುಖ ನಾಯಕ ಹೆಚ್.ಡಿ. ರೇವಣ್ಣ ಅವರು ಮತ ಚಲಾಯಿಸಿದರು. ಆದರೆ, ಮತದಾನದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮದೇ ಮೈತ್ರಿ ಪಕ್ಷವಾದ ಬಿಜೆಪಿಯ ನಡವಳಿಕೆಯ ವಿರುದ್ಧ ಬಹಿರಂಗವಾಗಿಯೇ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ನಡೆದುಕೊಂಡ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ ರೇವಣ್ಣ, ಜೆಡಿಎಸ್ ವರಿಷ್ಠರಾದ ದೇವೇಗೌಡರ ರಾಜಕೀಯ ಘನತೆಯನ್ನು ನೆನಪಿಸಿದರು.
"ದೇವೇಗೌಡರು ಈ ದೇಶದ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿ ಬಂದವರು. ಇಂತಹ ಮಹಾನ್ ನಾಯಕರು ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕಾಗಿ ಬೇರೆಯವರ ಮನೆ ಬಾಗಿಲಿಗೆ ಹೋಗಿ ಕೈಮುಗಿದು ಬೇಡಬೇಕಾದ ಪರಿಸ್ಥಿತಿ ಬಂದಿದೆಯೇ?" ಎಂದು ರೇವಣ್ಣ ಖಾರವಾಗಿ ಪ್ರಶ್ನಿಸಿದರು.
'ಸುಮಲತಾ ಅವರಿಗೆ ಕೊಟ್ಟಿದ್ದರೂ ಒಪ್ಪುತ್ತಿದ್ದೆವು'
ಬಿಜೆಪಿಯ ಗೊಂದಲದ ನಿರ್ಧಾರಗಳನ್ನು ಲೇವಡಿ ಮಾಡಿದ ಅವರು, "ಮೊದಲು ಬಿಜೆಪಿಯವರು ದೇವೇಗೌಡರು ಮತ್ತು ಡಿ.ವಿ. ಸದಾನಂದಗೌಡರ ಹೆಸರನ್ನು ಪ್ರಸ್ತಾಪ ಮಾಡಿದರು. ಆಮೇಲೆ ಮಂಡ್ಯದ ಮೇಡಂ (ಸುಮಲತಾ ಅಂಬರೀಶ್) ಹೆಸರನ್ನು ತಂದರು. ಒಂದು ವೇಳೆ ಬಿಜೆಪಿಯವರು ಸುಮಲತಾ ಅವರಿಗಾದರೂ ಟಿಕೆಟ್ ಕೊಟ್ಟಿದ್ದರೆ ನಮಗೆ ಯಾವುದೇ ಅಭ್ಯಂತರ ಇರುತ್ತಿರಲಿಲ್ಲ. ನಮ್ಮ ಮೈತ್ರಿಕೂಟದವರೇ ಒಬ್ಬರು ಇದ್ದಾರೆ ಎಂದು ನಾವು ಸುಮ್ಮನಾಗುತ್ತಿದ್ದೆವು," ಎಂದು ಬೇಸರ ವ್ಯಕ್ತಪಡಿಸಿದರು.
2028ಕ್ಕೆ ಮುಯ್ಯಿ ತೀರಿಸುವ ಎಚ್ಚರಿಕೆ!
ಬಿಜೆಪಿ ನಾಯಕರ ಏಕಪಕ್ಷೀಯ ನಡೆಗೆ ತೀವ್ರ ಆಕ್ರೋಶಗೊಂಡಿರುವ ರೇವಣ್ಣ, ಮುಂಬರುವ ವಿಧಾನಸಭಾ ಚುನಾವಣೆಯನ್ನೇ ಗುರಿಯಾಗಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ. "ಇರಲಿ, ಇನ್ನು ಕೇವಲ ಎರಡು ವರ್ಷಗಳಷ್ಟೇ ಬಾಕಿ ಇರೋದು. 2028ರ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಏನು ಮಾಡಬೇಕು ಎಂಬುದನ್ನು ನಾವೂ ತೋರಿಸಿಕೊಡುತ್ತೇವೆ," ಎಂದು ಮೈತ್ರಿ ಪಕ್ಷಕ್ಕೆ ನೇರವಾಗಿಯೇ ಸವಾಲು ಹಾಕಿದ್ದಾರೆ.
ವಿಧಾನಪರಿಷತ್ ಚುನಾವಣೆ ನಡುವೆಯೇ ಹೊರಬಿದ್ದಿರುವ ಹೆಚ್.ಡಿ. ರೇವಣ್ಣ ಅವರ ಈ ಸ್ಫೋಟಕ ಹೇಳಿಕೆ, ಸದ್ಯ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.



