ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನನಗೆ ಸಿಗುವ ಪೂರ್ಣ ವಿಶ್ವಾಸವಿದ್ದು, ಈಗಾಗಲೇ ತಾಲೂಕಿನಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿ ಸಂಘಟನೆಗೆ ಚಾಲನೆ ನೀಡಿದ್ದೇನೆ" ಎಂದು ಕೆಪಿಸಿಸಿ ಉಪಾಧ್ಯಕ್ಷ ಆರ್. ಮಂಜುನಾಥ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅನಿರೀಕ್ಷಿತ ಚುನಾವಣೆ - ಪಕ್ಷ ಸಂಘಟನೆಗೆ ಸಂಕಲ್ಪ
"ಈ ಉಪಚುನಾವಣೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಇದು ತಾಲೂಕಿಗೆ ಅನಿರೀಕ್ಷಿತವಾಗಿ ಬಂದಿದೆ. ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಕೆಲಸ ಸ್ವಲ್ಪ ಹಿಂದುಳಿದಿದ್ದು, ಈಗ ತಳಮಟ್ಟದಿಂದ ಕಾಂಗ್ರೆಸ್ ಅನ್ನು ಬಲಿಷ್ಠವಾಗಿ ಕಟ್ಟುವ ಸಂಕಲ್ಪ ಮಾಡಿದ್ದೇನೆ. ಕಳೆದ 40 ವರ್ಷಗಳಿಂದ ಪಕ್ಷದ ವಿವಿಧ ಹುದ್ದೆಗಳಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. 1994ರಲ್ಲಿ ಪಕ್ಷ ಸಂಕಷ್ಟದಲ್ಲಿದ್ದಾಗ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷನಾಗಿ ಸಕರಾತ್ಮಕವಾಗಿ ಪಕ್ಷ ಸಂಘಟಿಸಲು ಇಡೀ ರಾಜ್ಯದಲ್ಲಿ ಯುವಕರನ್ನು ಪಕ್ಷದತ್ತ ಸೆಳೆದಿದ್ದೆ. ನಂತರ 1999ರಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಅಲ್ಪ ಮತಗಳ ಅಂತರದಿಂದ ಸೋತರೂ ಧೃತಿಗೆಡದೆ ಪಕ್ಷಕ್ಕಾಗಿ ನಿರಂತರವಾಗಿ ದುಡಿದಿದ್ದೇನೆ" ಎಂದು ತಮ್ಮ ರಾಜಕೀಯ ಹಾದಿಯನ್ನು ಆರ್.ಮಂಜುನಾಥ್ ಅವರು ಸ್ಮರಿಸಿದರು.
ಮೃತ ಶಾಸಕರ ಪರಿವಾರಕ್ಕೇ ಟಿಕೆಟ್ ಎಂಬ ನಿಯಮವಿಲ್ಲ:
ಟಿಕೆಟ್ ಹಂಚಿಕೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, "ಮೃತ ಶಾಸಕರ ಪರಿವಾರದವರಿಗೇ ಟಿಕೆಟ್ ನೀಡಬೇಕು ಎಂಬ ಯಾವುದೇ ಕಡ್ಡಾಯ ನಿಯಮ ಪಕ್ಷದ ಸಂವಿಧಾನದಲ್ಲಿ ಇಲ್ಲ. ಹೈಕಮಾಂಡ್ ಸಮಯ ಮತ್ತು ಸಂದರ್ಭಕ್ಕೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳುತ್ತದೆ.

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಯಾವುದೇ ಕಾರಣಕ್ಕೂ ಪಕ್ಷದ ಗೆರೆ ದಾಟುವುದಿಲ್ಲ. ತಾಲೂಕು ಕಾಂಗ್ರೆಸ್ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ" ಎಂದು ಸ್ಪಷ್ಟಪಡಿಸಿದರು.
ಕುಡಿಯುವ ನೀರು ಹಾಗೂ ಸಕ್ಕರೆ ಕಾರ್ಖಾನೆ ಪ್ರಮುಖ ಅಜೆಂಡಾ:
ಕ್ಷೇತ್ರದ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಆರ್. ಮಂಜುನಾಥ್, "ವಿವಿ ಸಾಗರ ಜಲಾಶಯವನ್ನು ಈ ಭಾಗದ ಜನರ ಒಳಿತಿಗಾಗಿ ನಿರ್ಮಿಸಿದ್ದರೂ, ಇಂದು ಸ್ಥಳೀಯರಿಗೇ ಕುಡಿಯುವ ನೀರಿಲ್ಲದಂತಾಗಿದೆ. ಮುಂಬರುವ ಚುನಾವಣೆಯಲ್ಲಿ ನೀರಿನ ಸಮಸ್ಯೆಯೇ ಪ್ರಮುಖ ಪಾತ್ರ ವಹಿಸಲಿದೆ. ಈ ಕುರಿತು ಶೀಘ್ರದಲ್ಲೇ ಜಲಸಂಪನ್ಮೂಲ ಸಚಿವರು ಮತ್ತು ಮುಖ್ಯಮಂತ್ರಿಗಳ ಬಳಿ ರೈತರ ನಿಯೋಗ ಕೊಂಡೊಯ್ದು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಲಾಗುವುದು" ಎಂದು ಮಂಜುನಾಥ್ ಭರವಸೆ ನೀಡಿದರು.
ವಾಣಿ ಸಕ್ಕರೆ ಕಾರ್ಖಾನೆ ಪುನಶ್ಚೇತನ: "ತಾಲೂಕಿನ ರೈತರ ಜೀವನಾಡಿಯಾಗಿದ್ದ ಸಕ್ಕರೆ ಕಾರ್ಖಾನೆ ಸದ್ಯ ಸ್ಥಗಿತಗೊಂಡಿದ್ದು, ಅದರ ಪುನಶ್ಚೇತನದ ಕುರಿತು ನಿಯೋಗ ತೆರಳಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು" ಎಂದು ಕೆಪಿಸಿಸಿ ಉಪಾಧ್ಯಕ್ಷ ಆರ್.ಮಂಜುನಾಥ್ ಭರವಸೆ ನೀಡಿದರು.
ಮತದಾರರ ಹಕ್ಕು ರಕ್ಷಣೆಗೆ ಕರೆ-
ಕಾಂಗ್ರೆಸ್ ಬೆಂಬಲಿತ ಬಡವರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆಯುವ ಹುನ್ನಾರ ನಡೆಯುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, "ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಇಂತಹ ತಂತ್ರ ಬಳಸಿ ಮತಗಳನ್ನು ಡಿಲೀಟ್ ಮಾಡಲಾಗಿತ್ತು. ಹಿರಿಯೂರಿನಲ್ಲೂ ಇಂತಹ ಪ್ರಯತ್ನಗಳು ನಡೆಯದಂತೆ ಕಾಂಗ್ರೆಸ್ ಕಾರ್ಯಕರ್ತರು ಮತದಾರರ ಪಟ್ಟಿಗಳ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು" ಎಂದು ಕರೆ ನೀಡಿದರು.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಬಡವರ ಕೈ ಹಿಡಿದಿದ್ದು, ಪಕ್ಷ ಸದಾ ಬಡವರ ಪರವಾಗಿ ನಿಲ್ಲಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಬಿ.ಎಚ್. ಮಂಜುನಾಥ್, ಮಾಜಿ ನಗರಸಭಾ ಸದಸ್ಯ ಪದ್ಮನಾಭ್, ನಗರ ಟಿಎಪಿಸಿಎಂಎಸ್ ಅಧ್ಯಕ್ಷ ಸಾದತ್ ಉಲ್ಲಾ, ರೈತ ಮುಖಂಡ ಎಚ್.ಆರ್. ತಿಮ್ಮಯ್ಯ, ಆಲೂರು ಕಲಾವತಿ, ಗೀತಾ, ದಲಿತ ಮುಖಂಡ ಓಬಳೇಶ್, ದಾದಾಪೀರ್, ಮಹಮ್ಮದ್ ರಫೀಕ್, ಧ್ರುವ ಕುಮಾರ್, ಆದಿವಾಲ ಸುಬಾನ್ ಸಾಬ್, ಡಾ.ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



