ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾವೇಶವು ನೂರಾರು ಅಮಾಯಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲು ಹಾಕಿದೆ ಎಂದು ಜನತಾದಳ (ಜಾತ್ಯತೀತ) ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವರ್ಷಗಟ್ಟಲೆ ಕಷ್ಟಪಟ್ಟು ರಾಷ್ಟ್ರಮಟ್ಟದ ಅತ್ಯುನ್ನತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET ಗಾಗಿ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಗಳಿಗೆ ಈ ರಾಜಕೀಯ ಕಾರ್ಯಕ್ರಮ ಶಾಪವಾಗಿ ಪರಿಣಮಿಸಿದೆ ಎಂದು ಜೆಡಿಎಸ್ ಗಂಭೀರವಾಗಿ ಆರೋಪಿಸಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಪರಿಣಾಮವಾಗಿ, ಪರೀಕ್ಷಾ ಕೇಂದ್ರಗಳಿಗೆ ಹೊರಟಿದ್ದ ವಿದ್ಯಾರ್ಥಿಗಳು ಗಂಟೆಗಳ ಕಾಲ ಟ್ರಾಫಿಕ್ನಲ್ಲಿ ಸಿಲುಕಿಕೊಳ್ಳಬೇಕಾಯಿತು. ಕೇವಲ 2 ನಿಮಿಷ ತಡವಾಗಿ ಬಂದ ಕಾರಣಕ್ಕೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಒಳಗೆ ಬಿಡದಿದ್ದಾಗ, ಪರೀಕ್ಷೆ ಬರೆಯಲಾಗದೆ ವಿದ್ಯಾರ್ಥಿಗಳು ಹಾಗೂ ಪೋಷಕರು ಕಣ್ಣೀರು ಹಾಕಿದ ಹೃದಯವಿದ್ರಾವಕ ದೃಶ್ಯಗಳು ಕಂಡುಬಂದವು.
ಡಿ.ಕೆ. ಶಿವಕುಮಾರ್ ಅವರಿಗೆ ಜೆಡಿಎಸ್ ಪ್ರಶ್ನೆ-
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು ಎತ್ತಿರುವ ಜೆಡಿಎಸ್, "ಬೆಂಗಳೂರಿನ ಟ್ರಾಫಿಕ್ನಲ್ಲಿ ಸಿಲುಕಿ, ಕೇವಲ 2 ನಿಮಿಷ ತಡವಾದ ಕಾರಣಕ್ಕೆ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳ ಈ ಕಣ್ಣೀರಿಗೆ ಯಾರು ಹೊಣೆ ಡಿ.ಕೆ. ಶಿವಕುಮಾರ್ ಅವರೇ?" ಎಂದು ಕೆಪಿಸಿಸಿ ಅಧ್ಯಕ್ಷರನ್ನು ನೇರವಾಗಿ ಪ್ರಶ್ನಿಸಿದೆ.
ಗೃಹ ಇಲಾಖೆ ಹಾಗೂ ಪೊಲೀಸರ ದಿವ್ಯ ನಿರ್ಲಕ್ಷ್ಯ-
ರಾಷ್ಟ್ರಮಟ್ಟದ ಇಷ್ಟು ಮಹತ್ವದ ಪರೀಕ್ಷೆ ಇರುವ ದಿನದಂದೇ ನಗರದ ಹೃದಯಭಾಗದಲ್ಲಿ ಇಂತಹ ಬೃಹತ್ ರಾಜಕೀಯ ಸಮಾವೇಶಕ್ಕೆ ಅನುಮತಿ ನೀಡಿದ ಗೃಹ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಬೇಜವಾಬ್ದಾರಿತನವನ್ನು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ. ಇಲಾಖೆಯ ಈ ದಿವ್ಯ ನಿರ್ಲಕ್ಷ್ಯಕ್ಕೆ ಏನೆನ್ನಬೇಕು ಎಂದು ಆಡಳಿತ ವ್ಯವಸ್ಥೆಯ ವಿರುದ್ಧ ಕಿಡಿಕಾರಿದೆ.
"ಅಧಿಕಾರದ ಧಾವಂತದಲ್ಲಿ ನಾಡಿನ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಲಜ್ಜೆಗೆಟ್ಟ ನಿಮ್ಮ ಸರ್ಕಾರಕ್ಕೆ ನೊಂದ ಮಕ್ಕಳು ಮತ್ತು ಪೋಷಕರ ಕಣ್ಣೀರಿನ ಶಾಪ ತಟ್ಟದೆ ಬಿಡದು."
ಜೆಡಿಎಸ್ ಆಕ್ರೋಶ.
ಕಾಂಗ್ರೆಸ್ ನಾಯಕರಾದ ಬಿ.ಕೆ. ಹರಿಪ್ರಸಾದ್ ಅವರನ್ನೂ ಟ್ಯಾಗ್ ಮಾಡಿರುವ ಜೆಡಿಎಸ್, ಸರ್ಕಾರದ ಈ ಜನವಿರೋಧಿ ಧೋರಣೆಯನ್ನು ಖಂಡಿಸಿದೆ. ಮಕ್ಕಳ ಭವಿಷ್ಯಕ್ಕಿಂತ ರಾಜಕೀಯ ಶಕ್ತಿ ಪ್ರದರ್ಶನವೇ ಮುಖ್ಯವಾಯಿತೇ ಎಂಬ ಸಾರ್ವಜನಿಕರ ಆಕ್ರೋಶಕ್ಕೂ ಈಗ ಜೆಡಿಎಸ್ ಧ್ವನಿಯಾಗಿದೆ. ಭವಿಷ್ಯದ ವೈದ್ಯರಾಗಬೇಕಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಕಣ್ಣೀರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಜೆಡಿಎಸ್ ಹೇಳಿದೆ.



