Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೋಶಿ ದಾಳಕ್ಕೆ ಸಿಲುಕಿ ಎಚ್‌ಡಿಕೆ ‘ಹರಕೆ ಕುರಿ’: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೇವಲ ದಾಳವಾಗಿ ಬಳಸಿಕೊಳ್ಳುತ್ತಿದ್ದು, ಅವರನ್ನು ಹರಕೆ ಕುರಿಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ತುರ್ತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು. ಎರಡು ಬಾರಿ ರಾಜ್ಯದ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಈ ಹಿಂದೆ ಪ್ರಲ್ಹಾದ್ ಜೋಶಿ ಅವರ ಬಗ್ಗೆ ಏನು ಹೇಳಿದ್ದರು ಎಂಬುದು ಜಗತ್ತಿಗೇ ಗೊತ್ತು. ಅವರಿಗೆ ಈಗ ಅಂತಹ ಯಾವ ಪರಿಸ್ಥಿತಿ ಬಂದಿದೆಯೋ ತಿಳಿಯುತ್ತಿಲ್ಲ ಎಂದು ಅವರು ಲೇವಡಿ ಮಾಡಿದರು.

"ಬಿಜೆಪಿಗೆ ಕಾಂಗ್ರೆಸ್ ಅನ್ನು ನೇರವಾಗಿ ಎದುರಿಸುವ ಶಕ್ತಿಯಿಲ್ಲ":
ಮೈತ್ರಿ ಪಕ್ಷಗಳ ವಿಭಜನೆ ಇತಿಹಾಸ: ಶಿವಸೇನಾ, ಅಕಾಲಿ ದಳ, ಟಿಎಂಸಿ, ಜೆಡಿಯು ಸೇರಿದಂತೆ ದೇಶದ ಪ್ರಾದೇಶಿಕ ಪಕ್ಷಗಳನ್ನು ವಿಭಜಿಸಿ ಬೇಳೆ ಬೇಯಿಸಿಕೊಂಡ ಇತಿಹಾಸ ಬಿಜೆಪಿಯದ್ದು. ಈಗ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ.

ದಾಳವಾಗಿ ಬಳಕೆಯಾದ ಎಚ್‌ಡಿಕೆ: ಪ್ರಲ್ಹಾದ್ ಜೋಶಿ ಅವರ ಪಕ್ಷಕ್ಕೆ ಕಾಂಗ್ರೆಸ್ ಅನ್ನು ನೇರವಾಗಿ ಎದುರಿಸುವ ತಾಕತ್ತಿಲ್ಲ. ಅದಕ್ಕಾಗಿಯೇ ಅವರು ಕುಮಾರಸ್ವಾಮಿ ಅವರನ್ನು ಮುಂದೆ ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಆರೋಪಿಸಿದರು.

ಮತದಾರರ ಮ್ಯಾಪಿಂಗ್ ದಂಧೆ: ಕರ್ನಾಟಕ ರಾಜ್ಯದಲ್ಲಿ 5.65 ಲಕ್ಷ ಮತದಾರರ ಮ್ಯಾಪಿಂಗ್ ನೆಪದಲ್ಲಿ ಸುಮಾರು 50 ಲಕ್ಷ ಜನರನ್ನು ಮತಪಟ್ಟಿಯಿಂದ ಕೈಬಿಡಲು ದೊಡ್ಡ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.

ಅಕ್ರಮ ಮತದಾನದಲ್ಲಿ ಬಿಜೆಪಿಯವರದ್ದೇ ಡಾಕ್ಟರೇಟ್’:
ರಾಮನಗರದ ಮಸೀದಿ ಹಾಗೂ ಕಾಂಗ್ರೆಸ್ ನಾಯಕರ ಮನೆಗಳಲ್ಲಿ ಗಣತಿ ನಮೂನೆ ತುಂಬಲಾಗುತ್ತಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, "ಬಿಜೆಪಿ ಪರವಾಗಿ ಆರ್‌ಎಸ್‌ಎಸ್‌ನವರು ಸತ್ತವರ ಹೆಸರಿನಲ್ಲಿ ನಕಲಿ ಮತ ಹಾಕಿರುವುದನ್ನು ನಾವು ಸಾಕಷ್ಟು ನೋಡಿದ್ದೇವೆ. ಇದರಲ್ಲಿ ಬಿಜೆಪಿಯವರು ಡಾಕ್ಟರೇಟ್ ಮಾಡಿದ್ದಾರೆ. ರಾಮನಗರ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರು 1 ಲಕ್ಷ ಮತಗಳ ಅಂತರದಿಂದ ಗೆದ್ದಾಗ ಅಲ್ಲಿ ಬಾಂಗ್ಲಾದೇಶದವರು ಇರಲಿಲ್ಲವೇ?" ಎಂದು ಪ್ರಶ್ನಿಸಿದರು.

ಜೋಶಿ ಅವರೇ, ರಾಜ್ಯಕ್ಕೆ ತಂದ ಅನುದಾನವೆಷ್ಟು?:
"
ಪ್ರಲ್ಹಾದ್ ಜೋಶಿ ಅವರು ರಾಜ್ಯದ ಅಭಿವೃದ್ಧಿ ಹಾಗೂ ಸಂಸ್ಕೃತಿ ಬಗ್ಗೆ ಸಂಸತ್ತಿನಲ್ಲಿ ಎಷ್ಟು ಮಾತನಾಡಿದ್ದಾರೆ? ಕರ್ನಾಟಕಕ್ಕೆ ಎಷ್ಟು ಅನುದಾನ ತಂದಿದ್ದಾರೆ? ಚುನಾವಣೆಗೂ ಮುನ್ನ ಮಹದಾಯಿ ಯೋಜನೆ ಜಾರಿಯಾಯಿತೆಂದು ಸಂಭ್ರಮಿಸಿದ ಇವರಿಗೆ, ಇಂದಿಗೂ ಪರಿಸರ ಇಲಾಖೆಯ ಅನುಮತಿ ತರಲು ಸಾಧ್ಯವಾಗಿಲ್ಲ," ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಮೋದಿ-ಶಾ ಜೋಡಿಯಿಂದ ಸಂವಿಧಾನ ಬುಡಮೇಲು ಸಂಚು:
ಮೊದಲು ಸಿಎಎ ಮತ್ತು ಎನ್‌ಆರ್‌ಸಿ ಮೂಲಕ ಹುನ್ನಾರ ನಡೆಸಿದ ಬಿಜೆಪಿ, ಅಸ್ಸಾಂನಲ್ಲಿ ಬಾಂಗ್ಲಾ ವಲಸಿಗರ ದೊಡ್ಡ ಪಟ್ಟಿ ಬಿಡುಗಡೆ ಮಾಡಿತು. ಆದರೆ ಕೊನೆಗೆ ಅಲ್ಲಿ 23 ಸಾವಿರ ಅಕ್ರಮ ವಲಸಿಗರೂ ಸಿಗಲಿಲ್ಲ. "ಈಗ ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತಗಳನ್ನು ಕೈಬಿಟ್ಟು, 27 ಲಕ್ಷ ಜನರ ಸ್ಪಷ್ಟತೆ ಇಲ್ಲದಂತೆ ಮಾಡಲಾಗಿದೆ. ನೇರವಾಗಿ ಜನರಿಂದ ಬಹುಮತ ಪಡೆಯಲು ಸಾಧ್ಯವಿಲ್ಲದ ಕಾರಣ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿಯು ಈ ಷಡ್ಯಂತ್ರದ ಮೂಲಕ ಸಂವಿಧಾನವನ್ನು ಬುಡಮೇಲು ಮಾಡುತ್ತಿದೆ," ಎಂದು ಟೀಕಿಸಿದರು.

ಮಸೀದಿ, ದೇವಸ್ಥಾನಗಳಲ್ಲಿ ಅರ್ಜಿ ತುಂಬುತ್ತಿರುವುದಕ್ಕೆ ಸ್ಪಷ್ಟನೆ:
ಬೆಂಗಳೂರಿನ ವಿವಿಧೆಡೆ ಬಿಜೆಪಿ ಬಿಎಲ್‌ಎಗಳು ಮತದಾರರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ ಕೆಪಿಸಿಸಿ ಅಧ್ಯಕ್ಷರು, ಸಾರ್ವಜನಿಕ ಸ್ಥಳಗಳಲ್ಲಿ ಅರ್ಜಿ ತುಂಬಲು ಆಯೋಗದಲ್ಲೇ ಅವಕಾಶವಿದೆ ಎಂದರು. ಕೊಳಗೇರಿ ಪ್ರದೇಶಗಳಿಗೆ ಹೋಗಲು ಬಿಎಲ್‌ಒಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಬಡವರು ಹಾಗೂ ಅನಕ್ಷರಸ್ಥರಿಗೆ ನೆರವಾಗಲು ಸಮುದಾಯ ಭವನ, ಮಸೀದಿ ಹಾಗೂ ದೇವಾಲಯಗಳಲ್ಲಿ ಕಾನೂನುಬದ್ಧವಾಗಿಯೇ ಗಣತಿ ನಮೂನೆ ತುಂಬಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

"ನಮ್ಮ ನಿಲುವು ಸ್ಪಷ್ಟವಾಗಿದೆ. ನಕಲಿ ಮತದಾರರನ್ನು, ಮೃತಪಟ್ಟವರನ್ನು ಪಟ್ಟಿಯಿಂದ ಖಂಡಿತಾ ಕಿತ್ತೊಗೆಯಿರಿ. ಆದರೆ, ಯಾವೊಬ್ಬ ನೈಜ ಮತ್ತು ಅರ್ಹ ಮತದಾರನೂ ತನ್ನ ಮತದಾನದ ಹಕ್ಕಿನಿಂದ ವಂಚಿತನಾಗಬಾರದು. ಬಿಜೆಪಿಯವರಲ್ಲಿ ತಾವೇ ಕುಣಿಯಲಾರದೆ 'ನೆಲ ಡೊಂಕು' ಎನ್ನುವ ಗೊಂದಲದ ಸ್ಥಿತಿಯಿದೆ," ಎಂದು ಹರಿಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.