ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸತ್ಯವನ್ನು ಸೂತ್ರವಾಗಿಟ್ಟುಕೊಂಡು ಸುಖದ ದಾರಿ ಕಂಡುಕೊಂಡ ಏಕೈಕ ಸಾದ್ವಿ ಹೇಮರಡ್ಡಿ ಮಲ್ಲಮ್ಮ ಎಂದು ಹಿರಿಯೂರಿನ ಗಿರೀಶ ಪದವಿಪೂರ್ವ ಕಾಲೇಜು ನಿವೃತ್ತ ಉಪ ಪ್ರಾಚಾರ್ಯರಾದ ಹೆಚ್.ಆರ್.ತಿಪ್ಪೇಸ್ವಾಮಿ ಹೇಳಿದರು.
ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ವತಿಯಿಂದ ನೀಲಕಂಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಸೋಮವಾರ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಸಂಸಾರದ ತಾಪತ್ರೆ, ಗಂಡನ ಮನೆಯವರು ಎಷ್ಟೆ ಕಿರುಕುಳ ನೀಡಿದರೂ ಸಹನೆ, ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ. ಕ್ರಿಯಾಶೀಲತೆ, ಸೃಜನಶೀಲತೆ ನಡೆ ಹೊಂದಿದ್ದ ಹೇಮರಡ್ಡಿ ಮಲ್ಲಮ್ಮ ಭಕ್ತಿಯಿಂದ ಮಲ್ಲಯ್ಯನನ್ನು ಪ್ರಾರ್ಥಿಸುತ್ತಿದ್ದಳು. ಕುಟುಂಬಕ್ಕೆ, ಸಮಾಜಕ್ಕೆ ಬದುಕನ್ನು ಮೀಸಲಿಟ್ಟು, ಸದಾ ಮನೆಯ ಒಳಿತನ್ನು ಬಯಸಿದವಳು. ಶಿಸ್ತು, ಸಂಯಮ, ಬದ್ದತೆಯಿದ್ದ ಕಾರಣ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಇಷ್ಟಪಟ್ಟು ಕೆಲಸ ಮಾಡುತ್ತಿದ್ದಳು. ಇಡೀ ಬದುಕೆ ಮೌಲ್ಯಭರಿತವಾಗಿತ್ತು ಎಂದು ಗುಣಗಾನ ಮಾಡಿದರು.
ಶುದ್ದ ಮನಸ್ಸಿನ ಹೇಮರಡ್ಡಿ ಮಲ್ಲಮ್ಮ ಧಾರ್ಮಿಕ ಆಚರಣೆಯಲ್ಲಿ ಅಪಾರ ಆಸಕ್ತಿಯಿಟ್ಟುಕೊಂಡಿದ್ದರಿಂದ ಸರಳತೆಯಿಂದ ಶ್ರೇಷ್ಟತೆ ಕಡೆಗೆ ಸಾಗಲು ಸಾಧ್ಯವಾಯಿತು.
ಹದಿನಾಲ್ಕು, ಹದಿನೈದನೆ ಶತಮಾನದ ಹೇಮರಡ್ಡಿ ಮಲ್ಲಮ್ಮನಲ್ಲಿ ಲೋಕಪ್ರಜ್ಞೆ, ಪ್ರಾಪಂಚಿಕ ಜ್ಞಾನವಿತ್ತು. ಸಂಸ್ಕಾರಯುತ ತಂದೆ-ತಾಯಿಗಳ ಮಗಳಾಗಿ ಜನಿಸಿದ್ದರಿಂದ
ಬಾಲ್ಯದಲ್ಲಿಯೇ ಸಹನೆ, ಸೇವಾ ಗುಣವಿತ್ತು. ಪ್ರಸ್ತುತ ಸಮಾಜದಲ್ಲಿ ನೈತಿಕತೆ ಕುಸಿಯುತ್ತಿದೆ. ಸರಳವಾದ ನಡೆ ನುಡಿಯಿಂದ ಎಲ್ಲವನ್ನು ಬದಲಾಯಿಸಬಹುದು ಎಂಬುದಕ್ಕೆ ಹೇಮರಡ್ಡಿ ಮಲ್ಲಮ್ಮನೆ ಸಾಕ್ಷಿ ಎಂದರು.
ಬದ್ದ, ಬಸವ, ಅಂಬೇಡ್ಕರ್, ಅಬ್ದುಲ್ಕಲಾಂ, ಅಟಲ್ ಬಿಹಾರಿವಾಜಪೇಯಿ, ಅಕ್ಕಮಹಾದೇವಿ ಇವರುಗಳ ಬದುಕೆ ಎಲ್ಲರಿಗೂ ಆದರ್ಶವಾಗಬೇಕು. ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸಿದರೆ ಸಾಲದು, ಜೀವನದಲ್ಲಿ ಸಂಸ್ಕಾರ ಕಲಿಯಬೇಕು. ಗುರು-ಹಿರಿಯರು ಪೋಷಕರನ್ನು ಗೌರವಿಸುವ ಗುಣ ಮೈಗೂಡಿಸಿಕೊಳ್ಳಬೇಕು. ಆತ್ಮವಿಶ್ವಾಸವಿಟ್ಟುಕೊಂಡರೆ ನಿಮ್ಮ ಮೇಲೆ ನಿಮಗೆ ನಂಬಿಕೆ ಹುಟ್ಟುತ್ತದೆ ಎಂದು ತಿಳಿಸಿದರು.
ಮುಂಬೈನ ಪರಮಾಣು ಶಕ್ತಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್ ಕೆ.ಶಿವಪ್ರಕಾಶ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಸನ್ಮಾನ ನನಗೆ ಜವಾಬ್ದಾರಿಯನ್ನು ಹೆಚ್ಚಿಸಿ ಸಮಾಜದ ಬಂಧುಗಳ ಏಳಿಗೆಗೆ ಶ್ರಮಿಸಲು ಪ್ರೇರೇಪಿಸಿದೆ. ಹೇಮರಡ್ಡಿ ಮಲ್ಲಮ್ಮನಲ್ಲಿದ್ದ ಆದರ್ಶ ಗುಣಗಳನ್ನು ಇಂದಿನ ಎಲ್ಲಾ ಮಹಿಳೆಯರು ಅಳವಡಿಸಿಕೊಳ್ಳಬೇಕಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರೆ ಇತರೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಕಠಿಣ ಪರಿಶ್ರಮ, ಪ್ರಾಮಾಣಿಕತೆಯಿಂದ ಜೀವನದಲ್ಲಿ ಗುರಿ
ಮುಟ್ಟಲು ಸಾಧ್ಯ. ಶಿಕ್ಷಣದಿಂದ ಮಾತ್ರ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಡಾ.ಎಲ್.ಪಾಲಾಕ್ಷಯ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿ ಸಮಾಜದ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಲು ಬಿಲ್ಡಿಂಗ್ ಕಟ್ಟಲು ಪ್ಲಾನ್ ಮಾಡಿದ್ದೇವೆ. ಇದಕ್ಕೆ ಸಮಾಜದ ಬಾಂಧವರು ನೆರವು ನೀಡಿದ್ದಾರೆ. ಮುಂದಿನ ವರ್ಷ ಕಟ್ಟಡ ಕಟ್ಟೋಣ. ಹೇಮರಡ್ಡಿ ಮಲ್ಲಮ್ಮ ಯಾವುದೇ ಪ್ರತಿಫಲ, ಅಪೇಕ್ಷೆಗಳಿಲ್ಲದೆ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಭಕ್ತಿಯಿಂದ ಸಮಾಜ ಸೇವೆ ಮಾಡಿಕೊಂಡು ಮಹಾ ಸಾದ್ವಿ ಎನಿಸಿಕೊಂಡಳು. ಸಮಾಜದ ಪ್ರತಿಯೊಬ್ಬ ಮಹಿಳೆಯರು ಹೇಮರಡ್ಡಿ ಮಲ್ಲಮ್ಮನಲ್ಲಿದ್ದ ಆದರ್ಶ ಗುಣಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಡಿ.ಟಿ.ಶಿವಾನಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತ ಸಾಂಸಾರಿಕ ಜೀವನದಲ್ಲಿ
ಅನೇಕ ಕಷ್ಟಗಳನ್ನು ಸಹಿಸಿಕೊಂಡು ವಿಶ್ವಕ್ಕೆ ಮಾದರಿ ಮಹಿಳೆ ಎನಿಸಿಕೊಂಡ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ೨೦೧೯ ರಿಂದ ಆಚರಿಸಿಕೊಂಡು ಬರುತ್ತಿದ್ದೇವೆ.
ಜೋಗಿಮಟ್ಟಿ ಗಿರಿಧಾಮದಲ್ಲಿ ಗಿಡ ನೆಡುವ ಕಾರ್ಯಕ್ರಮ, ಭಗವದ್ಗೀತೆ ಅಭಿಯಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕೊರೋನಾ ಸಂದರ್ಭದಲ್ಲಿ ಮಾಸ್ಕ್ ಹಾಗೂ ೮೧ ಮಂದಿ ಬಡವರಿಗೆ ದಿನಸಿ ಕಿಟ್ಗಳ ವಿತರಣೆ, ಸಮಾಜಕ್ಕೆ ನಿವೇಶನ ಖರೀಧಿ ಹೀಗೆ ಹತ್ತು ಹಲವಾರು ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ ಎಂದು ಸಮಾಜ ನಡೆದು ಬಂದ ದಾರಿಯನ್ನು ವಿವರಿಸಿದರು.
ಬಳ್ಳಾರಿ ಮಹಾನಗರಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್, ಗೌರವಾಧ್ಯಕ್ಷ ಜಿ.ಚಿದಾನಂದಪ್ಪ, ಹೆಚ್.ಟಿ.ನಾಗಿರೆಡ್ಡಿ, ಖಜಾಂಚಿ ಕೆ.ಪಿ.ಬಸವರಾಜ, ಉಪಾಧ್ಯಕ್ಷರುಗಳಾದ ಆರ್.ಡಿ.ತಿಪ್ಪೇಸ್ವಾಮಿ, ಎನ್.ಬಿ.ವಿಶ್ವನಾಥ್ ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಎಸ್.ಎಸ್.ಎಲ್.ಸಿ. ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.



