ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ವೇತನ ಪರಿಷ್ಕರಣೆ ಎಂಬುದು ಯಾವಾಗಲೂ ಕಾರ್ಮಿಕರ ಜೀವನ ಮಟ್ಟ ಸುಧಾರಿಸುವಂತಿರಬೇಕು ಮತ್ತು ಅದು ಹೆಚ್ಚಳದ ಕಡೆಗಿರಬೇಕೇ ವಿನಃ ಕಡಿತದ ಕಡೆಗಲ್ಲ" ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯಪಟ್ಟಿದೆ.
ಗಾರ್ಮೆಂಟ್ಸ್ ಹಾಗೂ ಜವಳಿ ಉದ್ಯಮದ ನಾಲ್ಕು ಪ್ರಮುಖ ವಲಯಗಳ ಕನಿಷ್ಠ ವೇತನ ಪರಿಷ್ಕರಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ 2023ರ ಜನವರಿ 17ರ ಅಧಿಸೂಚನೆಗಳನ್ನು ಹೈಕೋರ್ಟ್ ಸಂಪೂರ್ಣವಾಗಿ ರದ್ದುಗೊಳಿಸಿದೆ.
ಗಾರ್ಮೆಂಟ್ಸ್ ಆಂಡ್ ಟೆಕ್ಸ್ಟೈಲ್ ವರ್ಕರ್ಸ್ ಯೂನಿಯನ್ ಸಲ್ಲಿಸಿದ್ದ ಸರಣಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಏಕಸದಸ್ಯ ಪೀಠವು ಕಾರ್ಮಿಕರ ಪರವಾಗಿ ಈ ಐತಿಹಾಸಿಕ ತೀರ್ಪು ನೀಡಿದೆ.
ಕೋರ್ಟ್ ಆಕ್ಷೇಪ ಮತ್ತು ಪ್ರಮುಖ ಆದೇಶಗಳು:
ನಿಯಮಗಳ ಉಲ್ಲಂಘನೆ: ಕನಿಷ್ಠ ವೇತನ ಕಾಯ್ದೆ 1948ರ ಸೆಕ್ಷನ್ 5(1)(b) ಪ್ರಕಾರ, ವೇತನ ಪರಿಷ್ಕರಿಸುವ ಮುನ್ನ ಪ್ರಸ್ತಾವನೆಯನ್ನು ಗಜೆಟ್ನಲ್ಲಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಕನಿಷ್ಠ 2 ತಿಂಗಳ ಕಾಲಾವಕಾಶ ನೀಡಬೇಕು. ಆದರೆ ಸರ್ಕಾರ ಈ ನಿಯಮ ಪಾಲಿಸದಿರುವುದು ಕಾನೂನುಬಾಹಿರ ಎಂದು ಕೋರ್ಟ್ ಹೇಳಿದೆ.
ಹಳೆಯ ದರದಲ್ಲೇ ವೇತನ ಪಾವತಿ: ಬಟ್ಟೆ ಡೈಯಿಂಗ್ ಮತ್ತು ಪ್ರಿಂಟಿಂಗ್, ರೇಷ್ಮೆ ಜವಳಿ ಹಾಗೂ ನೂಲಿನ ಗಿರಣಿ (ಸ್ಪಿನ್ನಿಂಗ್ ಮಿಲ್ಸ್) ಕಾರ್ಮಿಕರಿಗೆ ಡಿಸೆಂಬರ್ 30, 2017ರ ಅಧಿಸೂಚನೆ ಪ್ರಕಾರವೇ ವೇತನ ನೀಡಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಶೇ. 6ರಷ್ಟು ಬಡ್ಡಿ ಸಹಿತ ಬಾಕಿ ಪಾವತಿ: ಇದುವರೆಗೆ ಕಾರ್ಮಿಕರಿಗೆ ನೀಡದ ಬಾಕಿ ವೇತನದ ಮೊತ್ತವನ್ನು ವಾರ್ಷಿಕ ಶೇ. 6ರಷ್ಟು ಬಡ್ಡಿ ಸಮೇತ ಪಾವತಿಸುವಂತೆ ಕಾರ್ಖಾನೆ ಮಾಲೀಕರಿಗೆ ಹೈಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
6 ತಿಂಗಳಲ್ಲಿ ಹೊಸ ಪ್ರಕ್ರಿಯೆ ಮುಕ್ತಾಯ: ಗಾರ್ಮೆಂಟ್ಸ್ ಉದ್ಯಮದ ಕಾರ್ಮಿಕರಿಗೆ 2014ರ ನಂತರ ಸೂಕ್ತ ವೇತನ ಪರಿಷ್ಕರಣೆಯಾಗಿಲ್ಲ. ಆದ್ದರಿಂದ ಇಂದಿನಿಂದ 6 ತಿಂಗಳ ಒಳಗಾಗಿ 1948ರ ಕಾಯ್ದೆಯ ನಿಯಮಾವಳಿಗಳ ಪ್ರಕಾರವೇ ಹೊಸದಾಗಿ ವೇತನ ಪರಿಷ್ಕರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಗಡುವು ವಿಧಿಸಲಾಗಿದೆ.
"ಕಾನೂನು ಬದಲಾದರೂ ಹಕ್ಕು ಕಸಿಯುವಂತಿಲ್ಲ":
"ಹೊಸ ವೇತನ ಸಂಹಿತೆಯು ನವೆಂಬರ್ 21, 2025 ರಿಂದ ಜಾರಿಗೆ ಬಂದಿದ್ದರೂ, ಅದಕ್ಕಿಂತ ಮುಂಚಿತವಾಗಿ ಬಾಕಿ ಉಳಿದಿರುವ ಕಾರ್ಮಿಕರ ಹಕ್ಕುಗಳು ಮತ್ತು ಪ್ರಕರಣಗಳು ಹಳೆಯ ಕಾಯ್ದೆಯಡಿಯಲ್ಲೇ ಇತ್ಯರ್ಥವಾಗಬೇಕು. ಕಾನೂನು ಬದಲಾಗಿದೆ ಎಂಬ ಕಾರಣಕ್ಕೆ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ" ಎಂದು ಹೈಕೋರ್ಟ್ ಮಾರ್ಮಿಕವಾಗಿ ಹೇಳಿದೆ.
ಪ್ರಕರಣದ ಹಿನ್ನೆಲೆ ಏನು?:
ರಾಜ್ಯ ಸರ್ಕಾರವು 2023ರ ಜನವರಿ 17ರಂದು ಅಧಿಸೂಚನೆ ಹೊರಡಿಸಿ ಜವಳಿ ಹಾಗೂ ಗಾರ್ಮೆಂಟ್ಸ್ ಉದ್ಯಮಗಳ ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಿಸಿತ್ತು. ಆದರೆ, ಈ ಪರಿಷ್ಕರಣೆಯು ಆಶ್ಚರ್ಯಕರ ಎಂಬಂತೆ 2017ರಲ್ಲಿ ನಿಗದಿಪಡಿಸಲಾಗಿದ್ದ ವೇತನಕ್ಕಿಂತಲೂ ಕಡಿಮೆ ಇತ್ತು!.
ಮಣ್ಣು, ಸೆರಾಮಿಕ್ಸ್ನಂತಹ ಇತರ ಕೈಗಾರಿಕೆಗಳಿಗೆ ಹೋಲಿಸಿದರೆ ಜವಳಿ ಹಾಗೂ ಗಾರ್ಮೆಂಟ್ಸ್ ಕಾರ್ಮಿಕರಿಗೆ ಅರ್ಧದಷ್ಟು ಮಾತ್ರ ವೇತನ ನಿಗದಿಪಡಿಸಿ ತಾರತಮ್ಯ ಎಸಗಲಾಗಿತ್ತು. ಗಾರ್ಮೆಂಟ್ಸ್ ಉದ್ಯಮದಲ್ಲಿ ಕೆಲಸ ಮಾಡುವ ಸುಮಾರು 7 ಲಕ್ಷ ಕಾರ್ಮಿಕರಲ್ಲಿ ಶೇ. 90ಕ್ಕಿಂತ ಹೆಚ್ಚು ಜನ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಾಗಿದ್ದು, ಅವರಿಗೆ ಆಗಿರುವ ಈ ಅನ್ಯಾಯ ಪ್ರಶ್ನಿಸಿ ಕಾರ್ಮಿಕ ಸಂಘಟನೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ಇದೀಗ ನ್ಯಾಯಾಲಯವು ಸರ್ಕಾರಕ್ಕೆ ತಪರಾಕಿ ನೀಡಿ, ಶೋಷಿತ ಮಹಿಳಾ ಕಾರ್ಮಿಕರ ಹಿತ ಕಾಯುವ ನಿಟ್ಟಿನಲ್ಲಿ ಭರವಸೆಯ ತೀರ್ಪು ನೀಡಿದೆ.



