ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ರಾಜ್ಯದಲ್ಲಿ ಸಮತೋಲಿತ ಸಚಿವ ಸಂಪುಟ ರಚಿಸಲು ಕಾಂಗ್ರೆಸ್ ಹೈಕಮಾಂಡ್ ತೀವ್ರ ಕಸರತ್ತು ನಡೆಸಿದೆ. ಪಕ್ಷದೊಳಗಿನ ವಿವಿಧ ಬಣಗಳನ್ನು ತೃಪ್ತಿಪಡಿಸಲು ಹೈಕಮಾಂಡ್ "11:11:11" ಎಂಬ ವಿಶೇಷ ಫಾರ್ಮುಲಾವನ್ನು ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಏನಿದು '11:11:11' ಸಂಪುಟ ಸೂತ್ರ?
ಒಟ್ಟು 34 ಸದಸ್ಯರ ಬಲದ ಸಚಿವ ಸಂಪುಟದಲ್ಲಿ ಅಧಿಕಾರ ಹಂಚಿಕೆ ಹೀಗಿರಲಿದೆ ಎನ್ನಲಾಗಿದೆ.
ಹೈಕಮಾಂಡ್ ಕೋಟಾ: ಮುಖ್ಯಮಂತ್ರಿ ಸೇರಿದಂತೆ 11 ಸ್ಥಾನಗಳು ಹೈಕಮಾಂಡ್ ನೇರ ಆಯ್ಕೆಯ ನಾಯಕರಿಗೆ.
ಸಿದ್ದರಾಮಯ್ಯ ಬಣ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರಿಗೆ 11 ಸ್ಥಾನ.
ಡಿಕೆಶಿ ಆಪ್ತರು: ನೂತನ ಸಿಎಂ ಡಿ.ಕೆ. ಶಿವಕುಮಾರ್ ಅವರ ಬಣಕ್ಕೆ 11 ಸ್ಥಾನ. ಡಿಸಿಎಂ ಹುದ್ದೆ ಇರುವುದಿಲ್ಲ: ಆರಂಭದಲ್ಲಿ ಉಪಮುಖ್ಯಮಂತ್ರಿ ಹುದ್ದೆಗಳ ಕುರಿತು ಭಾರೀ ಚರ್ಚೆಗಳು ನಡೆದಿದ್ದರೂ, ಹೊಸ ಸಚಿವ ಸಂಪುಟದಲ್ಲಿ ಯಾವುದೇ ಉಪಮುಖ್ಯಮಂತ್ರಿ ಹುದ್ದೆಗಳು ಇರುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ.
ಯುವ ನಾಯಕರಿಗೆ ಆದ್ಯತೆ; ಮೊದಲ ಹಂತದಲ್ಲಿ 10 ಮಂದಿಗೆ ಚಾನ್ಸ್!
ಹೊಸ ಸರ್ಕಾರವು ಚುರುಕಾಗಿ ಮತ್ತು ಜನಪರವಾಗಿ ಕೆಲಸ ಮಾಡಲು ಯುವ, ಸಕ್ರಿಯ ಹಾಗೂ ಉತ್ತಮ ಸಾಧನೆ ತೋರಿದ ಶಾಸಕರಿಗೆ ಮೊದಲ ಆದ್ಯತೆ ನೀಡುವಂತೆ ಹೈಕಮಾಂಡ್ ಸೂಚಿಸಿದೆ. ಮೊದಲ ಹಂತದಲ್ಲಿ ಸಿಎಂ ಡಿಕೆಶಿ ಅವರೊಂದಿಗೆ ಕನಿಷ್ಠ 10 ಪ್ರಮುಖ ಹಿರಿಯ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರೇಸ್ನಲ್ಲಿರುವ ಪ್ರಮುಖ ಮುಖಗಳು:
ಯತೀಂದ್ರ ಸಿದ್ದರಾಮಯ್ಯ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಅಲ್ಪಸಂಖ್ಯಾತ ಕೋಟಾ: ಹಿರಿಯ ನಾಯಕರಾದ ಜಮೀರ್ ಅಹ್ಮದ್ ಖಾನ್, ಎನ್.ಎ. ಹ್ಯಾರಿಸ್ ಮತ್ತು ಯು.ಟಿ. ಖಾದರ್ ಹೆಸರು ಮುಂಚೂಣಿಯಲ್ಲಿದೆ.
ಎಸ್.ಟಿ ಸಮುದಾಯದ ಸವಾಲು: ಕಳೆದ ಬಾರಿ ಸಚಿವ ಸ್ಥಾನ ವಂಚಿತರಾಗಿದ್ದ ಬಿ. ನಾಗೇಂದ್ರ ಮತ್ತು ಕೆ.ಎನ್. ರಾಜಣ್ಣ ಅವರಿಗೆ ಈ ಬಾರಿ ಪರಿಶಿಷ್ಟ ಪಂಗಡದ ಕೋಟಾದಡಿ ಪ್ರಾತಿನಿಧ್ಯ ನೀಡುವುದು ಹೈಕಮಾಂಡ್ಗೆ ದೊಡ್ಡ ಸವಾಲಾಗಿದೆ.
ಹೊಸಬರಿಗೆ ನಿಗಮ-ಮಂಡಳಿ: ಮೊದಲ ಬಾರಿಗೆ ಶಾಸಕರಾಗಿರುವ ಇಕ್ಬಾಲ್ ಹುಸೇನ್, ಬಸವರಾಜ ಶಿವಗಂಗೆ ಹಾಗೂ ನಯನಾ ಮೋಟಮ್ ಅವರಿಗೆ ಸದ್ಯ ಸಂಪುಟದಲ್ಲಿ ಸ್ಥಾನ ಸಿಗುವುದು ಕಷ್ಟವಿದ್ದು, ಇವರನ್ನು ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಿಸಲು ಚರ್ಚೆ ನಡೆದಿದೆ.
ಶೀಘ್ರದಲ್ಲೇ ಕೆಪಿಸಿಸಿಗೆ ಹೊಸ ಸಾರಥಿ ಆಯ್ಕೆ:
ಡಿ.ಕೆ. ಶಿವಕುಮಾರ್ ಅವರ ಬಳಿಕ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸೂಕ್ತ ನಾಯಕನ ಹುಡುಕಾಟ ತೀವ್ರಗೊಂಡಿದೆ. ಸದ್ಯ ಈ ರೇಸ್ನಲ್ಲಿ ಸಚಿವರುಗಳಾದ ಪ್ರಿಯಾಂಕ್ ಖರ್ಗೆ ಮತ್ತು ಸತೀಶ್ ಜಾರಕಿಹೊಳಿ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ.
ಮಾಜಿ ಸಿಎಂ ಸಿದ್ದರಾಮಯ್ಯಗೆ ಕೃತಜ್ಞತೆ:
ಇದೇ ವೇಳೆ, ಶನಿವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುದೀರ್ಘ ರಾಜಕೀಯ ಸೇವೆಗೆ ಕೃತಜ್ಞತೆ ಸಲ್ಲಿಸಿ ವಿಶೇಷ ನಿರ್ಣಯ ಅಂಗೀಕರಿಸಲಾಯಿತು.
2013-18 ಹಾಗೂ 2023-26ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಮತ್ತು ಎರಡು ಬಾರಿ ಪ್ರತಿಪಕ್ಷ ನಾಯಕರಾಗಿ ಅವರು ನೀಡಿದ ಕೊಡುಗೆಯನ್ನು ಪಕ್ಷ ಸ್ಮರಿಸಿದೆ. ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ಬದ್ಧತೆ, ಆಡಳಿತ ಸಾಮರ್ಥ್ಯ ಮತ್ತು ಮಾರ್ಗದರ್ಶನ ಮುಂದಿನ ದಿನಗಳಲ್ಲೂ ಪಕ್ಷ ಹಾಗೂ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಅತ್ಯಗತ್ಯ ಎಂದು ಹೈಕಮಾಂಡ್ ಅಭಿಪ್ರಾಯಪಟ್ಟಿದೆ.



