ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಭಾಗದ ಜನರ ಬಹುದಿನಗಳ ಕನಸಾಗಿದ್ದ ರಾಷ್ಟ್ರೀಯ ಹೆದ್ದಾರಿ 69ರ 'ಶಿರಾ–ಬಡವನಹಳ್ಳಿ' ಚತುಷ್ಪಥ (ಫೋರ್-ಲೇನ್) ರಸ್ತೆ ಯೋಜನೆಗೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಂತಿಮ ಆದೇಶ ಹೊರಡಿಸಿದೆ. ಒಟ್ಟು 584.98 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಯೋಜನೆಯ ಮುಖ್ಯಾಂಶಗಳು:
ಟೆಂಡರ್ ಪೂರ್ಣ: 20.2 ಕಿ.ಮೀ ಉದ್ದದ ಶಿರಾ–ಬಡವನಹಳ್ಳಿ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಈಗಾಗಲೇ ಗುತ್ತಿಗೆ ಆದೇಶ ನೀಡಲಾಗಿದೆ.
ಮುಂದಿನ ಹಂತದ ಯೋಜನೆ: ರಾಷ್ಟ್ರೀಯ ಹೆದ್ದಾರಿ 69ರ ಒಟ್ಟು 52 ಕಿ.ಮೀ (ಶಿರಾ–ಬಡವನಹಳ್ಳಿ–ಬೈರೆನಹಳ್ಳಿ) ರಸ್ತೆಯನ್ನು ಒಟ್ಟು 1,585 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯಿದೆ. ಇದರಲ್ಲಿ ಬಡವನಹಳ್ಳಿಯಿಂದ ಬೈರೆನಹಳ್ಳಿವರೆಗಿನ 32 ಕಿ.ಮೀ ರಸ್ತೆಗೆ 1,000 ಕೋಟಿ ರೂ. ಅನುಮೋದನೆ ಪಡೆಯುವ ಪ್ರಸ್ತಾವನೆ ಅಂತಿಮ ಹಂತದಲ್ಲಿದೆ.
ಪ್ರಯಾಣಿಕರಿಗೆ ಹಾಗೂ ಕೈಗಾರಿಕೆಗಳಿಗೆ ಅಪಾರ ಅನುಕೂಲ:
ತಿರುಪತಿಗೆ ಕೇವಲ 4 ಗಂಟೆ: ಪ್ರಸ್ತುತ ಶಿರಾದಿಂದ ತುಮಕೂರು, ದಾಬಸ್ಪೇಟೆ, ಕೋಲಾರ ಮಾರ್ಗವಾಗಿ ತಿರುಪತಿ ತಲುಪಲು 6 ರಿಂದ 7 ಗಂಟೆ ಬೇಕಾಗುತ್ತಿತ್ತು. ಈ ಹೊಸ ಹೆದ್ದಾರಿ ನಿರ್ಮಾಣದ ಬಳಿಕ ಶಿರಾ–ಮಧುಗಿರಿ–ಚಿಕ್ಕಬಳ್ಳಾಪುರ–ಚಿಂತಾಮಣಿ ಮಾರ್ಗವಾಗಿ ಕೇವಲ 4 ಗಂಟೆಗಳಲ್ಲಿ ತಿರುಪತಿ ತಲುಪಬಹುದು. ಇದರಿಂದ ಪ್ರಯಾಣದ ಸಮಯದ ಜೊತೆಗೆ ಸುಮಾರು 60 ಕಿ.ಮೀ ದೂರವೂ ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದರು.
ಸುಲಭ ಸಂಪರ್ಕ: ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ತಿರುಪತಿ ಮತ್ತು ಚೆನ್ನೈ ತಲುಪಲು ಅತ್ಯಂತ ನೆರವಾಗಲಿದೆ.
ಸರಕು ಸಾಗಣೆಗೆ ಬಲ: ವಸಂತನರಸಾಪುರ ಮತ್ತು ಶಿರಾ ಕೈಗಾರಿಕಾ ಪ್ರದೇಶಗಳಿಂದ ಚೆನ್ನೈ ಬಂದರಿಗೆ ಉತ್ತಮ ಸಂಪರ್ಕ ಕಲ್ಪಿಸುವುದಲ್ಲದೆ, ಶಿರಾ ಮತ್ತು ಬೆಂಗಳೂರು ನಡುವೆ ಪರ್ಯಾಯ ರಸ್ತೆಯಾಗಿ ರೂಪಗೊಳ್ಳಲಿದೆ.
ತುಮಕೂರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಈ ಚತುಷ್ಪಥ ಹೆದ್ದಾರಿ ಮೈಲಿಗಲ್ಲಾಗಲಿದೆ ಎಂದು ವಿ. ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



