ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಎಚ್ಚೆತ್ತುಕೊಂಡಿರುವ ಹಿರಿಯೂರು ನಗರಸಭೆಯು, ನಗರದ ಪ್ರಮುಖ ರಾಜಕಾಲುವೆಗಳ ಸ್ವಚ್ಛತಾ ಕಾರ್ಯಕ್ಕೆ ಭರದಿಂದ ಚಾಲನೆ ನೀಡಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ರಾಜಕಾಲುವೆಗಳು ಕಟ್ಟಿಕೊಂಡು ಸಾರ್ವಜನಿಕರಿಗೆ ಎದುರಾಗುತ್ತಿದ್ದ ದೊಡ್ಡ ಮಟ್ಟದ ಅನಾಹುತ ಹಾಗೂ ತೊಂದರೆಗಳನ್ನು ತಪ್ಪಿಸಲು ನಗರಸಭೆ ಈ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ನಗರದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ರಾಜಕಾಲುವೆಗಳು ಹೂಳು ಮತ್ತು ಕಸದಿಂದ ತುಂಬಿ ಹೋಗಿದ್ದವು. ಇದರಿಂದಾಗಿ ಭಾರಿ ಮಳೆಯಾದಾಗ ನೀರು ಸರಾಗವಾಗಿ ಹರಿಯದೆ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯಾಗುತ್ತಿತ್ತು.
ಈ ಸಮಸ್ಯೆಯ ಗಂಭೀರತೆಯನ್ನು ಅರಿತ ನಗರಸಭೆ ಪೌರಾಯುಕ್ತರು, ಅಧಿಕಾರಿಗಳು ಹಾಗೂ ಪೌರಕಾರ್ಮಿಕರ ತಂಡವು ಮಳೆಗಾಲ ಆರಂಭವಾಗುವ ಮುಂಚಿತವಾಗಿಯೇ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
ಮುಂಜಾಗ್ರತಾ ಕ್ರಮವಾಗಿ ಸ್ವಚ್ಛತಾ ಕಾರ್ಯ:
ಪ್ರಸ್ತುತ ನಗರದ ನಂಜುಂಡೇಶ್ವರ ಟಾಕೀಸ್ ಬಳಿ ಹಾಗೂ ವಾಗ್ದೇವಿ ಶಾಲೆಯ ಹಿಂಭಾಗ ಸೇರಿದಂತೆ ನಗರದ ವಿವಿಧೆಡೆ ರಾಜಕಾಲುವೆಗಳಲ್ಲಿ ಜಮೆಯಾಗಿದ್ದ ಕಸ, ಹೂಳು ಮತ್ತು ಗಿಡಗಂಟೆಗಳನ್ನು ತೆರವುಗೊಳಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ.
ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಪ್ರವಾಹದಂತಹ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆಯು ಅತ್ಯಂತ ಜವಾಬ್ದಾರಿಯುತ ಹಾಗೂ ಶ್ಲಾಘನೀಯ ಕೆಲಸ ನಿರ್ವಹಿಸುತ್ತಿದೆ.
ಪೌರಾಯುಕ್ತ ಎ. ವಾಸೀಂ ಕಾರ್ಯಕ್ಕೆ ಮೆಚ್ಚುಗೆ:
ಸಾರ್ವಜನಿಕರ ದೂರುಗಳಿಗೆ ಕಾಯದೆ, ಮಳೆಗಾಲದ ಮುನ್ಸೂಚನೆ ಅರಿತು ಸ್ವತಃ ತಾವೇ ಮುಂಚೂಣಿಯಲ್ಲಿ ನಿಂತು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿರುವ ನಗರಸಭೆ ಪೌರಾಯುಕ್ತರಾದ ಎ. ವಾಸೀಂ ಅವರ ದಕ್ಷ ನಡೆ ಹಾಗೂ ದೂರದೃಷ್ಟಿಯ ಕಾರ್ಯವೈಖರಿಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಧಿಕಾರಿಗಳು ಮತ್ತು ಪೌರಕಾರ್ಮಿಕರ ಈ ಜಂಟಿ ಕಾರ್ಯಾಚರಣೆಯು ಸಾರ್ವಜನಿಕರ ನೆಮ್ಮದಿಗೆ ಕಾರಣವಾಗಿದೆ.



