ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತ ನೀಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಪಣತೊಟ್ಟಿದ್ದಾರೆ. "ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಂದ ಯಾರಾದರೂ ಕೇವಲ 10 ರೂಪಾಯಿ ಲಂಚ ಕೇಳಿದರೂ ತಕ್ಷಣ ಫೋನ್ ಮಾಡಿ ದೂರು ನೀಡಿ" ಎಂದು ಸಾರ್ವಜನಿಕರಿಗೆ ಕರೆ ನೀಡುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಸಿಎಂ ನೇರ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಡಳಿತಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇತ್ತೀಚೆಗೆ ಉನ್ನತ ಮಟ್ಟದ ಸುದೀರ್ಘ ಸಭೆ ನಡೆಯಿತು. ರಾಜ್ಯದ ಎಲ್ಲಾ ಜಿಲ್ಲೆಗಳ ಡಿಸಿ, ಎಸ್ಪಿ, ಜಿಪಂ ಸಿಇಒಗಳು ಹಾಗೂ ಅರಣ್ಯ ಇಲಾಖೆಯ ಡಿಸಿಎಫ್ಗಳು ಪಾಲ್ಗೊಂಡಿದ್ದ ಈ ಮೊದಲ ಸಭೆಯಲ್ಲಿ ಸಿಎಂ ಹಲವು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದಾರೆ.
ದೂರು ಸಂಖ್ಯೆಯ ಬೋರ್ಡ್ ಕಡ್ಡಾಯ: ಜಿಲ್ಲಾಡಳಿತ, ತಾಲೂಕು ಮತ್ತು ನಾಡ ಕಚೇರಿಗಳು ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಕೆಲಸಕ್ಕೆ ಲಂಚ ಕೇಳಿದರೆ ದೂರು ನೀಡಲು ಅನುವಾಗುವಂತೆ, ಫೋನ್ ನಂಬರ್ ಸಹಿತ ಇರುವ ಮಾಹಿತಿ ಫಲಕಗಳನ್ನು (ಬೋರ್ಡ್) ಪ್ರತಿಯೊಂದು ಕಚೇರಿಯಲ್ಲೂ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಒತ್ತಡಕ್ಕೆ ಮಣಿಯದೆ ಕೆಲಸ ಮಾಡಿ: "ನನಗೆ ಯಾವುದೇ ವೈಯಕ್ತಿಕ ನಿರೀಕ್ಷೆಗಳಿಲ್ಲ. ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡಬೇಕಿದೆ. ಅಧಿಕಾರಿಗಳು ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ ಪಾರದರ್ಶಕವಾಗಿ ಕೆಲಸ ಮಾಡಬೇಕು" ಎಂದು ಸಭೆಯ ಆರಂಭದಲ್ಲೇ ಅಧಿಕಾರಿಗಳಿಗೆ ಸಿಎಂ ಸ್ಪಷ್ಟಪಡಿಸಿದರು.
ಶೀಘ್ರದಲ್ಲೇ ಸಿಎಂ ಜಿಲ್ಲಾ ಪ್ರವಾಸ: ರಾಜ್ಯದ ವಿವಿಧೆಡೆ ಇರುವ ಮಳೆ ಅಭಾವ, ಪ್ರವಾಹ ಪರಿಸ್ಥಿತಿ ಹಾಗೂ ಪ್ರಕೃತಿ ವಿಕೋಪ ಎದುರಿಸಲು ಮಾಡಿಕೊಂಡಿರುವ ಪೂರ್ವ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ, ಸಮಸ್ಯೆಗಳನ್ನು ಖುದ್ದು ಪರಿಶೀಲಿಸಲು ಶೀಘ್ರದಲ್ಲೇ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಳ್ಳುವುದಾಗಿ ಪ್ರಕಟಿಸಿದ್ದಾರೆ.
ಮುಖ್ಯಮಂತ್ರಿಯವರ ಸಂದೇಶ: "ಭ್ರಷ್ಟಾಚಾರ ಮುಕ್ತ ಆಡಳಿತವೇ ನಮ್ಮ ಸರ್ಕಾರದ ಮೊದಲ ಆದ್ಯತೆ. ಸಾರ್ವಜನಿಕರ ಕೆಲಸ ಕಾರ್ಯಗಳು ಯಾವುದೇ ವಿಳಂಬವಿಲ್ಲದೆ, ಪಾರದರ್ಶಕವಾಗಿ ನಡೆಯಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ."
ಮುಖ್ಯಮಂತ್ರಿಗಳು ಜಿಲ್ಲಾಡಳಿತಗಳೊಂದಿಗೆ ನಡೆಸಿದ ಈ ಚೊಚ್ಚಲ ಸಭೆಯಲ್ಲಿ ಸರ್ಕಾರದ ಬಹುತೇಕ ಎಲ್ಲಾ ಪ್ರಮುಖ ಸಚಿವರಾದ ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಸತೀಶ್ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ಖರ್ಗೆ, ಯು.ಟಿ.ಖಾದರ್, ಡಾ.ಶರಣ ಪ್ರಕಾಶ್ಪಾಟೀಲ್, ಕೆ.ಎಚ್.ಮುನಿಯಪ್ಪ, ಬೈರತಿ ಸುರೇಶ್, ಯತೀಂದ್ರ ಸಿದ್ದರಾಮಯ್ಯ ಹಾಗೂ ಈಶ್ವರ್ಖಂಡ್ರೆ ಅವರು ಉಪಸ್ಥಿತರಿದ್ದು, ಆಡಳಿತ ಸುಧಾರಣೆಯ ಚರ್ಚೆಯಲ್ಲಿ ಕೈಜೋಡಿಸಿದರು.



